ಸಾರಾಂಶ
-ಎಸ್ಜೆಎಸ್ ಜ್ಞಾನ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಮತ
------ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಗ್ದರನ್ನು ಪ್ರಭುದ್ಧರನ್ನಾಗಿಸಲು ಶಿಕ್ಷಣಕ್ರಾಂತಿ ಮಾಡಿದವರು ಭೋವಿ ಕುಲತಿಲಕ ಮಂಜರಿ ಹನುಮಂತಪ್ಪ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ಮಂಜರಿ ಹನುಮಂತಪ್ಪರವರ ಸ್ಮರಣೋತ್ಸವ ಹಾಗೂ ಎಸ್ಜೆಎಸ್ ಜ್ಞಾನ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಹಾಗೂ ಸಂಘಟನೆ ಮಹತ್ವ ಅರಿತು ಇದರ ಸಸಿ ನೆಟ್ಟ ಫಲ ಇಂದು ಸದೃಢ ಸಂಘಟನೆ ಹಾಗೂ ನೌಕರರು ಮತ್ತು ಮೀಸಲಾತಿಯ ಫಲಾನುಭವಿಗಳಾಗಿ ಇಂದಿನ ಪೀಳಿಗೆ ಸವಿಯುತ್ತಿದೆ ಎಂದರು.
ಸ್ವಾವಲಂಬಿ ಬದುಕು ಹಾಗೂ ಆಧುನಿಕ ಯುಗದಲ್ಲಿ ಕುಲವೃತ್ತಿಗಳಿಂದ ಸ್ಪರ್ಧಾತ್ಮಕ ವೃತ್ತಿ ಬದುಕಿಗೆ ಶಿಕ್ಷಣ ಭದ್ರ ಅಡಿಪಾಯವಾಗಿದೆ ಎಂಬುದನ್ನರಿತು ಶಿಕ್ಷಣ ಸಂಸ್ಥೆ ಪ್ರಾರಂಭಿಸಿ, ನೂರಾರು ಮಕ್ಕಳಿಗೆ ಜ್ಞಾನಜ್ಯೋತಿ ಬೆಳಗಿ, ಆ ಮನೆಗಳ ನಂದಾದೀಪಾ ಹಚ್ಚಿದವರು ಶಿಕ್ಷಣ ಪ್ರೇಮಿ, ಮಂಜರಿ ಹನುಮಂತಪ್ಪರವರು. ಅಸಂಘಟಿತ ಅರೆಅಲೆಮಾರಿ ಭೋವಿ ಸಮಾಜಕ್ಕೆ ಪ್ರಪ್ರಥಮ ಸಂಘಟಿತ ರಾಜ್ಯಾಸಂಘವನ್ನು ಕಟ್ಟಿ ಸಾಂಘಿಕ ಶಕ್ತಿಯನ್ನು ದೆಹಲಿಯಲ್ಲಿ ಭಾರತದ ಪ್ರಥಮ ಪ್ರಧಾನಿ ಮುಂದೆ ಪ್ರಕಾಶಿಸಿದರು. ಅಖಂಡ ಕರ್ನಾಟಕದ ಭೋವಿ ಸಮಾಜಕ್ಕೆ ಅಖಂಡತೆಯ ಏಕರೂಪದ ಮೀಸಲಾತಿಗಾಗಿ ಹೋರಾಡಿ ಪ್ರಾದೇಶಿಕ ನ್ಯಾಯ ನೀಡಿದರು. ಸ್ತ್ರೀಕುಲಕ್ಕೆ ಶಿಕ್ಷಣದ ಸಿಂಧೂರ ನೀಡಿದವರು ಮಂಜರಿ ಹನುಮಂತಪ್ಪ ಎಂದು ಹೇಳಿದರು.ಕೊಡಗಿನ ಮಹಾಂತ ಶ್ರೀಗಳು ಮಾತನಾಡಿ, ವ್ಯಕ್ತಿ ಮತ್ತು ಸಮಾಜದ ಅಂಧಕಾರವನ್ನು ತೊಲಗಿಸುವ ಬೆಳಕಾದ ಜ್ಞಾನ ಜೊತೆಯಲ್ಲಿ ಸಂಸ್ಕಾರ ಅಳವಡಿಸಿಕೊಂಡಾಗ ನಮ್ಮ ಸಂಸ್ಕೃತಿ ಭವ್ಯ ಹಾಗೂ ದಿವ್ಯತೆಯಿಂದ ಕೂಡಿರುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಮಾತನಾಡಿ, ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಎಲ್ಲರನ್ನು ಜ್ಞಾನವಂತರನ್ನಾಗಿ ಮಾಡುತ್ತಿದ್ದಾರೆ ಎಂದರು.ಶಿಲ್ಪಕಲಾ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಲ್ಪಿ ಶಿವಶಂಕರ ಅವರಿಗೆ ಹಾಗೂ 2024 ಶಿಲ್ಪಕಲಾ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶ್ರೀನಿವಾಸ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಯಾದವ ಗುರುಪೀಠದ ಜಗದ್ಗುರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಭೋವಿ ಗುರುಪೀಠದ ಕಾರ್ಯನಿರ್ವಾಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ, ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ, ಜಗಳೂರಿನ ಅರ್ಜುನಪ್ಪ, ಉಡುಪಿಯ ರಾಜು, ಕಂಪ್ಲಿಯ ಮೌನೇಶ ಇದ್ದರು.----ಪೋಟೋ, 25ಸಿಟಿಡಿಎಚ್1: ನಗರದ ತರಾಸು ರಂಗಮಂದಿರದಲ್ಲಿ ಮಂಜರಿ ಹನುಮಂತಪ್ಪರವರ ಸ್ಮರಣೋತ್ಸವ ಹಾಗೂ ಎಸ್ಜೆಸ್ ಜ್ಞಾನ ಸಂಭ್ರಮದ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.