ಕನ್ನಡಪ್ರಭ ವಾರ್ತೆ ಗುಬ್ಬಿ

ಗುಬ್ಬಿ ಶಾಸಕರಿಗೆ ರೈತರ ನೀರಿನ ಶಾಪದಿಂದಲೇ ಮಂತ್ರಿಗಿರಿ ಕೈ ತಪ್ಪಿದೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಛೇಡಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾಲೂಕಿನ ರೈತರು ನಿಮ್ಮ ಶಾಸಕ ಸ್ಥಾನಕ್ಕೆ ಬೆಲೆಕೊಟ್ಟು ನಂಬಿ ಕೊಟ್ಟ ತೂಬಿನ ಬೀಗದ ಕೀಲಿಯನ್ನು ಸ್ವಾರ್ಥಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ಅಡವಿಟ್ಟು ಅವರು ತಾಲೂಕಿಗೆ ಬಂದಾಗ ಪಕ್ಕದಲ್ಲಿಯೇ ಕುಳಿತು ತುಟಿ ಬಿಚ್ಚದೇ ಈಗ ಮಂತ್ರಿಗಿರಿ ಸಿಗಲಿಲ್ಲ ಎಂದು ವಿರೋಧ ಮಾಡುತ್ತಿರುವ ನಿಮ್ಮ ಗೋಸೊಂಬೆ ಆಟ ಎಂದು ತಾಲೂಕಿನ ಜನರಿಗೆ ಅರ್ಥವಾಗಿದೆ ಎಂದರು. ನೀರಿನ ಶಾಪ ತಟ್ಟುವ ಮೊದಲು ರೈತರ ಹೋರಾಟಕ್ಕೆ ಧುಮುಕಬೇಕಿತ್ತು. ಅಂದು ಚಾನಲ್ ಮೇಲೆ ಮಲಗಿ ನೀರು ಬಿಡಿಸಿದ್ದೆ ಎನ್ನುವ ಶಾಸಕರು ಇಂದು ಡಿಕೆಶಿ ಮನೆ ಮುಂದೆ ಮಲಗಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲಿ ನೋಡೋಣ ಎಂದು ಸವಾಲೆಸೆದರು. ತಾಲೂಕಿನ ಎಲ್ಲಾ ರೈತರು ಒಗ್ಗೂಡಿ ಹೋರಾಟ ಮಾಡಿದರೆ ಅವರನ್ನೆಲ್ಲ ಡೋಂಗಿ ಹೋರಾಟಗಾರರು ಎನ್ನುವ ಶಾಸಕರು. ಯಾರಾದರೂ ನಾಮಕರಣಕ್ಕೆ ಕರೆದರೆ ಅಲ್ಲಿಗೆ ಹೋಗಿ ಆ ಮಗು ನನ್ನದೇ ಎನ್ನುವ ರೀತಿವರ್ತಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಕುಡಿಯುವ ನೀರಿನ ಯೋಜನೆಗಳನ್ನು ನಾನೇ ತಂದಿದ್ದು ಟೇಪ್ ಕತ್ತರಿಸಿ ಉದ್ಘಾಟನೆ ಮಾಡುತ್ತೀರಿ. ಮಾಗಡಿ ಬಾಲಕೃಷ್ಣ ಹೇಳಿಕೆ ನೀಡಿದ ನಂತರ ಇವರು ಹೇಮಾವತಿ ಬಿಡಲ್ಲ ಎಂದು ಗೋಸಂಬಿ ಆಟ ಆಡುತ್ತಿದ್ದಾರೆ. ಕುಣಿಗಲ್ ರಂಗನಾಥ್ ಹಾಗೂ ಮಾಗಡಿ ಬಾಲಕೃಷ್ಣ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ. ಜವಾಬ್ದಾರಿ ಹೊತ್ತ ನಮ್ಮ ಶಾಸಕರು ನೀರಿನ ಕುರಿತ ನ್ಯಾಯಾಲಯ ಹೋರಾಟ ಬಗ್ಗೆ ಈವರೆವಿಗೂ ಏನಾಗಿದೆ ಎಂಬ ಮಾಹಿತಿ ಸಹ ಪಡೆದಿಲ್ಲ. ಹೋರಾಟಗಾರರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಲ್ಲ. ಈಗ ಎಲ್ಲಿಲ್ಲದ ಆಸಕ್ತಿ ಬಂದಂತೆ ತೋರುತ್ತಾ ಮುಖ್ಯಮಂತ್ರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಸಿ.ಆರ್.ಶಂಕರ್ ಕುಮಾರ್ ನೀರಾವರಿ ಹೋರಾಟಗಾರ 22 ವರ್ಷದ ಹಿಂದೆ ವೈ.ಕೆ.ರಾಮಯ್ಯ ಅವರ ನೇತೃತ್ವದಲ್ಲಿ ಹೇಮಾವತಿ ಹೋರಾಟ ನಡೆದು 17 ದಿನಗಳ ಜೈಲು ವಾಸ ಮಾಡಿದ ತಾಲೂಕಿನ ಹಲವು ಮುಖಂಡರು ಇದ್ದಾರೆ. ಈ ಪೈಕಿ ನಾನು ಕೂಡ ಹೇಮಾವತಿ ಹೋರಾಟ ಅಂದಿನಿಂದಲೂ ಮಾಡಿದ್ದೇವೆ. ರಸ್ತೆಗೆ ಮಣ್ಣು ಸುರಿದು ತಿಂಗಳು ಪ್ರತಿಭಟನೆ ಮಾಡಿದ ಇತಿಹಾಸ ನಮ್ಮಲ್ಲಿದೆ. 63 ಮಂದಿ ನ್ಯಾಯಾಲಯಕ್ಕೆ ವರ್ಷಗಟ್ಟಲೆ ಅಲೆದಿದ್ದಾರೆ. ಈಗ ಅವೈಜ್ಞಾನಿಕ ಪೈಪ್ ಲೈನ್ ವಿರೋಧಿಸಿ ಒಂದೂವರೆ ವರ್ಷದ ಹೋರಾಟ ಕೂಡಾ ನೀರಿಗಾಗಿ ನಡೆದಿದೆ. ಈ ಹೋರಾಟವನ್ನು ಡೋಂಗಿ ಎನ್ನುವ ಶಾಸಕರು ದ್ವಂದ್ವ ನೀತಿ ಬಿಟ್ಟು ರೈತರೊಟ್ಟಿಗೆ ಹೋರಾಟಕ್ಕೆ ಧುಮುಕಿ ಎಂದರು. ಸಂದರ್ಭದಲ್ಲಿ ಮುಖಂಡರಾದ ಸಿದ್ದರಾಮಯ್ಯ, ಲಕ್ಷ್ಮೀರಂಗಯ್ಯ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್, ಶ್ರೀಧರ್, ಮಂಜುನಾಥ್, ಲೋಕೇಶ್ ಮತ್ತು ತಿರುಮಲೇಶ್ ಇನ್ನಿತರರು ಉಪಸ್ಥಿತರಿದ್ದರು.