ಜಿಲ್ಲೆ ವಿವಿಧ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪರಿಶೀಲನೆ

| Published : May 30 2025, 12:32 AM IST

ಸಾರಾಂಶ

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿಯೋಜಿಸಿರುವ ಕೇಂದ್ರ ನೋಡಲ್ ಅಧಿಕಾರಿಗಳು ಜಲ ಜೀವನ್‌ ಮಿಷನ್ ಯೋಜನೆ ವಿವಿಧ ಕಾಮಗಾರಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿಯೋಜಿಸಿರುವ ಕೇಂದ್ರ ನೋಡಲ್ ಅಧಿಕಾರಿಗಳು ನಿಡಗುಂದಿ ತಾಲೂಕಿನ ಆಲಮಟ್ಟಿ, ಅಬ್ಬಿಹಾಳ, ಗುಡದಿನ್ನಿ ಹಾಗೂ ಬೇನಾಳ ಆರ್.ಸಿ. ಗ್ರಾಮದಲ್ಲಿ ಇಲಾಖೆವತಿಯಿಂದ ಅನುಷ್ಠಾನಗೊಳಿಸಿದ ಜಲ ಜೀವನ್‌ ಮಿಷನ್ ಯೋಜನೆ ವಿವಿಧ ಕಾಮಗಾರಿ ಪರಿಶೀಲಿಸಿದರು.

ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಅಲೋಕ ತಿವಾರಿ, ಜಲಧಾರೆ ಯೋಜನೆಯಡಿ ಆಲಮಟ್ಟಿ ಡ್ಯಾಮ್‌ನಿಂದ ಬಸವನಬಾಗೇವಾಡಿ, ಕೋಲ್ಹಾರ, ನಿಡಗುಂದಿ, ವಿಜಯಪುರ, ಬಬಲೇಶ್ವರ, ತಿಕೋಟಾ ಹಾಗೂ ಇಂಡಿ ಹಾಗೂ ಚಡಚಣ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಡಬ್ಲ್ಯುಟಿಪಿ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಜಾಕವೆಲ್ ಕಾಮಗಾರಿ ಹಾಗೂ ವಿನ್ಯಾಸದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ನೀರು ಶುದ್ಧೀಕರಣ ಘಟಕ ಹಾಗೂ ಜಾಕ್‌ವೆಲ್ ನಿರ್ಮಾಣ ಕಾಮಗಾರಿ ಉತ್ತಮ ಗುಣಮಟ್ಟದಿಂದ ನಿರ್ವಹಿಸಬೇಕು. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಂದಾಲ ಗ್ರಾಪಂ ವ್ಯಾಪ್ತಿಯ ಅಬ್ಬಿಹಾಳ ಹೊರವಲಯದಲ್ಲಿ ನಿರ್ಮಿಸುತ್ತಿರುವ ಆಡಳಿತತ್ಮಾಕ ವಿಭಾಗ, ಕ್ಲೋರಿನೇಶನ್ ಶೆಡ್, ಕ್ಯಾಸ್ಕೇಡ್ ಏರೇಟರ್ ಸೇರಿ ವಿವಿಧ ಪ್ರಗತಿ ಹಂತದ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರು.

ಬೇನಾಳ ಆರ್.ಸಿ. ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿ, ನೈರ್ಮಲ್ಯ ಸಮಿತಿ ಸದಸ್ಯರು, ವಾಟರ್‌ಮ್ಯಾನ್ ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅಲೋಕ ತಿವಾರಿ, ಕಮಿಟಿ ಸದಸ್ಯರು ಸಹ ನೀರಿನ ಪರೀಕ್ಷೆ ವಿಧಾನದ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕು. ಜಲ ಮೂಲದಿಂದ ನೀರಿನ ಮಾದರಿ ಸಂಗ್ರಹಿಸಿ ಕ್ರಮ ಬದ್ಧವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು ಎಂದರು. ಬೇನಾಳ ಗ್ರಾಮದ ಗುಂಡಪ್ಪ ಮುತ್ತಲದಿನ್ನಿ ಮನೆಗೆ ಭೇಟಿ ನೀಡಿ ಜಲ ಮೂಲಗಳ ನೀರಿನ ಗುಣಮಟ್ಟವನ್ನು ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷೆ ನಡೆಸಿದರು. ಚಿಮ್ಮಲಗಿ ಗ್ರಾಪಂ ವ್ಯಾಪ್ತಿಯ ಗುಡದಿನ್ನಿ ಗ್ರಾಮಕ್ಕೆ ಭೇಟಿ ನೀಡಿ ಜೆಜೆಎಂ ಕಾಮಗಾರಿ ಪರಿಶೀಲಿಸಿದರು.

ಈ ವೇಳೆ ಜಿಪಂ ಸಿಇಒ ರಿಷಿ ಆನಂದ, ನಿಡಗುಂದಿ ತಾಪಂ ಇಒ ವೆಂಕಟೇಶ ವಂದಾಲ, ಸಹಾಯಕ ನಿರ್ದೇಶಕ ಶರಣ ಬಸವ ಬಿರಾದಾರ, ನೈರ್ಮಲ್ಯ ಇಲಾಖೆ ಉಪ ವಿಭಾಗದ ಸಹಾಯಕ ಅಭಿಯಂತರ ವಿ.ಬಿ.ಗೊಂಗಡಿ, ಕೇಂದ್ರ ತಾಂತ್ರಿಕ ಅಧಿಕಾರಿ ರಾಜೇಶ್ ಕುಮಾರ್ ಲುಹಾದಿಯಾ ಮುಂತಾದವರು ಇದ್ದರು.