ಎಸಿ- ವಕೀಲರ ನಡುವಿನ ವಿವಾದಕ್ಕೆ ತೆರೆ

| Published : Jan 31 2025, 12:45 AM IST

ಸಾರಾಂಶ

ಭಿನ್ನಭಿಪ್ರಾಯಗಳು ಸಹಜವಾದರೂ ಅದನ್ನು ಬೆಳೆಸಿಕೊಂಡು ಹೋಗುವುದು ಇಬ್ಬರಿಗೂ ಗೌರವ ತರುವುದಿಲ್ಲ. ವೈಯುಕ್ತಿಕ ಪ್ರತಿಷ್ಠೆಗಳಿಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗಬಾರದು. ಅಧಿಕಾರಿಗಳು ಮತ್ತು ವಕೀಲರು ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಗೌರವಿಸಬೇಕು. ಶುಕ್ರವಾರದಿಂದ ಸಹಾಯಕ ಕಮಿಷನರ್ ನ್ಯಾಯಾಲಯದ ಕಲಾಪಗಳು ಎಂದಿನಂತೆ ನಡೆಯಲಿವೆ.

ಕನ್ನಡಪ್ರಭ ವಾರ್ತೆ ಕೋಲಾರನಗರದ ಸಹಾಯಕ ಕಮಿಷನರ್ ಮತ್ತು ವಕೀಲರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳಿಗೆ ಜಿಲ್ಲಾ ಸೆಷನ್ ನ್ಯಾಯಾಧೀಶರಾದ ಮಂಜುನಾಥ್ ತೆರೆ ಎಳೆದಿದ್ದಾರೆ. ನ್ಯಾ. ಮಂಜುನಾಥ್ ಹಾಗೂ ಅಪರ ಜಿಲ್ಲಾಧಿಕಾರಿ ಮಂಗಳ ಅವರ ಸಮ್ಮುಖದಲ್ಲಿ ಗುರುವಾರ ಬೆಳಗ್ಗೆ ನ್ಯಾಯಾಮೂರ್ತಿಗಳ ಕೊಠಡಿಯಲ್ಲಿ ನಡೆದ ಸೌಹಾರ್ಧ ಸಭೆ ಯಶಸ್ವಿಗೊಂಡಿತು. ವೈಯಕ್ತಿಕ ಪ್ರತಿಷ್ಠೆ ಬೇಡ

ಸಹಾಯಕ ಕಮಿಷನರ್ ಡಾ.ಮೈತ್ರಿ ಹಾಗೂ ವಕೀಲರ ಸಂಘದ ಪದಾಧಿಕಾರಿಗಳ ನಡುವೆ ಉಂಟಾಗಿದ್ದ ಭಿನ್ನಭಿಪ್ರಾಯಗಳ ಪ್ರಕರಣವನ್ನು ಸೌಹಾರ್ಧ ಸಭೆಯಲ್ಲಿ ನ್ಯಾಯಾಧೀಶರಾದ ಮಂಜುನಾಥ್ ಅವರು ಮಾತನಾಡಿ, ಭಿನ್ನಭಿಪ್ರಾಯಗಳು ಸಹಜವಾದರೂ ಅದನ್ನು ಬೆಳೆಸಿಕೊಂಡು ಹೋಗುವುದು ಇಬ್ಬರಿಗೂ ಗೌರವ ತರುವುದಿಲ್ಲ. ವೈಯುಕ್ತಿಕ ಪ್ರತಿಷ್ಠೆಗಳಿಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದು ಬೇಡ, ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಗೌರವಿಸಿ, ನಾಳೆಯಿಂದ ಸಹಾಯಕ ಕಮೀಷನರ್ ನ್ಯಾಯಾಲಯದ ಕಲಾಪಗಳು ಎಂದಿನಂತೆ ಮುಂದುವರೆಸಿಕೊಂಡು ಹೋಗಲು ಸೂಚಿಸಿದಾಗ ಅದಕ್ಕೆ ಎಲ್ಲರೂ ಸಮ್ಮತಿಸಿದರು. ಸಾರ್ವಜನಿಕರ ಹಿತ ಮುಖ್ಯ

ಕೋರ್ಟ್‌ನಲ್ಲಿ ನ್ಯಾಯಾವಾದಿಗಳು ತಮ್ಮ ಕಕ್ಷಿದಾರರಿಗೆ ಸಾಮಾಜಿಕ ನ್ಯಾಯ ದೊರಕಿಸಲು ವಾದಗಳನ್ನು ಮಂಡಿಸುತ್ತಾರೆ. ಎಲ್ಲರೂ ಸಾರ್ವಜನಿಕರ ಹಿತಕ್ಕಾಗಿ ನಿರ್ವಹಿಸುವ ಕರ್ತವ್ಯದಲ್ಲಿ ಪರಸ್ಪರ ಗೌರವಗಳನ್ನು ಸಲ್ಲಿಸಿಕೊಂಡು ತಮ್ಮ ವೃತ್ತಿಯಲ್ಲಿ ಮುಂದುವರೆದರೆ ಮಾತ್ರ ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ಉತ್ತಮವಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಆಡಳಿತ ನಡೆಸಲು ಸಾಧ್ಯ ಎಂದರು. ಸಭೆಯಲ್ಲಿ ಹಿರಿಯ ವಕೀಲರಾದ ಕೆ.ವಿ.ಶಂಕರಪ್ಪ, ವಕೀಲರ ಸಂಘದ ಕಾರ್ಯದರ್ಶಿ ಬೈರರೆಡ್ಡಿ, ಖಜಾಂಜಿ ನವೀನ್, ಮಾಜಿ ಅಧ್ಯಕ್ಷ ಶ್ರೀಧರ್, ಜಯರಾಮ್ ಇದ್ದರು.