ಸಂವಿಧಾನವು ಏಕತೆ ಮತ್ತು ಸಮಗ್ರತೆ ಎತ್ತಿ ಹಿಡಿಯುವ ಮಹಾಗ್ರಂಥವಾಗಿದೆ.

ಕೊಪ್ಪಳ: ಮಹಿಳೆಯರು, ಮಕ್ಕಳು, ಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ಸಮುದಾಯಗಳಲ್ಲಿ ನ್ಯಾಯ, ಸ್ವಾತಂತ್ರ‍್ಯ ಮತ್ತು ಸಮಾನತೆ ಸ್ಥಾಪಿಸುವಲ್ಲಿ ಸಂವಿಧಾನ ಬುನಾದಿಯಾಗಿದ್ದು, ಯುವಪೀಳಿಗೆ ಸಂವಿಧಾನ ಅರ್ಥೈಸಿಕೊಂಡು, ಅನುಸರಣೆ ಮಾಡುವುದು ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ್ ಹೇಳಿದರು.

ನಗರದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನವು ಏಕತೆ ಮತ್ತು ಸಮಗ್ರತೆ ಎತ್ತಿ ಹಿಡಿಯುವ ಮಹಾಗ್ರಂಥವಾಗಿದೆ. ಪ್ರತಿಯೊಬ್ಬರೂ ಹಕ್ಕುಗಳ ಜತೆ ಕರ್ತವ್ಯ ಸಹ ಪಾಲಿಸಬೇಕು. ಸಂವಿಧಾನದ ಮೂಲ ಆಶಯ ಗೌರವಿಸಬೇಕೆಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಡೀನ್ ಪ್ರೊ.ವಿ.ಸುದೇಶ ಮಾತನಾಡಿ, ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಮುಂದುವರೆಯುತ್ತಿರುವುದಕ್ಕೆ ಶಾಂತಿಯುತ ರಾಷ್ಟ್ರವಾಗಿರುವುದಕ್ಕೆ ಮೂಲ ಕಾರಣ ನಮ್ಮ ಸಂವಿಧಾನ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ಮಾತನಾಡಿ, ಈ ನೆಲದ ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಧರ್ಮಕ್ಕಿಂತಲೂ ಸಂವಿಧಾನ, ಅದರ ಪಾಲನೆ ಅವಶ್ಯಕತೆಯಾಗಿದೆ ಎಂದು ತಿಳಿಸಿದರು.

ಕುಲಪತಿ ಪ್ರೊ. ಬಿ.ಕೆ. ರವಿ ಮಾತನಾಡಿ, ಅವಕಾಶ ವಂಚಿತ ಸಮುದಾಯಕ್ಕೆ ಸಂವಿಧಾನ ಧ್ವನಿಯಾಗಿದೆ. ಅಂಬೇಡ್ಕರ್‌ ನೀಡಿದ ಈ ಸಂವಿಧಾನದಿಂದಾಗಿಯೇ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ‍್ಯ ಲಭಿಸಿದೆ. ಸಂವಿಧಾನದ ಆಶಯಗಳ ಸಮಗ್ರ ಪಾಲನೆಯಿಂದ ಸಮ ಸಮಾಜ ನಿರ್ಮಾಣ ಸಾಧ್ಯವಿದ್ದು, ಪ್ರತಿಯೊಬ್ಬರೂ ಸಂವಿಧಾನ ಅಧ್ಯಯನ ಮಾಡಬೇಕೆಂದರು.

ಕೋಲಾರದ ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಗೋಪಾಲ ಅಂಜನಪ್ಪ ಮಾತನಾಡಿದರು.

ಸಂವಿಧಾನದ ಪೀಠಿಕೆ ಬೋಧನೆ, ವಿದ್ಯಾರ್ಥಿಗಳಿಂದ ಪ್ರಮಾಣ ವಚನ ಹಾಗೂ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪನಮನ ಕಾರ್ಯಕ್ರಮಗಳು ಸಹ ನಡೆದವು.

ವಿವಿಯ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ನಾಡಗೀತೆ ನಡೆಯಿತು. ಕೊಪ್ಪಳ ವಿವಿ ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೇಟಿ ಸಂವಿಧಾನದ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಸುಧಾಕರ ಕಾರ್ಯಕ್ರಮ ನಿರೂಪಿಸಿದರು, ಡಾ ಬಸವರಾಜ ಗಡಾದ ವಂದಿಸಿದರು.