ಸಾರಾಂಶ
ಕುಡಿಯುವ ನೀರಿನ ದೃಷ್ಟಿಯಿಂದ ಕೃಷ್ಣಾ ನದಿಗೆ ಕೋಯ್ನಾ ಜಲಾಶಯದಿಂದ ಏಪ್ರಿಲ್ ಅಂತ್ಯದವರೆಗೆ ಕನಿಷ್ಟ ೨ ಟಿಎಂಸಿ ನೀರು ಬಿಡುಗಡೆ ಮಾಡಿಸಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕುಡಿಯುವ ನೀರಿನ ದೃಷ್ಟಿಯಿಂದ ಕೃಷ್ಣಾ ನದಿಗೆ ಕೋಯ್ನಾ ಜಲಾಶಯದಿಂದ ಏಪ್ರಿಲ್ ಅಂತ್ಯದವರೆಗೆ ಕನಿಷ್ಟ ೨ ಟಿಎಂಸಿ ನೀರು ಬಿಡುಗಡೆ ಮಾಡಿಸಬೇಕು ಎಂದು ತೇರದಾಳ ಶಾಸಕ ಸಿದ್ದು ಸವದಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆ ನಿಭಾಯಿಸುವ ನಿಟ್ಟಿನಲ್ಲಿ ತೇರದಾಳ ಮತಕ್ಷೇತ್ರದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಬೋರವೆಲ್ಗಳಿಂದ ಅಗತ್ಯವಾದಷ್ಟು ಮಾತ್ರ ನೀರು ಮಾತ್ರ ಪಡೆದು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಎಲ್ಲರೂ ಸಹಕರಿಸಬೇಕಿದೆ. ಬೇಸಿಗೆಯಲ್ಲಿ ನೀರನ್ನು ಕಾಯ್ದಿಟ್ಟುಕೊಳ್ಳುವುದರ ಜೊತೆಗೆ ಮಿತವಾಗಿ ಬಳಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ಭಾಗದ ಜನತೆಗೆ ದ್ರೋಹ ಬೇಡ:
ಹಿಪ್ಪರಗಿ ಜಲಾಶಯದಿಂದ ೦.೨೫ ಟಿಎಂಸಿ ನೀರು ಬಿಟ್ಟಿರುವುದು ಅವೈಜ್ಞಾನಿಕವಾಗಿದ್ದು, ಅಧಿಕಾರ ಇದೆ ಎಂದು ನೀರು ಲಿಫ್ಟ್ ಮಾಡಿಕೊಂಡು ಹೋಗುವುದು ಸರಿಯಲ್ಲ. ಈ ಭಾಗದಲ್ಲಿ ನಗರ, ಪಟ್ಟಣಗಳು, ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಬಗ್ಗೆ ಯೋಚನೆ ಮಾಡಬೇಕು. ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರ ಜೊರ್ಗೆ ನಾನು ಮತ್ತು ಜಮಖಂಡಿ ಶಾಸಕ ಗುಡಗುಂಟಿಯವರು ಮಾತನಾಡಿ, ನೀರು ಲಿಫ್ಟ್ ಮಾಡುವುದನ್ನು ನಿಲ್ಲಸಬೇಕು ಎಂದು ಮನವಿ ಮಾಡಿದ್ದೇವೆ. ಈ ಕುರಿತು ಎಂ.ಬಿ. ಪಾಟೀಲರಿಗೆ ವಿಚಾರಿಸಿದಾಗ ನಾವು ಕೂಡ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದು ಬೆಳೆಗಳಿಗೆ ಅಲ್ಲ. ನಿಮ್ಮ ಭಾಗಕ್ಕೆ ತೊಂದರೆಯಾಗದಂತೆ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಡಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಈ ಭಾಗದ ಜನರ ನೀರಿನ ಸಮಸ್ಯೆ ಬಗ್ಗೆ ಯೋಚಿಸದೇ ತಮ್ಮ ಕ್ಷೇತ್ರದ ಜನರ ವೈಯಕ್ತಿಕ ಸ್ವಾರ್ಥಕ್ಕಾಗಿ ನೀರನ್ನು ಲಿಫ್ಟ್ ಮಾಡಿದ್ದು ಸರಿಯಲ್ಲ. ಸರ್ಕಾರದ ಅಧಿಕಾರ ದುರುಪಯೋಗ ಪಡಿಸಿಕೊಂಡು ಕೃಷ್ಣಾ ನದಿಯ ಎಡಬದಿಯಲ್ಲಿರುವ ರೈತರು ಮತ್ತು ಸಾರ್ವಜನಿಕರಿಗೆ ಅನ್ಯಾಯ ಮಾಡುವ ಕೆಲಸ ನಡೆದಿದೆ. ಮಾನವೀಯತೆಯ ದೃಷ್ಟಿಯಿಂದ ನೀರು ಬಿಡಬಾರದಿತ್ತು. ಮಳೆಗಾಲದಲ್ಲಿ ನಿಮಗೆ ಬೇಕಾದಷ್ಟು ನೀರು ತೆಗೆದುಕೊಳ್ಳಿ. ಆದರೆ ಬೇಸಿಗೆಯ ಸಂದರ್ಭದಲ್ಲಿ ನಿಂತ ನೀರನ್ನು ಲಿಫ್ಟ್ ಮಾಡಿರುವುದು ಈ ಭಾಗದ ಜನತೆ ಮಾಡಿದ ದ್ರೋಹವಾಗಿದೆ. ಕೃಷ್ಣಾ ಎಡಬದಿಯ ರೈತರ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂದು ಸವದಿ ಆರೋಪಿಸಿದರು.