ಯಲ್ಲಾಪುರ: ತಾಲೂಕಿನ ಮಂಚಿಕೇರಿ ವಲಯದ ಜಕ್ಕೊಳ್ಳಿ ಶಾಖಾ ವ್ಯಾಪ್ತಿಯ ಚಿಪಗೇರಿ ಗ್ರಾಮದ ವನವಾಸಿ ಕಲ್ಯಾಣ ವಸತಿ ನಿಲಯದಲ್ಲಿ ಜೀವನ ವಿಕಾಸ ಟ್ರಸ್ಟ್ ಯಲ್ಲಾಪುರ ಹಾಗೂ ವನವಾಸಿ ಕಲ್ಯಾಣ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗಾಗಿ ನಾಲ್ಕು ದಿನಗಳ ಬೇಸಿಗೆ ಶಿಬಿರ ಆರಂಭಗೊಂಡಿತು.
ಕಾರ್ಯಕ್ರಮವನ್ನು ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಲ್ಲಿ ಗುಬ್ಬಚ್ಚಿಗಳ ಪಾತ್ರವನ್ನು ವಿವರಿಸಿ, ಪರಿಸರ ವ್ಯವಸ್ಥೆಯಲ್ಲಿ ಒಂದು ಚಿಕ್ಕ ಪಕ್ಷಿಯೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.ಜಾಗತಿಕ ತಾಪಮಾನ ಏರಿಕೆ, ಅತಿಯಾದ ರಾಸಾಯನಿಕ ಬಳಕೆ ಹಾಗೂ ಆಧುನಿಕೀಕರಣದ ಪರಿಣಾಮವಾಗಿ ಗುಬ್ಬಚ್ಚಿಗಳ ಸಂಖ್ಯೆ ಕುಸಿಯುತ್ತಿರುವುದು ಚಿಂತಾಜನಕವಾಗಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಕೀಟ ನಿಯಂತ್ರಣ ಹಾಗೂ ಬೀಜ ಪ್ರಸರಣದಲ್ಲಿ ಗುಬ್ಬಚ್ಚಿಗಳ ಮಹತ್ವವನ್ನು ವಿವರಿಸಿ, ಅವುಗಳ ಸಂರಕ್ಷಣೆಗೆ ಸಮಾಜದ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.ಮನೆಯ ಸುತ್ತಮುತ್ತ ಪರಿಸರ ಸ್ನೇಹಿ ಗೂಡುಗಳನ್ನು ನೇತು ಹಾಕುವುದು ಹಾಗೂ ಬೇಸಿಗೆಯಲ್ಲಿ ನೀರಿನ ತೊಟ್ಟಿಗಳನ್ನು ಇಡುವ ಮೂಲಕ ಗುಬ್ಬಚ್ಚಿಗಳಿಗೆ ನೆರವಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ಮನು ವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಭಾಗವಹಿಸಿದ್ದರು. ವಸತಿ ನಿಲಯದ ಅಧ್ಯಕ್ಷ ಸೋಮನಾಥ ಸಿದ್ಧಿ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಗುಬ್ಬಚ್ಚಿ ಗೂಡುಗಳನ್ನು ವಿತರಿಸಲಾಯಿತು. ಪಕ್ಷಿಗಳಿಗೆ ಇಷ್ಟವಾದ ಇಲಾಚಿ (ಸಿಹಿ ಹುಣಸೆ) ಸಸಿಯನ್ನು ವಸತಿ ನಿಲಯದ ಆವರಣದಲ್ಲಿ ನೆಟ್ಟು ನೀರುಣಿಸಲಾಯಿತು. ಕಾರ್ಯಕ್ರಮದಲ್ಲಿ ವಸತಿ ನಿಲಯದ ಸಿಬ್ಬಂದಿ, ಜೀವನ ವಿಕಾಸ ಟ್ರಸ್ಟ್ನ ಪದಾಧಿಕಾರಿಗಳು, ಅರಣ್ಯ ಇಲಾಖೆಯ ಮಂಚಿಕೇರಿ ಮತ್ತು ಕಾತೂರ ವಲಯದ ಸಿಬ್ಬಂದಿ, ಚಿಪಗೇರಿ ಗ್ರಾಮದ ಹಿರಿಯರು ಭಾಗವಹಿಸಿದ್ದರು.