ನಗರದ ಅಂಬೇಡ್ಕರ್ ಕಾಲನಿಯಲ್ಲಿ ಈಚೆಗೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೇ ಮೃತಪಟ್ಟ ಯುವಕ ರೋಷನ್ ಪ್ರದೀಪ ಹುಲಸ್ವಾರ ಸಾವಿಗೆ ನ್ಯಾಯ ಒದಗಿಸಬೇಕು ಮತ್ತು ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು.
ಕನ್ನಡಪ್ರಭ ವಾರ್ತೆ ಕಾರವಾರ
ನಗರದ ಅಂಬೇಡ್ಕರ್ ಕಾಲನಿಯಲ್ಲಿ ಈಚೆಗೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೇ ಮೃತಪಟ್ಟ ಯುವಕ ರೋಷನ್ ಪ್ರದೀಪ ಹುಲಸ್ವಾರ ಸಾವಿಗೆ ನ್ಯಾಯ ಒದಗಿಸಬೇಕು ಮತ್ತು ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಾಲಾ ಹುಲಸ್ವಾರ್ ಆಗ್ರಹಿಸಿದರು.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಘಟನೆ ನಡೆದು 16 ದಿನಗಳಾದರೂ ಯಾವುದೇ ಜನಪ್ರತಿನಿಧಿ ಅಥವಾ ಮುಖಂಡರು ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ಕುಟುಂಬದ ಆಧಾರಸ್ತಂಭವಾಗಿದ್ದ ಯುವಕನನ್ನು ಕಳೆದುಕೊಂಡಿರುವ ತಾಯಿ ಸಂಕಷ್ಟದಲ್ಲಿದ್ದಾಳೆ. ಚಿಕಿತ್ಸೆಗೆ ಲಕ್ಷಾಂತರ ರುಪಾಯಿ ವೆಚ್ಚವಾಗಿದ್ದು, ಕುಟುಂಬ ಸಾಲದ ಹೊರೆ ಎದುರಿಸುತ್ತಿದೆ. ಸರ್ಕಾರ ಹಾಗೂ ಸಮಾಜದಿಂದ ನೆರವು ದೊರೆಯಬೇಕು ಎಂದರು.
ರೋಷನ್ ತಾಯಿ ಶಕುಂತಲಾ ಹುಲಸ್ವಾರ ಮಾತನಾಡಿ, ಜೂ. 7ರಂದು ನನ್ನ ಮಗನ ಮೇಲೆ ಆತನ ಸ್ನೇಹಿತರೇ ಆದ ಮೂವರು ವ್ಯಕ್ತಿಗಳು ಭೀಕರವಾಗಿ ಹಲ್ಲೆ ನಡೆಸಿದ್ದರು. ಕೆಲಸಕ್ಕೂ ಒಟ್ಟಿಗೆ ಹೋಗುತ್ತಿದ್ದ ಸ್ನೇಹಿತರು ಯಾಕೆ ಹೀಗೆ ಮಾಡಿದರು ಎಂದು ತಿಳಿಯುತ್ತಿಲ್ಲ. ಸಾಲ ಮಾಡಿ ಸುಮಾರು 8ರಿಂದ ₹10 ಲಕ್ಷ ವೆಚ್ಚದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನನ್ನ ಮಗನ ಸಾವಿಗೆ ಕಾರಣರಾದ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.ಸಮಾಜದ ಪ್ರಮುಖ ಶಾಂತರಾಮ, ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡಿರುವ ಕುಟುಂಬ ಈಗ ಸಾಲದ ಸುಳಿಗೆ ಸಿಲುಕಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಕ್ಷಣವೇ ₹50 ಲಕ್ಷ ಪರಿಹಾರ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪೊಲೀಸರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಸಾರ್ವಜನಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಮೃತನ ಸಹೋದರ ಪ್ರಜ್ವಲ್, ರಮೇಶ್ ಮುದಗೆಕರ, ಲೀಲಾಬಾಯಿ ಠಾಣೇಕರ್, ದೀಪಕ್, ಸಂತೋಷ್ ಸೇರಿದಂತೆ ಕಾಲನಿಯ ನಿವಾಸಿಗಳು ಇದ್ದರು.