ವಿದ್ಯಾರ್ಥಿಗಳಿಗೆ ಕಾಲೇಜು ಬ್ಯಾಗ್‌ ಸೇರಿದಂತೆ ಶೈಕ್ಷಣಿಕ ಪರಿಕರ ವಿತರಿಸಿ ಹೂಡಿ ವಿಜಯಕುಮಾರ್‌

ಕನ್ನಡಪ್ರಭ ವಾರ್ತೆ ಮಾಲೂರು

ರಾಜ್ಯ ಸರ್ಕಾರವು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೀಡಬೇಕಾದ ಅನುದಾನಗಳನ್ನು ಸಕಾಲದಲ್ಲಿ ನೀಡದೆ ಖೋತ ಮಾಡುತ್ತಿರುವುದರಿಂದ ಸರ್ಕಾರಿ ಶಾಲೆಗಳು ಸೌಲಭ್ಯ ರಹಿತವಾಗುತ್ತಿದ್ದು, ನಮ್ಮ ಊರ ಶಾಲೆಯನ್ನು ಉಳಿಸಿಕೊಂಡು ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಜಬಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜೆಡಿಎಸ್‌ ಮುಖಂಡ ಹೂಡಿ ವಿಜಯಕುಮಾರ್‌ ಹೇಳಿದರು.

ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜು ಬ್ಯಾಗ್‌ ಸೇರಿದಂತೆ ಶೈಕ್ಷಣಿಕ ಪರಿಕರ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗೆ ಗ್ರಾಮಾಂತರ ಪ್ರದೇಶದ ರೈತರ ಮಕ್ಕಳು ಶೋಷಿತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಅವರ ಉತ್ತಮ ವಿದ್ಯಾಭ್ಯಾಸ ಮಾಡಲು ರಾಜ್ಯ ಸರ್ಕಾರದ ಅನುದಾನ ಕೊರತೆ ಹೆಚ್ಚಾಗಿ ಕಾಡುತ್ತಿರುತ್ತದೆ.

ಇಂತಹ ಕಾಲಘಟ್ಟದಲ್ಲಿ ದಾನಿಗಳು, ಉಳ್ಳವರು ಹಾಗೂ ತಾಲೂಕಿನ ಕೈಗಾರಿಕೆ ಕಂಪನಿಗಳು ಸಹಕಾರ ನೀಡಲು ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಶೈಕ್ಷಣಿಕ ,ಆರೋಗ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸಲಾಗುತ್ತಿದೆ ಎಂದರು.


ಜೆಡಿಎಸ್‌ ಹಿರಿಯ ಮುಖಂಡ ಆರ್.ಪ್ರಭಾಕರ್‌ ಮಾತನಾಡಿ, ಕಳೆದ ಏಳೆಂಟು ವರ್ಷದಿಂದ ತಾಲೂಕಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವ ಹೂಡಿ ವಿಜಯಕುಮಾರ್‌ ಅವರು ಶಿಕ್ಷಣ,ಆರೋಗ್ಯ ಹಾಗೂ ಯುವಕರಿಗೆ ಉದ್ಯೋಗ ಅವಕಾಶಕ್ಕೆ ಪೂರಕವಾಗಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಪ್ರಾಂಶುಪಾಲ ರಾಮಕೃಷ್ಣಪ್ಪ ಮಾತನಾಡಿದರು. ಜೆಡಿಎಸ್‌ ತಾಲೂಕು ಅಧ್ಯಕ್ಷ ಬನಹಳ್ಳಿ ನಾರಾಯಣಸ್ವಾಮಿ, ಜೆಡಿಎಸ್‌ ಮುಖಂಡರಾದ ತಾ.ಪಂ.ಮಾಜಿ ಸದಸ್ಯ ಶ್ರೀನಾಥ್‌ ,ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಶಿವಾರನಾಣಿ, ಶೇಖರ್‌, ಗಣೇಶ್‌, ಎಸ್.ನಾರಾಯಣಸ್ವಾಮಿ, ಶ್ರೀನಿವಾಸ್‌, ಬುಜ್ಜಿ ಶ್ರೀನಾಥ್‌, ದಿಬ್ಬಯ್ಯ, ಮುಖ್ಯ ಶಿಕ್ಷಕ ಶ್ರೀನಿವಾಸ್‌, ನಂಜುಂಡೇಗೌಡ, ನಾಗರಾಜ್‌, ನಾರಾಯಣಪ್ಪ ಇನ್ನಿತರರು ಇದ್ದರು.