ಸಾರಾಂಶ
ರಾಜ್ಯ ಸರ್ಕಾರ ಈ ತಿಂಗಳ 22ರಿಂದ ಆಕ್ಟೊಬರ್ 7ರ ವರೆಗೆ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಮರಾಠಾ ಎಂಬುವುದಾಗಿ, ಉಪಜಾತಿ ಕಾಲಂನಲ್ಲಿ ಕುನಬಿ, ಮಾತೃಭಾಷೆ ಕಾಲಂನಲ್ಲಿ ಮರಾಠಿ ಎಂಬುವುದಾಗಿ ಕಡ್ಡಾಯ ವಾಗಿ ನಮೂದಿಸುವಂತೆ ಸಕಲ ಮರಾಠಾ ಸಮಾಜದ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪದ್ಮಾಕರ್ ಪಾಟೀಲ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಬೀದರ್
ರಾಜ್ಯ ಸರ್ಕಾರ ಈ ತಿಂಗಳ 22ರಿಂದ ಆಕ್ಟೊಬರ್ 7ರ ವರೆಗೆ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಮರಾಠಾ ಎಂಬುವುದಾಗಿ, ಉಪಜಾತಿ ಕಾಲಂನಲ್ಲಿ ಕುನಬಿ, ಮಾತೃಭಾಷೆ ಕಾಲಂನಲ್ಲಿ ಮರಾಠಿ ಎಂಬುವುದಾಗಿ ಕಡ್ಡಾಯ ವಾಗಿ ನಮೂದಿಸುವಂತೆ ಸಕಲ ಮರಾಠಾ ಸಮಾಜದ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪದ್ಮಾಕರ್ ಪಾಟೀಲ್ ಕರೆ ನೀಡಿದರು.ಬುಧವಾರ ನೌಬಾದ್ನಲ್ಲಿರುವ ಮರಾಠಾ ಸಮುದಾಯ ಭವನದಲ್ಲಿ ಸಮಾಜದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿ, ಸಮಿಕ್ಷೆ ನಡೆಸುವ ಪ್ರತಿಯೊಬ್ಬ ಅಧಿಕಾರಿ ಅಥವಾ ಶಿಕ್ಷಕರು ತಮ್ಮ ಮನೆಗಳಿಗೆ ಬಂದಾಗ ಇದ್ದ ಸತ್ಯವನ್ನು ಬಿಚ್ಚಿಡತಕ್ಕದ್ದು. ಸಮಿಕ್ಷೆಯಲ್ಲಿ 60 ಪ್ರಶ್ನೆಗಳು ಕೇಳಲಾಗಿ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಂತೆ ಅವರು ತಿಳಿಸಿದರು.
ಮರಾಠಾ ಕ್ರಾಂತಿ ಮೋರ್ಚಾ ಸಂಯೋಜಕರಾದ ವೆಂಕಟ ಮೆಯಿಂದೆ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮಾಜ ಬಾಂಧವರು 40 ಲಕ್ಷ ಇದ್ದು, ರಾಜ್ಯ ಸರ್ಕಾರವು ಕೇವಲ 16 ಲಕ್ಷ ಮಾತ್ರ ಎಂಬುವುದಾಗಿ ತಿಳಿಸಿದೆ. ಬೀದರ್ ಜಿಲ್ಲೆಯಲ್ಲಿ ನಮ್ಮ ಸಮಾಜ ಬಾಂಧವರು ಮೂರುವರೆ ಲಕ್ಷ ಜನರಿದ್ದು, ಸತ್ಯ ಸಂಗತಿ ಹೊರಬರ ಬೇಕಾದರೆ ನಮ್ಮ ಸಮಾಜದವರು ಸಮಿಕ್ಷೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ನಿಜ ಸಂಗತಿ ವಿವರಿಸಬೇಕಿದೆ ಎಂದರು.ಜಿಲ್ಲಾ ಕ್ಷೇತ್ರಿಯ ಮರಾಠಾ ಪರಿಷತ್ ಅಧ್ಯಕ್ಷ ದಿಗಂಬರರಾವ್ ಮಾನಕಾರಿ ಮಾತನಾಡಿ, 18ರಂದು ಹುಮನಾಬಾದ್, 19ರಂದು ಔರಾದ್, 20ರಂದು ಭಾಲ್ಕಿ, 21ರಂದು ಬಸವಕಲ್ಯಾಣದಲ್ಲಿ ನಮ್ಮ ಸಮಾಜದ ಬಾಂಧವರ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಕಾರ್ಯಕರ್ತರು ನೀಡುವ ಸಲಹೆ, ಸೂಚನೆಗಳನ್ನು ಪಾಲಿಸತಕ್ಕದ್ದೆಂದು ತಿಳಿಸಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸೊಂಜೆ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಕಾಶ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಸಕಲ ಮರಾಠಾ ಸಮಾಜದ ಮುಖಂಡರಾದ ಜನಾರ್ಧನ ಬಿರಾದಾರ, ವಿಜಯಕುಮಾರ ಪಾಟೀಲ್ ಕಣಜಿಕರ್, ಸತೀಶ ಮೂಳೆ, ಕಿಸಾನ ಶಿಕ್ಷಣ ಪ್ರಸಾರಕ ಮಂಡಳಿ ಅಧ್ಯಕ್ಷ ಅನಿಲ ಶಿಂಧೆ, ಡಾ.ದಿನಕರ ಮೋರೆ, ರಾಮರಾವ್ ವರವಟ್ಟಿಕರ್, ಕಿಶಾನರಾವ್ ಪಾಟೀಲ್ ಇಂಚೂರಕರ್, ತಾತ್ಯಾರಾವ್ ಪಾಟೀಲ್, ಅನೀಲ ಕಾಳೆ, ಪಂಚಶೀಲ ಪಾಟೀಲ್, ಶಿವಾಜಿರಾವ್ ಪಾಟೀಲ್ ಮುಂಗನಾಳ, ಡಿಜಿ ಜಗತಾಪ, ಮಾಧವರಾವ್ ಕಾದೆಪುರಕರ್ ಸತೀಶ ವಾಸರೆ ಹಾಗೂ ಇತರರಿದ್ದರು.