ಮೂಡುಬಿದಿರೆ: ಸೇವಾಂಜಲಿ ಎಜುಕೇಷನ್ ಟ್ರಸ್ಟ್ ಪ್ರವರ್ತಿತ ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ದಿ. ಕೆ. ವಿಜಯ ಕಾಮತ್ ಸ್ಮರಣಾರ್ಥ ಗೀತಾ ವಿಜಯ ಕಾಮತ್ 8 ಲಕ್ಷ ರು. ವೆಚ್ಚದಲ್ಲಿ ಕೊಡುಗೆಯಾಗಿ ನಿರ್ಮಿಸಿದ ನೂತನ ಶಾಲಾ ಕೊಠಡಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಉಮಾನಾಥ ಕೋಟ್ಯಾನ್, ವಿದ್ಯಾ ದೇಗುಲವೇ ಮೊದಲ ದೇವಾಲಯ. ಬಾಲ್ಯದಲ್ಲಿಯೇ ಸಂಸ್ಕಾರಯುತ ಶಿಕ್ಷಣ ಪಡೆದ ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಈ ನಿಟ್ಟಿನಲ್ಲಿ ಪ್ರೇರಣಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ದಾನಿಗಳು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವುದು ದೇವರು ಮೆಚ್ಚುವ ಕಾರ್ಯವಾಗಿದೆ ಎಂದು ಹೇಳಿದರು.ದಾನಿಗಳ ಸಹಕಾರದಿಂದ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿವೆ. ಸನಾತನ ಹಿಂದೂ ಗುರುಕುಲ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿರುವ ಪ್ರೇರಣಾ ಶಾಲೆಗೆ ಗೀತಾ ವಿಜಯ ಕಾಮತ್ ನೀಡಿರುವ ಕೊಡುಗೆ ಇತರರಿಗೂ ಮಾದರಿ ಹಾಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೀತಾ ವಿಜಯ ಕಾಮತ್ ಅವರನ್ನು ಗೌರವಿಸಲಾಯಿತು.ಸಂಚಾಲಕ ಎಂ. ಶಾಂತರಾಮ ಕುಡ್ವ ಅಭಿನಂದನಾ ನುಡಿಗಳನ್ನಾಡಿ, ಸತ್ಕಾರ್ಯ ಮಾಡುವವರನ್ನು ಗೌರವಿಸಬೇಕೆಂಬುದು ಶಾಸ್ತ್ರದ ಸಂದೇಶವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಹಿರಿಯ ಸಹಕಾರ ಧುರೀಣ ಹಾಗೂ ಪಡುಮಾರ್ನಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಯಾನಂದ ಪೈ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಂದ್ರಹಾಸ ಆಚಾರ್ ಮಾತನಾಡಿ, ಗೀತಾ ವಿಜಯ ಕಾಮತ್ ಅವರ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದರು.
ಶಾಲೆಯ ನೂತನ ಕೊಠಡಿಯ ನಾಮಫಲಕವನ್ನು ಗೀತಾ ವಿಜಯ ಕಾಮತ್ ಅನಾವರಣಗೊಳಿಸಿದರು.ವಿದ್ಯಾಸಂಸ್ಥೆಯ ಅಧ್ಯಕ್ಷ ರಾಜೇಶ್ ಎಂ. ಬಂಗೇರ ಸ್ವಾಗತಿಸಿದರು. ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲಾ ವಂದಿಸಿದರು.
ಮುಖ್ಯೋಪಾಧ್ಯಾಯಿನಿ ವತ್ಸಲಾ ರಾಜೇಶ್, ಟ್ರಸ್ಟಿಗಳಾದ ಮಂಜುನಾಥ ಶೆಟ್ಟಿ, ಎಸ್. ಎನ್. ಬೋರ್ಕರ್, ಶಾಲೆಯ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.