ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಶಾಸಕ ಕೆ.ಎಂ.ಉದಯ್‌ ಚಾಲನೆ

| Published : Sep 23 2025, 01:03 AM IST

ಸಾರಾಂಶ

ಮನೆ ಮನೆಗೆ ತೆರಳಿ, ಗಣತಿದಾರರು ಹಿಂದುಳಿದ ವರ್ಗ ಆಯೋಗ ಈಗಾಗಲೇ ಸಿದ್ಧಪಡಿಸಿರುವ 60 ಪ್ರಶ್ನೆಗಳನ್ನು ಕೇಳಿ ಮಾಹಿತಿ ದಾಖಲಿಸಲಿದ್ದಾರೆ. ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆ ನಡೆಯಲಿದ್ದು, ರಾಜ್ಯದ 7 ಕೋಟಿ ಕನ್ನಡಿಗರಿಂದ ಮಾಹಿತಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗುರುದೇವರಹಳ್ಳಿ ಕಾಲೋನಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ (ಜಾತಿ ಗಣತಿ)ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಗಣತಿದಾರರಿಗೆ ಶಾಸಕ ಕೆ.ಎಂ.ಉದಯ್ ಅಗತ್ಯ ಮಾಹಿತಿ ಕಿಟ್‌ಗಳನ್ನು ವಿತರಿಸುವ ಮೂಲಕ ಈ ಸಮೀಕ್ಷಾ ಕಾರ್ಯ ಆರಂಭಿಸಿದರು.

ಮನೆ ಮನೆಗೆ ತೆರಳಿ, ಗಣತಿದಾರರು ಹಿಂದುಳಿದ ವರ್ಗ ಆಯೋಗ ಈಗಾಗಲೇ ಸಿದ್ಧಪಡಿಸಿರುವ 60 ಪ್ರಶ್ನೆಗಳನ್ನು ಕೇಳಿ ಮಾಹಿತಿ ದಾಖಲಿಸಲಿದ್ದಾರೆ. ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆ ನಡೆಯಲಿದ್ದು, ರಾಜ್ಯದ 7 ಕೋಟಿ ಕನ್ನಡಿಗರಿಂದ ಮಾಹಿತಿಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಈ ಕಾರ್ಯಕ್ಕಾಗಿ ಶಿಕ್ಷಕರನ್ನು ಗಣತಿದಾರರಾಗಿ ನಿಯೋಜಿಸಲಾಗಿದ್ದು, ಅವರಿಗೆ ಗಣತಿ ಪ್ರಕ್ರಿಯೆ, ಮಾಹಿತಿಯ ಸ್ವರೂಪ ಹಾಗೂ ಸಂಗ್ರಹಣಾ ವಿಧಾನಗಳ ಕುರಿತು ವಿಶೇಷ ತರಬೇತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪರಶುರಾಂ ಸತ್ತೇಗೆರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಿಗಳರು ಧರ್ಮವನ್ನು ಹಿಂದೂ ಎಂದು ಬರೆಸಿ: ಬಸವರಾಜು

ಕನ್ನಡಪ್ರಭ ವಾರ್ತೆ ಮಂಡ್ಯ

ಸೋಮವಾರದಿಂದ ಆರಂಭಗೊಂಡಿರುವ ಜಾತಿ ಸಮೀಕ್ಷೆಯಲ್ಲಿ ತಿಗಳ ಸಮುದಾಯದವರು ಧರ್ಮದ ಕಲಂನಲ್ಲಿ ಹಿಂದೂ ಎಂದು ಬರೆಸುವಂತೆ ಕರ್ನಾಟಕ ತಿಗಳರ (ಅಗ್ನಿವಂಶ ಕ್ಷತ್ರಿಯ) ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಎಚ್.ಬಸವರಾಜು ಹೇಳಿದರು.

