ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಜಗಜ್ಯೋತಿ ಬಸವಣ್ಣ ಹೊಟ್ಟೆಪಾಡಿನ ಸರಕಲ್ಲ, ಅವರೊಂದು ಅದ್ಬುತವಾದ ಮುತ್ತು. ಅವರನ್ನು ಇಟ್ಟುಕೊಂಡು ನಾವೆಲ್ಲರೂ ಬೆಳೆಯಬೇಕು, ನಾವು ಬೆಳೆಯುವ ಜೊತೆ ಬಸವಣ್ಣನವರ ಹೆಸರನ್ನು, ಅವರ ಧರ್ಮದ ಸಂದೇಶಗಳನ್ನು ಪ್ರಚುರಪಡಿಸುವಲ್ಲಿ ಮುಂದಾಗಬೇಕು ಎಂದು ಮೈಸೂರು ಕುಂದೂರು ಮಠ ಶ್ರೀ ಡಾ.ಶರಶ್ಚಂದ್ರ ಸ್ವಾಮೀಜಿ ಹೇಳಿದರು.ಜಾಗತಿಕ ಲಿಂಗಾಯತ ಮಹಾಸಭಾ, ವಿವಿಧ ಬಸವಪರ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಜಗಜ್ಯೋತಿ, ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 892ನೇ ಜಯಂತಿ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.ಜಗತ್ತಿನಲ್ಲಿ ಬಸವಣ್ಣನವರು ತೋರಿದ ಮಾರ್ಗವೇ ಅತ್ಯಂತ ಸುಂದರವಾದುದು, ಅವರ ಜಂಗಮನಿಷ್ಠೆ ಅಭೂತವಾದುದು ಎಂದು ಹರಿಹರ ಕವಿ ಶ್ಲಾಘಿಸಿದ್ದಾರೆ. ಅಂತಹ ಬಸವೇಶ್ವರರನ್ನು ನಾವು ಇಂದು ಕಲಹದ ಸಾಧನ ಮಾಡಿಕೊಂಡಿದ್ದೇವೆ. ಅವರು ಹೊಟ್ಟೆಪಾಡಿನ ಸರಕಲ್ಲ,, ಬಸವಣ್ಣ ಸಾಂಸ್ಕೃತಿಕ ನಾಯಕ ಅವರ ಪ್ರಸಿದ್ದಿಯನ್ನು ಪಸರಿಸುವ ಮೂಲಕ ನಾವು ಪದವಿ ಗಳಿಸುವಂತಾಗಬೇಕು, ಕಲಹಕ್ಕೆ ನಾಂದಿಯಾಗ ಕೂಡದು, ಅವರ ಚಿಂತನೆಗಳು ನಮೆಲ್ಲರಿಗೂ ದಾರಿದೀಪ ಆಗಬೇಕು ಎಂದರು.
ಬಸವಣ್ಣ ನಮ್ಮೆಲ್ಲರಿಗೂ ಆತ್ಮದ ವಸ್ತು, ಮಾತ್ರವಲ್ಲ ಬುದ್ದಿಯ ವಸ್ತು. ಅಂತಹ ಶರಣರ ಹೆಸರನ್ನು ನಾವೆಲ್ಲರೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವ ರೀತಿ ಬೇಸರವಾದುದು, ನಮ್ಮ ಸಮಾಜ ನಿಜಕ್ಕೂ ಪುಣ್ಯವಾದ ಸಮಾಜ. ಜಗತಿನಲ್ಲಿ ಅನೇಕ ಮಹಾತ್ಮರು ಲೋಕ ಕಲ್ಯಾಣಕ್ಕಾಗಿ ಉದ್ದರಿಸಿದ್ದಾರೆ, ಅರಂತಹ ಪುಣ್ಯ ಪುರುಷ ಮತ್ತೊಬ್ಬರಿಲ್ಲ ಎಂಬ ಸತ್ಯವನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಬಸವಣ್ಣ ಎಂದರೆ ನಮ್ಮ ಮುಂದೆ ಸಮಾಜ ಸೇವೆ ಎಂಬುದು ಗೋಚರವಾಗಬೇಕು, ಅವರು ಸಾಮಾನ್ಯ ಮನುಷ್ಯರಾಗಿ ದೇವರಾದವರು ಎಂದು ಶರತ್ಚಂದ್ರಸ್ವಾಮಿಜಿ ಎಂದರು. ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕು ಅಧ್ಯಕ್ಷ ಬಿಂದು ಲೋಕೇಶ್ ಮಾತನಾಡಿ, ಇದೊಂದು ಬಸವಣ್ಣನ ಹಬ್ಬ, ಇಂದಿನ ಸಮಾರಂಭಕ್ಕೆ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಶರಣರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕಾರ ನೀಡಿರುವುದು ಸಂತಸ ತಂದಿದೆ ಎಂದರು.ತಾಲೂಕು ಪಂಚಾಯಿತಿ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಮಾತನಾಡಿ, ಬಸವೇಶ್ವರರ ಜಯಂತಿ ಆಚರಣೆ ವೇಳೆ ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಈ ಕಾರ್ಯಕ್ರಮ ಎಲ್ಲರ ಒಗ್ಗೂಡಿಕೆಯ ಪ್ರತೀಕ ಎಂದರು.ಈ ವೇಳೆ ಮಹದೇಶ್ವರಬೆಟ್ಟ ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ, ಕಾಮಗೆರೆ ಪಟ್ಟದ ಮಠದ ಮುಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುಂಡೇಗಾಲ ಪಟ್ಟದ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿಲಕವಾಡಿ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಹೊಂಡರಬಾಳು ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿಗಳು, ಕುಂತೂರು ಶ್ರೀ ಶಿವಪ್ರಭು ಸ್ವಾಮೀಜಿ, ಆಲಹಳ್ಳಿ ಇಮ್ಮಡಿ ಬಸಪ್ಪಸ್ಚಾಮಿಗಳು, ಕೊಳ್ಳೇಗಾಲ ದಾಸೋಹ ಮಠ ಶ್ರೀ ಶಿವಪ್ಪಸ್ವಾಮೀಜಿ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಚಾಮುಲ್ ಅಧ್ಯಕ್ಷ ಮಧುವನಹಳ್ಳಿ ನಂಜುಂಡಸ್ವಾಮಿ, ಚಾಮರಾಜನಗರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರು ಗುರುಸ್ವಾಮಿ, ಕೋಟಂಬಳ್ಳಿ ಗುರುಸ್ವಾಮಿ, ಮುಡಿಗುಂಡ ಸುಂದ್ರಪ್ಪ, ಶಶಿಕುಮಾರ್ , ಮಧುವನಹಳ್ಳಿ ಸಿದ್ದೇಶ, ಬಸವರಾಜು ಇನ್ನಿತರಿದ್ದರು.
ಧರ್ಮ ಎಂಬುದು ಈಗಾಗಲೇ ನಶಿಸುತ್ತಿದೆ. ನಶಿಸುತ್ತಿರುವ ಧರ್ಮದ ಉಳಿವಿಗಾಗಿ ನಮ್ಮ ಮುಂದಿನ ಪೀಳಿಗೆಗೆ ಧರ್ಮ ಸಂದೇಶ, ಅರದಲ್ಲಿನ ಸಾರಗಳನ್ನು ಕುರಿತು ವಿವರಿಸುವ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತಂದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ, ಶರಣರ ಸಂದೇಶ ಆಲಿಸುವ ಕೆಲಸ ಮಾಡಬೇಕಿದೆ.- ನಿಶಾಂತ್, ಹನೂರು ಬಿಜೆಪಿ ನಾಯಕ