ಧಾರವಾಡ:

ಜಗತ್ತು ಇಂದು ದೇವರ ರೂಪದಲ್ಲಿ ಕಾಣುವ ತಾಯಿಯಿಂದಲೇ ಅಸ್ತಿತ್ವದಲ್ಲಿದೆ. ತಾಯ್ತನವೇ ಇಲ್ಲದೇ ಹೋದರೆ ವಿಶ್ವದ ಅಸ್ತಿತ್ವವೇ ನಿಂತು ಹೋಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಆಲೂರು ಭವನದಲ್ಲಿ ಶುಕ್ರವಾರ ಸಂಜೆ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಹೊರ ತಂದ ಲೋಕ ವಂದಿತ ಅವ್ವ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜಕ್ಕೆ ಕೊಡುಗೆ ನೀಡಿದ ಅನೇಕ ತಾಯಂದಿರನ್ನು ನಾವು ನೆನೆಯುತ್ತೇವೆ. ಇವರೆಲ್ಲರಿಗಿಂತಲೂ ಮಿಗಿಲಾಗಿರುವುದು ತಾಯ್ತನವೇ ಆಗಿದ್ದು, ಅದಕ್ಕೆ ಯಾವುದೇ ಜಾತಿ, ಧರ್ಮ, ದೇಶ, ಪ್ರದೇಶದ ಹಂಗಿಲ್ಲ ಎಂದರು.

ವ್ಯಕ್ತಿ ರಾಜ್ಯಕ್ಕೆ ದೊಡ್ಡವನಾದರೂ ತಾಯಿಗೆ ಮಗುವೇ ಆಗಿರುತ್ತಾನೆ. ನಮ್ಮ ತಾಯಿ ಗಂಗಮ್ಮ ಕೂಡ ಕೊನೆ ವರೆಗೂ ನನಗೆ ಸದ್ವಿಚಾರ, ಸದ್ಗುಣ ಮತ್ತು ಉತ್ತಮ ಸಂಸ್ಕಾರಗಳನ್ನೆ ನೀಡಿ ಹೋದರು. ಅವರು ಇನ್ನಷ್ಟು ದಿನ ಬದುಕಿದ್ದರೆ ನಾನು ಇನ್ನಷ್ಟು ಸಂಸ್ಕಾರವಂತನಾಗಿರುತ್ತಿದ್ದೆ ಎಂದು ಹೇಳಿದರು.

ಕೃತಿ ಬಿಡುಗಡೆಗೊಳಿಸಿದ ಸಂಗೀತಗಾರ್ತಿ ಸಂಗೀತಾ ಕಟ್ಟಿ ಕುಲಕರ್ಣಿ, ಜಾನಪದ ಸಂಸ್ಕೃತಿ ಜನರ ಸಂಸ್ಕೃತಿಯಾಗಿದ್ದು, ಗಂಗಮ್ಮ ಬೊಮ್ಮಾಯಿ ಅವರು ಕೂಡ ಜನಪದ ಹಾಡುಗಳನ್ನು ಹಾಡುತ್ತಿದ್ದರು. ಅವರಲ್ಲಿದ್ದ ತಾಯ್ತನವೇ ಅವರಿಂದ ಸಾಕಷ್ಟು ಜನರು ಉತ್ತಮವಾಗಿ ಬೆಳೆಯಲು ಪ್ರೇರಣೆ ನೀಡಿತು. ಅಂತಹ ಮಹನೀಯರ ಹೆಸರಲ್ಲಿ ಇಂದು ನಡೆಯುತ್ತಿರುವ ಸಾಹಿತ್ಯ ಸೇವೆ, ನಿಜಕ್ಕೂ ಮೆಚ್ಚುವಂತಹದ್ದು ಎಂದು ಹೇಳಿದರು.


ಹಿರಿಯ ಅಧಿಕಾರಿ ಜಯರಾಮ್ ರಾಯಾಪೂರ ಮಾತನಾಡಿ, ಮಹಿಳೆಯರು ಒಂದೊಂದು ಸಾಮ್ರಾಜ್ಯವನ್ನು ತಮ್ಮ ಜಾಣ್ಮೆಯಿಂದ ರಕ್ಷಣೆ ಮಾಡಿಕೊಳ್ಳುವಷ್ಟು ಸಬಲರಾಗಿರುವುದು ಇತಿಹಾಸದಿಂದ ಗೊತ್ತಾಗುತ್ತದೆ. ದಿ. ಎಸ್.ಆರ್. ಬೊಮ್ಮಾಯಿ ಅವರ ಕುರಿತು ಕೂಡ ಒಂದಿಷ್ಟು ಪುಸ್ತಕಗಳು ಬರಬೇಕು ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, ನಮ್ಮಂತಹ ಅನೇಕ ರಾಜಕಾರಣಿಗಳಿಗೆ ಗಂಗಮ್ಮ ಬೊಮ್ಮಾಯಿ ಅವರು ಮಾರ್ಗದರ್ಶಕರಾಗಿದ್ದರು. ಅವರ ಸ್ಮರಣೆಯಲ್ಲಿ ಸಾಹಿತ್ಯ ಬರುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಶಾಸಕರಾದ ಅರವಿಂದ ಬೆಲ್ಲದ, ಸಿ.ಸಿ. ಪಾಟೀಲ್, ದಾನಪ್ಪ ಕಬ್ಬೇರ ಇದ್ದರು. ಲೇಖಕ ಚಂದ್ರಶೇಖರ ವಸ್ತ್ರದ ಕೃತಿ ಪರಿಚಯ ಮಾಡಿದರು. ಶಂಕರ ಕುಂಬಿ ನಿರೂಪಿಸಿ, ವಂದಿಸಿದರು. ಹಿರಿಯ ಸಾಹಿತಿಗಳು, ರಾಜಕಾರಣಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.