ಅಭಿನವ ಯಚ್ಚರ ಶ್ರೀಗಳು ಮಾತನಾಡಿ, ಮಹಿಮಾ ಪುರುಷರು ಯಾವಾಗಲು ಎಲ್ಲ ಸ್ಥಿತಿಗಳನ್ನು ಸಮನಾಗಿ ಕಾಣುತ್ತಾರೆ. ಮಹಾತ್ಮರು ಯಾರಲ್ಲೂ ದ್ವೇಷವನ್ನು ಕಾಣುವುದಿಲ್ಲ. ಎಲ್ಲರಲ್ಲಿಯೂ ಪ್ರೀತಿಯನ್ನು ಕಾಣುತ್ತಾರೆ ಎಂದರು.

ನರಗುಂದ: ದೇಶದ ಹಿಂದು ಧರ್ಮದ ಪರಂಪರೆಯಲ್ಲಿ ಮೌನೇಶ್ವರ ಶ್ರೀಗಳು ಎಲ್ಲ ಸಮುದಾಯಗಳನ್ನು ಸಮನಾಗಿ ಕಂಡು ಸಮಾಜ ಸುಧಾರಣೆ ಮಾಡಿದ್ದಾರೆಂದು ಗಂಗಾವತಿಯ ವೇದ ವಿದ್ವಾಂಸ ಮೌನೇಶ ಆಚಾರ ತಿಳಿಸಿದರು.

ತಾಲೂಕಿನ ಶಿರೋಳ ಗ್ರಾಮದ ಯಚ್ಚರಸ್ವಾಮಿಗಳ ಗವಿಮಠದಲ್ಲಿ ನಡೆದ 26ನೇ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಮೌನೇಶ್ವರರ ಜಯಂತ್ಯುತ್ಸವ ಮತ್ತು ಕಾರ್ತಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮೌನೇಶ್ವರ ಸ್ಥಿತಪ್ರಜ್ಞರು, ಮಹಾತ್ಮರು ಹಾಗೂ ಸರ್ವರನ್ನು ಸಮನಾಗಿ ಕಂಡರು. ಮಹಾತ್ಮರು ಜಗತ್ತನ್ನು ಬೆಳಗಲೆಂದು ಜನಿಸಿದರೇ ಹೊರತು ಸ್ವಾರ್ಥಕ್ಕಾಗಿ ಅಲ್ಲ ಎಂದರು.

ಬಾದಾಮಿಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಪ್ರಲ್ಹಾದ ಅರ್ಕಸಲಿ ಮಾತನಾಡಿ, ಸಮಾಜದಲ್ಲಿ ಜಾತಿ ಎರಡೇ ಇವೆ. ಒಂದು ಗಂಡು, ಇನ್ನೊಂದು ಹೆಣ್ಣು ಜಾತಿಯಾಗಿದೆ. ಆದ್ದರಿಂದ ಸಮಾಜದಲ್ಲಿ ಸಮಾನತೆಯಿಂದ ಬದುಕು ಕಟ್ಟಿಕೊಳ್ಳಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಅಭಿನವ ಯಚ್ಚರ ಶ್ರೀಗಳು ಮಾತನಾಡಿ, ಮಹಿಮಾ ಪುರುಷರು ಯಾವಾಗಲು ಎಲ್ಲ ಸ್ಥಿತಿಗಳನ್ನು ಸಮನಾಗಿ ಕಾಣುತ್ತಾರೆ. ಮಹಾತ್ಮರು ಯಾರಲ್ಲೂ ದ್ವೇಷವನ್ನು ಕಾಣುವುದಿಲ್ಲ. ಎಲ್ಲರಲ್ಲಿಯೂ ಪ್ರೀತಿಯನ್ನು ಕಾಣುತ್ತಾರೆ. ಜಗತ್ತು ಅವರಿಗೆ ಹಿಂಸಿಸಿದರೂ ಸರಿ, ಪೂಜಿಸಿದರೂ ಸರಿ. ಎಲ್ಲ ಆಯಾಮಗಳಲ್ಲಿ ಒಂದೇ ಮನಸ್ಥಿತಿಯಲ್ಲಿ ಇರುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕರ್ಕಿಕಟ್ಟಿ ಗ್ರಾಮದ ಹಿರಿಯರಾದ ಹನುಮಂತಗೌಡ ಗೌಡರ, ಬಾಪುಗೌಡ ತಿಮ್ಮನಗೌಡ್ರ, ಎಸ್.ವೈ. ಮುಲ್ಕಿಪಾಟೀಲ, ಬಾಬು ಗುರುನಾಥಾನವರ, ಜಂಬಯ್ಯ ಅಂಕ್ಲಿಮಠ, ಎಸ್.ಆರ್. ದೊಡ್ಡಮನಿ, ಮುತ್ತಣ್ಣ ಗುರುನಾಥನವರ, ಯೋಗಾನಂದ ಬಡಿಗೇರ, ಬಸವರಾಜ ಕುಪ್ಪಸ್ತ, ಮಲ್ಲಪ್ಪ ಚಿಕ್ಕನರಗುಂದ, ಮೈಲಾರಪ್ಪ ಹೂಗಾರ, ಮಂಜುನಾಥ ಕುಲಕರ್ಣಿ, ಸುನೀಲ ಕಳಸದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕಿತ್ತೂರೂ ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಗದಗ: ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಸಂಸ್ಥೆಗಳು, ಕಿತ್ತೂರು ಚೆನ್ನಮ್ಮ ಪ್ರಶಸ್ತಿಗೆ ಹಾಗೂ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಕಿತ್ತೂರು ಚೆನ್ನಮ್ಮ ಪ್ರಶಸ್ತಿಗೆ ಹಾಗೂ ವೀರ ಮಹಿಳೆ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಅರ್ಹ ಸಂಸ್ಥೆಗಳು ಹಾಗೂ ಅರ್ಹ ವ್ಯಕ್ತಿಗಳು, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ:006, ಜಿಲ್ಲಾ ಆಡಳಿತ ಭವನ, ಹುಬ್ಬಳ್ಳಿ ರೋಡ್, ಗದಗ ಮತ್ತು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಇವರಿಂದ ನಿಗದಿತ ನಮೂನೆಗಳನ್ನು ಹಾಗೂ ಷರತ್ತುಗಳ ಪ್ರತಿಗಳನ್ನು ಪಡೆದು ಡಿ. 24ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅವಧಿ ಮೀರಿ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗದಿತ ನಮೂನೆಗಳನ್ನು ಜಿಲ್ಲಾ, ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.