ರಾಣಿಬೆನ್ನೂರು: ಅಕ್ರಮ ಕಸಾಯಿ ಖಾನೆಗಳನ್ನು ಶಾಶ್ವತವಾಗಿ ಬಂದ್ ಮಾಡುವಂತೆ ಆಗ್ರಹಿಸಿ ಹಾಗೂ ಕಸಾಯಿ ಖಾನೆ ಕುರಿತು ಮಾಹಿತಿ ನೀಡಿದ ಬಜರಂಗದಳದ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಜಗಜ್ಯೋತಿ ಬಸವೇಶ್ವರ (ಕೋರ್ಟ್) ವೃತ್ತ, ಹಲಗೇರಿ ಕ್ರಾಸ್, ಕುರುಬಗೇರಿ ಕ್ರಾಸ್, ಹಳೆಯ ಪಿಬಿ ರಸ್ತೆಯ ಮೂಲಕ ಸಾಗಿ ಮಿನಿ ವಿಧಾನಸೌಧ ತಲುಪಿತು. ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಳೆದ ಮೇ 24ರಂದು ಅಕ್ರಮ ಕಸಾಯಿ ಖಾನೆ ಕುರಿತು ಮಾಹಿತಿ ನೀಡಿದ ಬಜರಂಗದಳದ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ಕೇವಲ ಮೂವರು ಯುವಕರ ಬಂಧನದಿಂದ ವಿಷಯ ಮುಗಿದಂತಾಗುವುದಿಲ್ಲ. ಈ ಹಲ್ಲೆಗೆ ಕುಮ್ಮಕ್ಕು ನೀಡಿದ ಕಸಾಯಿ ಖಾನೆ ಮಾಲೀಕರು ಸೇರಿದಂತೆ ಎಲ್ಲಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ “ಗೋಮಾತೆ ರಕ್ಷಿಸಿ – ದೇಶ ಉಳಿಸಿ”, “ಭಾರತ ಮಾತಾ ಕೀ ಜೈ”, “ವಂದೇ ಮಾತರಂ”, “ಜೈ ಶ್ರೀರಾಮ್” ಎಂಬ ಘೋಷಣೆಗಳು ಮೊಳಗಿದವು.ಬಂಜಾರ ಗುರು ಬಾಲ ತಪಸ್ವಿ ಮಹಾರಾಜ (ಕೃಷ್ಣಾಪುರ ಮಠ), ಮಾಜಿ ಶಾಸಕ ಅರುಣಕುಮಾರ ಪೂಜಾರ, ಉತ್ತರ ಪ್ರಾಂತ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಪುಂಡಲೀಕ್ ದಳವಾಯಿ, ಧಾರವಾಡ ವಿಭಾಗ ಬಜರಂಗದಳ ಸಂಚಾಲಕ ಅನಿಲ ಹಲವಾಗಿಲ, ಹಾವೇರಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಮೃತ್ಯುಂಜಯ ಬೆಣ್ಣಿ ಮಾತನಾಡಿ, ಅಕ್ರಮ ಚಟುವಟಿಕೆಗಳು ಸಮಾಜದ ಶಾಂತಿ, ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದು, ಇವುಗಳನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿ ಕೆ. ಶಿವಲಿಂಗಪ್ಪ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ನಗರಸಭೆ ಮಾಜಿ ಸದಸ್ಯರಾದ ಮಂಜುನಾಥ ಗೌಡಶಿವಣ್ಣನವರ, ಪ್ರಕಾಶ ಬುರಡಿಕಟ್ಟಿ, ಎಪಿಎಂಸಿ ಮಾಜಿ ಸದಸ್ಯ ಪರಮೇಶಪ್ಪ ಗೂಳಣ್ಣನವರ, ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಚನ್ನಬಸಪ್ಪ ಓಂಕಾರಣ್ಣನವರ, ವಿನಾಯಕ ಕರ್ನೂಲ, ವಿನಯಗೌಡ ಬಾಳನಗೌಡ್ರ, ಬಿರೇಶ್ ಗುದಿಗೇರ, ವಿಜಯ ಮಾಯಮ್ಮನವರ, ನಾಗರಾಜ ಕೊರವರ, ಅನಿಲ ಮಳವಳ್ಳಿ. ಶಶಿ ಬಳ್ಳಾರಿ, ರುದ್ರೇಶ ಬುಕ್ಕಶೆಟ್ಟಿ, ಶರತ ನೂಲಗೇರಿ, ಕಿರಣ ಮೆಡ್ಲೇರಿ, ನಾಗರಾಜ ಕಲಾಲ, ಮಂಜುನಾಥ ಚಲವಾದಿ, ಆಕಾಶ ಹುಲ್ಲತ್ತಿ, ವಿಶ್ವ ಹಿಂದೂಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಇದ್ದರು.