ಕನ್ನಡಪ್ರಭ ವಾರ್ತೆ ಮಂಡ್ಯ
ಹಾಲು ಕೇವಲ ಪಾನೀಯವಲ್ಲ, ಅದೊಂದು ಸಂಪೂರ್ಣ ಆಹಾರ ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಯು.ಸಿ. ಶಿವಕುಮಾರ್ ಹೇಳಿದರು.ಜಿಲ್ಲಾ ಹಾಲು ಒಕ್ಕೂಟದ (ಮನ್ಮುಲ್)ನಿಂದ ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆಯ (ಮಿಮ್ಸ್) ಹೆರಿಗೆ ವಾರ್ಡ್ನಲ್ಲಿರುವ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಉಚಿತವಾಗಿ ಹಾಲು ವಿತರಿಸಿ ಮಾತನಾಡಿದರು.
ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯಿಂದ ೨೦೦೧ರಿಂದ ವಿಶ್ವದಾದ್ಯಂತ ಹಾಲು ದಿನವನ್ನು ಆಚರಿಸಿಕೊಂಡು ಬರ ಲಾಗುತ್ತಿದೆ. ರೈತರ ಹಗಲಿರುಳಿನ ಕಠಿಣ ಶ್ರಮದಿಂದ ಉತ್ಪಾದನೆಯಾಗುವ ಹಾಲಿನ ಪೌಷ್ಟಿಕಾಂಶದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ, ಜಿಲ್ಲೆಯ ಎಲ್ಲಾ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತವಾಗಿ ಹಾಲು ಮತ್ತು ನಂದಿನಿ ಉತ್ಪನ್ನಗಳನ್ನು ವಿತರಿಸಿ ಜಾಗೃತಿ ಮೂಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ರಘು ಮಾತನಾಡಿ, ಈಗಾಗಲೇ ೨೫ ವರ್ಷಗಳನ್ನು ಪೂರೈಸಿ ೨೬ನೇ ವರ್ಷಕ್ಕೆ ಕಾಲಿಟ್ಟಿರುವ ಈ ಆಚರಣೆಯು ಜನರಲ್ಲಿ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಮುಖ ವೇದಿಕೆಯಾಗಿದೆ. ರೋಗಿ ಗಳಿಗೆ, ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ನಂದಿನಿ ಉತ್ಪನ್ನಗಳ ಗುಣಮಟ್ಟ, ಪೌಷ್ಟಿಕಾಂಶ ಹಾಗೂ ರೈತರ ಪರಿಶ್ರಮದ ಬಗ್ಗೆ ಅರಿವು ಮೂಡಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಮಿಮ್ಸ್) ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಮಾತನಾಡಿ, ರೋಗಿಗಳ ಶೀಘ್ರ ಚೇತರಿಕೆಗೆ ಉತ್ತಮ ಪೌಷ್ಟಿಕಾಂಶದ ಅಗತ್ಯವಿದೆ. ಹಾಲು ಒಂದು ಸಂಪೂರ್ಣ ಆಹಾರವಾಗಿರುವುದರಿಂದ, ವಿಶೇಷವಾಗಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ವೃದ್ಧಿಗೆ ಇದು ಅತ್ಯಂತ ಅವಶ್ಯಕ ಹಾಗೂ ಸಹಕಾರಿಯಾಗಿದೆ. ಆಸ್ಪತ್ರೆಯಲ್ಲಿ ಮನ್ಮುಲ್ ವತಿಯಿಂದ ರೋಗಿಗಳಿಗೆ ಉಚಿತವಾಗಿ ಹಾಲು ನೀಡುವ ಜನಪರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮನ್ಮುಲ್ ಸಹಾಯಕ ವ್ಯವಸ್ಥಾಪಕ (ಮಾರುಕಟ್ಟೆ) ಸಾಗರ್, ಮನ್ಮುಲ್ ಅಧಿಕಾರಿಗಳಾದ ನಂದೀಶ್, ನವೀನ್, ಸಂತೋಷ್, ಬಸವರಾಜ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.