ಮಡಿಕೇರಿ ದಸರಾ ಸಮಿತಿಯಿಂದ ಬಹುಭಾಷಾ ಕವಿಗೋಷ್ಠಿ

| Published : Oct 10 2024, 02:15 AM IST

ಸಾರಾಂಶ

ರಾಷ್ಟ್ರದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತಿಕೆ ಹೊಂದಿದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹೇಳಿದರು. ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತಿಕೆ ಹೊಂದಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ನಡೆದ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ ಸೇರಿದಂತೆ ಇತರೆ ಭಾಷೆಗಳಿಗೂ ಅವಕಾಶ ಕಲ್ಪಿಸಿರುವುದು ಉತ್ತಮ ಬೆಳವಣಿಗೆ, ಜೊತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಬೇಕು ಎಂದು ಸಲಹೆ ಮಾಡಿದರು.

ಕತೆ, ಕವನ, ಕಾದಂಬರಿ, ಹಾಸ್ಯ ಲೇಖನಗಳು, ವಿಡಂಬಣೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವಕಾಶಗಳು ಹೆಚ್ಚು ಲಭಿಸಲಿವೆ. ಆ ನಿಟ್ಟಿನಲ್ಲಿ ಎಲ್ಲರಿಗೂ ಪ್ರೋತ್ಸಾಹಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಸಂಗೀತ ನಿರ್ದೇಶಕ ಎಂ.ಆರ್.ಚರಣ್ ರಾಜ್ ಮಾತನಾಡಿ ಸಾಹಿತ್ಯ ಮತ್ತು ಸಂಗೀತಕ್ಕೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು.

ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳು ಪ್ರತಿಯೊಬ್ಬರ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಕಲೆ, ಸಾಹಿತ್ಯ, ಸಂಗೀತ ವಿಚಾರಗಳು, ಆಲೋಚನೆಗಳು ಪ್ರಬುದ್ಧತೆಯನ್ನು ಹೆಚ್ಚಿಸುತ್ತವೆ. ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಅಧ್ಯಯನ ಮಾಡುವಂತಾಗಬೇಕು ಎಂದು ಹೇಳಿದರು.

ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾದ ಅರುಣ್ ಕೊತ್ನಳ್ಳಿ ಮಾತನಾಡಿ ಮೈಸೂರು ಮತ್ತು ಮಡಿಕೇರಿ ದಸರಾಕ್ಕೆ ವಿಶೇಷ ಸ್ಥಾನವಾಗಿದೆ. ಇದೊಂದು ರೀತಿ ಪ್ರಜಾಪ್ರಭುತ್ವ ಹಬ್ಬವಾಗಿದೆ ಎಂದು ಹೇಳಿದರು.

ದಸರಾವು ಎಲ್ಲ ಜನರನ್ನು ಒಳಗೊಂಡ ಉತ್ಸವವಾಗಿದ್ದು, ನಾಡಿನ ಸಂಸ್ಕೃತಿ ಮತ್ತು ಕಲೆಗಳನ್ನು ಪ್ರತಿಬಿಂಬಿಸುವ ದಸರಾವಾಗಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದವರಿಗೆ ಹೆಚ್ಚು ಹೆಚ್ಚು ಅವಕಾಶ ಮಾಡುವಂತಾಗಬೇಕು ಎಂದು ಸಲಹೆ ಮಾಡಿದರು.

ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಅವರು ಮಾತನಾಡಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ದಸರಾ ಕವಿಗೋಷ್ಠಿಯಲ್ಲಿ ಅವಕಾಶ ಕೊಡಲಾಗಿದೆ. ಕವಿಗೋಷ್ಠಿಗಳು ಕವಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾತ್ರವಲ್ಲ. ಭಾಷೆ ಬೆಳವಣಿಗೆಗೆ ಸಹಕಾರಿಯೂ ಹೌದು. ಜೀವನೋತ್ಸಾಹವನ್ನೂ ತುಂಬುತ್ತದೆ ಎಂದು ಹೇಳಿದರು.

ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಉಜ್ವಲ್ ರಂಜಿತ್, ನಗರ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಅನಿಲ್ ಎಚ್.ಟಿ. ಮಾತನಾಡಿದರು. ಮಡಿಕೇರಿ ನಗರ ದಸರಾ ಕವಿಗೋಷ್ಠಿ ಸಮಿತಿ ಹೊರತಂದಿರುವ ‘ಕಾವ್ಯೋದ್ಯಾನ’ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