ಜಾತಿ ಕಲಂನಲ್ಲಿ ತಿಗಳ ಎಂದು ನಮೂದಿಸಿ ಉಪಜಾತಿ ಕಲಂನಲ್ಲಿ ಅಗ್ನಿವಂಶ ಕ್ಷತ್ರಿಯ ಎಂದು ನಮೂದಿಸುವುದು. ಮಾತೃಭಾಷೆ ಕನ್ನಡ. ಉದ್ಯೋಗ-ವ್ಯಾಪಾರ ಕೃಷಿ ಸಾಗುವಳಿ, ತೋಟಗಾರಿಕೆ ಎಂದು ದಾಖಲಿಸಬೇಕು. ಕುಲಕಸುಬು ಕೃಷಿ ಸಾಗುವಳಿ ಎಂದು ನಮೂದಿಸುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ೨೦ ಸಾವಿರ ಸಂಖ್ಯೆಯಲ್ಲಿ ಸಮುದಾಯದ ಜನರಿದ್ದಾರೆ. ಕರ್ನಾಟಕದಲ್ಲಿ ಸುಮಾರು ೨೫ ಲಕ್ಷ ಜನರಿರಬಹುದೆಂದು ಹೇಳಲಾಗುತ್ತಿದೆ. ಜಾತಿ ಸಮೀಕ್ಷೆಯಿಂದ ನಿಖರವಾದ ಮಾಹಿತಿ ಹೊರಬೀಳಲಿದೆ. ಸಮುದಾಯದ ಎಲ್ಲಾ ಜನರು ಸಮೀಕ್ಷೆಯಲ್ಲಿ ಭಾಗವಹಿಸಬೇಕು ಮತ್ತು ಇತರರಿಗೆ ಜಾಗೃತಿ ಮೂಡಿಸಬೇಕು ಎಂದರು.

ಗೋಷ್ಠಿಯಲ್ಲಿ ಎಸ್.ಕೆ.ಸಿದ್ದಯ್ಯ, ಗುರುಮೂರ್ತಿ, ಕುಮಾರ, ಕೆ.ಎನ್.ಕೃಷ್ಣಯ್ಯ, ಸೂರ್ಯಪ್ರಕಾಶ್, ಶ್ರೀಕಂಠಯ್ಯ, ರಾಜು ಇತರರಿದ್ದರು.ಪರಿಶಿಷ್ಟರು ಧರ್ಮವನ್ನು ಬೌದ್ಧ ಎಂದು ಬರೆಸಿ: ಸುರೇಶ್ ಕಂಠಿ

ಕನ್ನಡಪ್ರಭ ವಾರ್ತೆ ಮಂಡ್ಯ

ಜಾತಿ ಸಮೀಕ್ಷೆ ನಡೆಯುವ ಸಮಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಬಲಗೈ ಸಮುದಾಯದವರು ಧರ್ಮವನ್ನು ಬೌದ್ಧ ಎಂದು ಬರೆಸುವಂತೆ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮನವಿ ಮಾಡಿದರು.

ಜಾತಿ ಕಲಂನಲ್ಲಿ ಪರಿಶಿಷ್ಟ ಜಾತಿ, ಪಂಗಡ, ಉಪಜಾತಿ ಕಲಂನಲ್ಲಿ ಹೊಲಯ ಎಂದು ಬರೆಸಬೇಕು. ತಪ್ಪಾಗಿ ಯಾರೂ ನಮೂದಿಸಬಾರದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮುದಾಯದ ಮುಖಂಡರು, ಪ್ರತಿನಿಧಿಗಳು, ವಿದ್ಯಾವಂತ ಯುವಕರು ಇದರ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವನ್ನು ಮೂಡಿಸಬೇಕು. ತಂಡಗಳಾಗಿ ಊರಿಗೆ ಹೋಗಿ ಜಾಗೃತಿಯನ್ನು ಮೂಡಿಸಿ ನಿಖರವಾಗಿ ಮಾಹಿತಿ ದೊರಕುವಂತೆ ಮಾಡಬೇಕು ಎಂದರು.

ಗೋಷ್ಠಿಯಲ್ಲಿ ಗಂಗರಾಜು, ಆನಂದ, ಸಿದ್ದರಾಜು, ಮಂಗಲ ಶಿವಣ್ಣ, ನಿತ್ಯಾನಂದ ಇದ್ದರು.