ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿ ಹಣವನ್ನು ಜುಲೈ 30ರೊಳಗೆ ಪಾವತಿ ಮಾಡದಿದ್ದರೆ ಕಾರ್ಖಾನೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಕಾರ್ಖಾನೆ ಸಭಾಂಗಣದಲ್ಲಿ ಆಡಳಿತ ಮಂಡಳಿ ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆಯಲ್ಲಿ ಬಾಕಿ ಹಣ ಪಾವತಿ ಕುರಿತಂತೆ ಚರ್ಚೆ ನಡೆಯಿತು. ಬಾಕಿ ಹಣ ಪಾವತಿ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ತೀರ್ಪು ಬರುವವರೆಗೆ ಹಣ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಕಾರ್ಖಾನೆ ಅಧಿಕಾರಿಗಳು ರೈತ ಮುಖಂಡರಿಗೆ ಮನವರಿಕೆ ಮಾಡಿಕೊಡಲು ಮುಂದಾದರು.

ಈ ವೇಳೆ ರೈತ ಮುಖಂಡರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ನ್ಯಾಯಾಲಯದ ತೀರ್ಪು ಬರಲಿ ಅಥವಾ ಬಿಡಲಿ ಜುಲೈ 30ರೊಳಗೆ ರೈತರಿಗೆ ಪಾವತಿಸಬೇಕಾಗಿದ್ದ ಪ್ರತಿ ಟನ್ ಕಬ್ಬಿಗೆ 50 ರು ಬಾಕಿ ಪಾವತಿಸಬೇಕು. ಶೀಘ್ರದ ಕಬ್ಬು ಅರೆಯುವ ಕಾರ್ಯ ಆರಂಭಿಸುವಂತೆ ರೈತ ಮುಖಂಡರು ಪಟ್ಟು ಹಿಡಿದರು.

ಉಭಯ ಗುಂಪುಗಳ ನಡುವೆ ಅಂತಿಮವಾಗಿ ಮಾತುಕತೆ ನಡೆದು ಜುಲೈ30ರೊಳಗೆ ಬಾಕಿ ಹಣ ಪಾವತಿ ವಿಳಂಬವಾದರೆ ಚಳವಳಿ ಅನಿವಾರ್ಯ ಎಂದು ರೈತರು ಎಚ್ಚರಿಕೆ ನೀಡಿದರು.


ಸಭೆಯಲ್ಲಿ ಕಾರ್ಖಾನೆ ಮುಖ್ಯಸ್ಥರಾದ ರಾಮಚಂದ್ರ ರಾವ್, ಗೌರಿ ಪ್ರಕಾಶ್, ಚಂದ್ರಶೇಖರ್, ಮಹದೇವಪ್ಪ, ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೋ.ಶಿ .ಪ್ರಕಾಶ್, ಪ್ರಭುಲಿಂಗ, ವಿನೋದ್ ಬಾಬು, ರವಿ, ಕುದರಗುಂಡಿ ನಾಗರಾಜು, ಚಿಕ್ಕೋನಹಳ್ಳಿ ತಮ್ಮಯ್ಯ, ವೆಂಕಟರಾಜು, ರಾಮಣ್ಣ ಮತ್ತಿತರರು ಭಾಗವಹಿಸಿದ್ದರು.

ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಮಂಡ್ಯ: 66/11 ಕೆ.ವಿ, ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-06 ಹೊಸಹಳ್ಳಿ ಫೀಡರ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುರಿಂದ ಎಫ್ 6 ಹೊಸಹಳ್ಳಿ ಫೀಡರ್‌ನ ಪ್ರದೇಶಗಳಾದ ದ್ವಾರಕನಗರ, ಕಾವೇರಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 11 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ನಿಲುಗಡೆ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕೊತ್ತತ್ತಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.