ಉಡುಪಿ: ಕೆಲವೊಂದು ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಬಾರದು ಎಂಬ ಚರ್ಚೆ ಕೂಡ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಂದೇ ಮಾತರಂಗೆ ರಾಷ್ಟ್ರಗೀತೆ ಸಮನಾದ ಪ್ರಾಮುಖ್ಯತೆ ಸಿಕ್ಕಿರುವುದು ಸಂತೋಷ ಮತ್ತು ಸಾರ್ಥಕವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಕಾರದಲ್ಲಿ ವಂದೇ ಮಾತರಂನ 150 ರ ಸಂಭ್ರಮಾಚರಣೆ - ಕವಿಚಕ್ರವರ್ತಿ ಕಾಳಿದಾಸ ಜಯಂತಿ - ಯುವ ರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ದೇಶಾದ್ಯಂತ 4000 ಕಲಾವಿದರು 20 ಲಕ್ಷ ಪ್ರೇಕ್ಷಕರ ಮುಂದೆ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದ ಅವರು ಉಡುಪಿಗೆ ಈ ಕಾರ್ಯಕ್ರಮವನ್ನು ತಂದ ರಂಗಭೂಮಿ ಅಭಿನಂದನೀಯ ಎಂದರು. ಮಣಿಪಾಲ ಮಾಹೆಯ ಸಹಕುಲಾದಿಪತಿ ಡಾ. ಎಚ್.ಎಸ್. ಬಲ್ಲಾಳ್, ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಕಲೆಯ ಬಗ್ಗೆ ಅರಿವು ಮೂಡಿಸಲು ರಂಗಭೂಮಿ ಉಡುಪಿ ಸಂಸ್ಥೆ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ. ಇದು ಇಂದಿನ ಅಗತ್ಯ ಎಂದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಪೂರ್, ಶಾಸಕರಾದ ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಡಿ, ಗುರುರಾಜ ಗಂಟಿಹೊಳೆ, ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ, ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ತುಳುಕೂಟ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಾಹೆಯ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ನಾರಾಯಣ ಸಭಾಹಿತ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಗಿರಿಧರ್ ಪೈ, ಡಾ. ದೇವಿದಾಸ ನಾಯಕ್, ಡಾ.ವಿಶ್ವನಾಥ ಪೈ , ಡಾ. ಮಾಲತಿ ದೇವಿ ಉಪಸ್ಥಿತರಿದ್ದರು. ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಯುವ ರಂಗೋತ್ಸವ ಕಾರ್ಯಕ್ರಮದಡಿ ಸ್ವಾತಂತ್ರ್ಯ ಶರದಿ ನಾಟಕ ಪ್ರಸ್ತುತಗೊಂಡಿತು.39 ಭಾಷೆಗಳಲ್ಲಿ ಕಾರ್ಯಕ್ರಮ ವಂದೇ ಮಾತರಂ ಬಗ್ಗೆ ಮಾತನಾಡಿದ ಪ್ರೊ. ಪವನ್ ಕಿರಣ್‌ಕೆರೆ, ರಂಗಭೂಮಿ ಮೂಲಕ ದೇಶಪ್ರೇಮ ಸಂಸ್ಕೃತಿ ಪ್ರೀತಿ ಬೆಸೆಯುವ ಸಲುವಾಗಿ ಭಾರತದಾದ್ಯಂತ 150 ರಂಗ ಪ್ರಯೋಗ ಆಯೋಜನೆಗೊಂಡಿದೆ. ಏಕಕಾಲದಲ್ಲಿ 150ಕ್ಕೂ ಹೆಚ್ಚು ಸಂಸ್ಥೆಗಳ ಸಹಭಾಗಿತ್ವದಲ್ಲಿ ಎಲ್ಲಾ ರಾಜ್ಯ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು 39 ಭಾಷೆಗಳಲ್ಲಿ, 4000 ರಂಗಕರ್ಮಿಗಳಿಂದ ಒಂದು ದೇಶ ಒಂದು ಆಚರಣೆ ಭಾವೈಕ್ಯ ಸಾರಲು ಈ ರಂಗಮಹೋತ್ಸವ ನಡೆಯುತ್ತಿದೆ ಎಂದರು.