ರಾಯಚೂರು: ಶುದ್ದ ಕುಡಿಯುವ ನೀರು ಸರಬರಾಜು, ವಿಮಾನ ನಿಲ್ದಾಣ ಕಾಮಗಾರಿ, ಮಾವಿನ ಕೆರೆ ಅಭಿವೃದ್ಧಿ, ಶೈಕ್ಷಣಿಕ ಸೌಲಭ್ಯಗಳು, ಕೆಕೆಆರ್ ಡಿ ಬಿ ಅಭಿವೃದ್ಧಿ ಕಾಮಗಾರಿಗಳು, ಕೇಂದ್ರ ಗ್ರಂಥಾಲಯಕ್ಕೆ ಸೌಲಭ್ಯ ಸೇರಿ ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್ ಬೋಸರಾಜು ಅವರು ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚಿಸಿದರು.

ಮಾವಿನಕೆರೆ ಅಭಿವೃದ್ಧಿ, ಸೇರಿ ಜಿಲ್ಲೆಯ ವಿವಿಧ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ನಗರಕ್ಕೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಂಡು ಪ್ರತಿದಿನ ನೀರು ಸರಬರಾಜು ಮಾಡಬೇಕಾಗಿದೆ. ಶೀಘ್ರ ಗ್ರಂಥಾಲಯದ ಮೂಲಭೂತ ಸಮಸ್ಯೆಗಳನ್ನು ಇತ್ಯರ್ಥ ಗೊಳಿಸಬೇಕೆಂದು ತಿಳಿಸಿದರು.

ವಿಮಾನ ನಿಲ್ದಾಣ ಕಾಮಗಾರಿಯ ಕುರಿತು ಮಾತನಾಡಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು. ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ಸೇರಿದಂತೆ. ತೆರವಾದ 108 ಮನೆಗಳ ನಿವಾಸಿಗಳಿಗೆ ಸೂರು ಕಲ್ಪಿಸಲು ಅಗತ್ಯ ಕುರಿತು ಚರ್ಚಿಸಿದರು.

ವಿವಿಧ ಪ್ರಗತಿ ಕಾಮಗಾರಿಗಳು ಹಾಗೂ ವಿವಿಧ ಸಮಸ್ಯೆಗಳ ಇತ್ಯರ್ಥಕ್ಕೆ ಕೈಗೊಂಡ ಯೋಜನೆಗಳ ಕುರಿತು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರ ಕಮಿಷನರ್ ಸೇರಿದಂತೆ ಅನೇಕರು ಹಾಜರಿದ್ದರು.