ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ರಾಷ್ಟ್ರೀಯ ಹೆದ್ದಾರಿ ೭೫ರ ಚತುಷ್ಪಥ ಕಾಮಗಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಡಗೂಡಿ ಖುದ್ದು ಸ್ಥಳ ಪರಿಶೀಲನೆ ನಡೆಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ನೈಜ ಸಮಸ್ಯೆಗಳನ್ನು ಬಗೆಹರಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.ಹೆದ್ದಾರಿ ಇಲಾಖಾ ಯೋಜನಾ ನಿರ್ದೇಶಕ ಜಾವೇದ್ ಹಾಗೂ ಕೆಎನ್ಆರ್ ಸಂಸ್ಥೆಯ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಸಿಂಗ್ ಅವರ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಸಂಸದ ಬ್ರಿಜೇಶ್ ಚೌಟ ಗುರುವಾರ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದರು.
ಹೆದ್ದಾರಿ ಕಾಮಗಾರಿಯಿಂದಾಗಿ ಪೇರಮೊಗೆರು ಎಂಬಲ್ಲಿ ದೇಂತಡ್ಕ ದೇವಾಲಯಕ್ಕೆ ಸಂಪರ್ಕ ರಸ್ತೆಯೇ ಇಲ್ಲದಂತಾಗಿರುವ ಬಗ್ಗೆ ಜನರು ಸಂಸದರಿಗೆ ಅಹವಾಲು ಸಲ್ಲಿಸಿದರು. ದೇವಾಲಯ ಸಂಪರ್ಕಿಸುವ ರಸ್ತೆಯನ್ನು ಹೆದ್ದಾರಿಯೊಂದಿಗೆ ಜೋಡಿಸಲು ಅಗತ್ಯ ಕ್ರಮ ಕೈಕೊಳ್ಳುವಂತೆ ಸಂಸದರು ಸೂಚಿಸಿದರು.ಪೆರ್ನೆಯ ಕಡಂಬು ಎಂಬಲ್ಲಿ ಕೃಷಿ ಭೂಮಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಹಿಂದಿನ ಗುತ್ತಿಗೆದಾರ ಸಂಸ್ಥೆ ಅಳವಡಿಸಿದ್ದ ಮೋರಿಯನ್ನು ಈಗಿನ ಗುತ್ತಿಗೆದಾರ ಸಂಸ್ಥೆ ಮುಚ್ಚಿದೆ ಎಂಬ ಸ್ಥಳೀಯ ದೂರನ್ನು ಪರಿಶೀಲಿಸಿ ಕೃಷಿಕರಿಗೆ ಅನುಕೂಲವಾಗಲು ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ ಸತ್ತಿಕಲ್ನಿಂದ ಪೆರ್ನೆವರೆಗೆ ಡೈವರ್ಶನ್ ಕಲ್ಪಿಸಬೇಕೆಂಬ ಸ್ಥಳೀಯರ ಬೇಡಿಕೆಯನ್ನೂ ಪರಿಶೀಲಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಪ್ರಸನ್ನ ಮಾರ್ತ, ದಯಾನಂದ ಉಜಿರೆಮಾರ್, ಪುನೀತ್ ಮಾಡತ್ತಾರ್,ಶಿವಪ್ಪ ನಾಯ್ಕ, ನಿತೀಶ್ ಶಾಂತಿವನ, ಸಾಜಾ ರಾಧಾಕೃಷ್ಣ ಆಳ್ವ, ಸಂಜೀವ ಮಠಂದೂರು, ವಿದ್ಯಾಧರ ಜೈನ್, ಪುರುಷೋತ್ತಮ ಮುಂಗ್ಲಿಮನೆ, ಪ್ರಶಾಂತ್ ಶಿವಾಜಿನಗರ, ಚಂದ್ರಶೇಖರ್ ಬಪ್ಪಳಿಗೆ ಮತ್ತಿತರರು ಇದ್ದರು.