ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುತ್ತಿಗೆದಾರರು ಕ್ರಿಯಾ ಯೋಜನೆಯನ್ನೇ ಮಾಡಿಸಿದೆ ಅಭಿವೃದ್ಧಿ ಕಾಮಗಾರಿ ಮಾಡಿ ಹಣ ಲೂಟಿ ಮಾಡಿದ್ದಾರೆ ಎಂದು ಗ್ರಾಮದ ಮುಖಂಡ ನಿತಿನ್ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಮಾಡಿದ್ದರೂ ನಿಯಮಾನುಸಾರ ಕಾಮಗಾರಿ ಮಾಡಿಲ್ಲ. ಯಾವುದೇ ಕಾಮಗಾರಿ ಮಾಡುವ ಮೊದಲು ಕ್ರಿಯಾಯೋಜನೆ ಮಾಡಬೇಕು. ಅದರಲ್ಲಿ ಕಾಮಗಾರಿಗೆ ಯಾವ ಇಲಾಖೆಯಿಂದ ಎಷ್ಟು ಅನುದಾನ ಬಿಡುಗಡೆಯಾಗಿದೆ ಎನ್ನುವುದು ಸೇರಿದಂತೆ ಎಲ್ಲಾ ಮಾಹಿತಿಯೂ ಇರಬೇಕು. ಆದರೆ, ಗುತ್ತಿಗೆದಾರ ಗುತ್ತಿಗೆದಾರ ಬಲರಾಮೇಗೌಡ ಮಾಡಿಲ್ಲ ಎಂದು ದೂರಿದರು.

ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಬಿಡುಗಡೆಯಾಗಿರುವುದು 28 ಲಕ್ಷ ಅನುದಾನ ಮಾತ್ರ. ಈ ಯೋಜನೆಯಗೆ 2023ರಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಶಾಸಕರಾಗಿದ್ದಾಗ ಕ್ರಿಯಾಯೋಜನೆ ಸಲ್ಲಿಸಿ ಸಿ.ಎಸ್.ಪುಟ್ಟರಾಜು ಅವರೇ ಈ ಯೋಜನೆಗೆ ಭೂಮಿಪೂಜೆ ಮಾಡಿದ್ದರು. ಆದರೆ, ಈ ವಿಚಾರವನ್ನು ಶಾಸಕರ ಗಮನಕ್ಕೆ ತರದೆ ಇಲ್ಲಿನ ಕಾರ್ಯಕರ್ತರು 28 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ಮಾಡಿಸಿದ್ದಾರೆ ಎಂದರು.

ಹೆಚ್ಚುವರಿಯಾಗಿ 1.20 ಕೋಟಿ ರು. ವೆಚ್ಚದ ಕಾಮಗಾರಿ ಎಂಬುದಾಗಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಜತೆಗೆ ಗುತ್ತಿಗೆದಾರ ಮಾಧ್ಯಮಗಳಿಗೆ ಸುಳ್ಳು ಕಾಮಗಾರಿ ಕ್ರಿಯಾಯೋಜನೆ ಮಾಹಿತಿ ದಾಖಲೆ ನೀಡಿದ್ದಾರೆ. ಆ ದಾಖಲೆ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಇದನ್ನು ನಾವು ನೀಡಿಲ್ಲ ಎಂಬುದಾಗಿ ತಿಳಿಸುತ್ತಿದ್ದಾರೆ. ಗುತ್ತಿಗೆದಾರ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ರಸ್ತೆ ಕಾಮಗಾರಿ ಅಪೂರ್ಣ ಮಾಡಿದ್ದಾರೆ ಎಂದು ಕಿಡಿಕಾರಿದರು.


ಒಂದೇ ಯೋಜನೆಗೆ ಎರಡು ಕ್ರಿಯಾಯೋಜನೆ ತಯಾರಿಸಿ ಹಣಲೂಟಿ ಮಾಡಿದ್ದಾರೆ. ಗ್ರಾಪಂ ಮಾಜಿ ಅಧ್ಯಕ್ಷರೆ ತಾಯಿ ಹೆಸರಿಗೆ ವಸತಿ ಯೋಜನೆ ತೆಗೆದುಕೊಂಡಿದ್ದಾರೆ. ಚಿಕ್ಕಮರಳಿ ಗ್ರಾಮದ ಕೆರೆಯನ್ನು ನರೇಗ ಯೋಜನೆ 7 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ 6.92 ಲಕ್ಷ ಪಡೆದುಕೊಂಡಿದ್ದಾರೆ. ಈ ಕೆಲಸ ಯಂತ್ರಗಳ ಮೂಲಕ ನಡೆದಿದೆ ಎಂದರು.

ಯೋಜನೆಯ 4 ಕಾಮಗಾರಿಯನ್ನು ಬಾಕಿ ಉಳಿಸಿದ್ದಾರೆ. ಆದರೆ, ಹಣವನ್ನು ಸಂಪೂರ್ಣ ಪಡೆದು ನುಂಗಿ ಶಾಸಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಶಾಸಕರು ಸಹ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ನಾವು ಸಹ ರೈತಸಂಘದ ಕಾರ್ಯಕರ್ತೆ ಇವರ ನಡೆ ನಮಗೆ ಇಷ್ಟವಾಗುತ್ತಿಲ್ಲ. ಹಾಗಾಗಿ ನಾನು ಪಕ್ಷದಿಂದ ಹೊರಬರುತ್ತಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರು, ಸಿ.ಕೆ.ಸುರೇಂದ್ರ,ಗ್ರಾಪಂ ಮಾಜಿ ಉಪಾಧ್ಯಕ್ಷ ಈರಾಚಾರ್, ಸಿ.ಪಿ.ಕೃಷ್ಣಕುಮಾರ್, ಸಿ.ಪ್ರಕಾಶ್, ಕಿರಣ್, ಸತೀಶ್, ಲೋಕೇಶ್, ಶೇಖರ, ವೆಂಕಟೇಶ್,ಉದೇಶ ಸೇರಿದಂತೆ ಹಲವು ಮುಖಂಡರು ಇದ್ದರು.