----------------------------------------

ಬಹುಭಾಷಾ ಕವಿಗೋಷ್ಠಿಯಲ್ಲಿ 63 ಕವಿಗಳಿಂದ ಕವನ ವಾಚನ

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ನಗರ ದಸರಾ ಕವಿಗೋಷ್ಠಿ ಸಮಿತಿಯಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಸುಮಾರು 63 ಮಂದಿ ಕವಿಗಳು ತಮ್ಮ ಕವನ ವಾಚನ ಮಾಡಿದರು. ಕನ್ನಡ, ಕೊಡವ, ಅರೆಭಾಷೆ, ಹಿಂದೆ, ಇಂಗ್ಲಿಷ್, ತುಳು, ಮರಾಠಿ, ಮಲಯಾಳಿ ಸೇರಿದಂತೆ ವಿವಿಧ ಭಾಷೆಯಲ್ಲಿ ಕವಿಗಳು ತಮ್ಮ ಕವನ ವಾಚಿಸಿ ಗಮನ ಸೆಳೆದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮಾತನಾಡಿ, ಕವನ ರಚನೆ ಆರಂಭಿಸಿದ ನಂತರವೂ ಭಾವನೆಗಳು ಅರಳುವಂತೆ ಇರಬೇಕು. ಒಂದು ಮಾತು ನೋಡಿ ಉದ್ಭವ ಆದರೆ ಅದು ಸಹಜ ಭಾವ. ಭಾವನೆಗಳ ಸಹಜತೆಯೊಂದಿಗೆ ಬದುಕಬೇಕು. ಪಕ್ವತೆ ಬೆಳೆಸಿಕೊಂಡುವಾದಷ್ಟು ಪರಿಪೂರ್ಣ ಆಗಿರಲು ಪ್ರಯತ್ನಿಸಬೇಕು. ಬರವಣಿಗೆ ಸಂದರ್ಭ ಇಹದ ಎಲ್ಲಾ ಜಂಜಡಗಳನ್ನು ಮರೆಯಬೇಕು ಎಂದು ಹೇಳಿದರು.

ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ ಕವನ ಎಲ್ಲಿ ಬೇಕಾದರೂ ಹುಟ್ಟಬಹುದು. ದುಃಖದಲ್ಲಿ ಅರಳುವ ಕವನಗಳು ಮನೋಜ್ಞವಾಗಿರುತ್ತದೆ ಎಂದರು.

ಪುಟ್ಟ ಮಕ್ಕಳು ಸೇರಿದಂತೆ ಕವಿಗಳು ಅದ್ಬುತವಾಗಿ ಕವನ ವಾಚನ ಮಾಡಿದ್ದಾರೆ. ಒಂದೊಂದು ಕವನಗಳು ವಿಭಿನ್ನವಾಗಿ ಮೂಡಿಬಂದಿದೆ ಎಂದರು.

ಕವಿಗಳಾದ ರೇಖಾ, ಈರಮಂಡ ಹರಿಣಿ ವಿಜಯ್, ವೇದಶ್ರೀ ಕೆ.ಎಸ್, ಕೆ. ಶೋಭಾ ರಕ್ಷಿತ್, ವಾಣಿ ರಾಘವೇಂದ್ರ, ಎಂ. ಅಬ್ದುಲ್ಲ, ತೇಜಸ್ ಮೂರ್ತಿ, ಅಯ್ಯೆಟ್ಟಿ ಶೃತಿ, ಕಿಗ್ಗಾಲು ಎಸ್. ಗಿರೀಶ್, ಭೂಮಿಕಾ, ಹೇಮಲತಾ ಪೂರ್ಣಪ್ರಕಾಶ್, ಬೀನಾ ಕಾಳಯ್ಯ, ಮಾಲಾ ಮೂರ್ತಿ, ಮಮತಾ ಪಾಣತ್ತಲೆ, ಕೃತಜ್ಞಾ ಬೆಸೂರು, ವಿಜಶ್ರೀ ಅನಿಲ್, ಪಲ್ಲವಿ ಕೆ, ಜಯಲಕ್ಷ್ಮಿ, ಕೆ.ಎಸ್. ನಳಿನಿ, ಅಂಬೆಕಲ್ಲು ಸುಶೀಲಾ ಕುಶಾಲಪ್ಪ, ಕಸ್ತೂರಿ ಗೋವಿಂದಮಯ್ಯ, ಅಲ್ಲಾರಂಡ ವಿಠಲ್ ನಂಜಪ್ಪ, ಉಳುವಂಗಡ ಕಾವೇರಿ ಉದಯ, ಪ್ರೀತು ಗಣೇಶ್, ಪಂದ್ಯಂಡ ರೇಣುಕಾ ಸೋಮಯ್ಯ ಕವನ ವಾಚಿಸಿದರು.

ಯಶೋಧಾ ಪೇರಿಯಂಡ, ಹೇಮಂತ್ ಪಾರೇರ, ರಂಜಿತ್ ಧಾಮೋದರ ಕುದುಪಜೆ, ತೇಜೇಶ್ವರ್ ಕುಂದಲ್ಪಾಡಿ, ಭೀಮ್ ರಾವ್, ನಾರಾಯಣ ಕುಂಬ್ರ, ಗಾಯತ್ರಿ ರಾಜೀವ್, ಪೂರ್ಣಿಮಾ, ಪಿ.ಯು. ಸುಂದರ, ಪುಷ್ಪಲತಾ ಶಿವಪ್ಪ, ತೃಷ್ಯ ಪೊನ್ನೆಟ್ಟಿ, ಕಾನಡ್ಕ ಯಶಿಕಾ ದೇವಯ್ಯ, ಬಿ. ತಪಸ್ ಲೋಕೇಶ್, ಇಕಾಕ್ಷ್ ಚಿಂಟು, ಚಿಣ್ಮಯಿ ಬಾರನ, ಪ್ರಥಮ್ ಚಿಣ್ಣಪ್ಪ, ಸುನಿತಾ ವಿಶ್ವನಾಥ್, ಭಾಗೀರಥಿ, ಅಂಜಲಿ ಪಿ.ಎಸ್, ಗ್ರೀಷ್ಮಾ, ಸಂಜನಾ, ಜೀವಿತಾ, ಗೌರಮ್ಮ ಮಾದಮ್ಮಯ್ಯ, ಎ.ವಿ. ಮಂಜುನಾಥ್, ಚೈತ್ರ ಬೊಳ್ಳರಿಮಾಡು, ಕುಕ್ಕನೂರು ರೇಷ್ಮಾ ಮನೋಜ್, ರಿಹಾನ ಕವನ ವಾಚನ ಮಾಡಿದರು.