ಮಠಾಧೀಶರಿಗೆ ಪ್ರೇರಣೆಯಾಗಿದ್ದ ಮುರುಘೇಂದ್ರ ಶ್ರೀ

| Published : Jan 31 2025, 12:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಬಸವಾದಿ ಶರಣರ ಮಾರ್ಗದಲ್ಲಿ ಮುರುಘೇಂದ್ರ ಸ್ವಾಮೀಜಿಯವರು ನಡೆಯುವ ಮೂಲಕ ಮಠಾಧೀಶರರಿಗೆ ಪ್ರೇರಣೆಯಾಗಿದ್ದರು ಎಂದು ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನಮಠದ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಬಸವಾದಿ ಶರಣರ ಮಾರ್ಗದಲ್ಲಿ ಮುರುಘೇಂದ್ರ ಸ್ವಾಮೀಜಿಯವರು ನಡೆಯುವ ಮೂಲಕ ಮಠಾಧೀಶರರಿಗೆ ಪ್ರೇರಣೆಯಾಗಿದ್ದರು ಎಂದು ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನಮಠದ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಗುರುವಾರ ನಡೆದ ಲಿಂ.ಮುರುಘೇಂದ್ರ ಶ್ರೀಗಳ ಗುರುನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಮುರುಘೇಂದ್ರ ಶ್ರೀಗಳು ಶೂನ್ಯಪೀಠದ ಪೀಠಾಧ್ಯಕ್ಷರಾಗಿದ್ದ ಅಲ್ಲಮ್ಮಪ್ರಭುವಿನ ಬೆಡಗಿನ ವಚನಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಬಿಡಿಸಿ ತಮ್ಮ ಪ್ರವಚನಗಳಲ್ಲಿ ಹೇಳುತ್ತಿದ್ದರು. ಇವರ ಪ್ರವಚನ ಜನರನ್ನು ಆಕರ್ಷಿಸುತ್ತಿತ್ತು. ಇವರು ಭಕ್ತರ ಮನದಲ್ಲಿ ಶಾಶ್ವತವಾಗಿದ್ದಾರೆ ಎಂದರು. ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ನಾಡಿನ ಪ್ರಮುಖ ಪ್ರವಚನಕಾರರಲ್ಲಿ ಲಿಂ.ಮುರುಘೇಂದ್ರ ಶ್ರೀಗಳು ಒಬ್ಬರು. ನಾನು ಅವರ ಅಭಿಮಾನಿ. ಗುರು-ವಿರಕ್ತರು ಎಂಬ ಬೇಧಗಳಿಲ್ಲ. ಇದನ್ನು ಪ್ರತಿಯೊಬ್ಬರೂ ಅರಿಯಬೇಕು. ನಾನು ಅವರ ಪ್ರವಚನವನ್ನು ಜನರ ಮಧ್ಯದಲ್ಲಿ ಕುಳಿತುಕೊಂಡು ಕೇಳಿದ್ದೇನೆ. ಆರು ತಿಂಗಳ ಕಾಲ ಬಸವಪುರಾಣ ಹೇಳುವ ಮೂಲಕ ೬೩ ಪುರಾತನ ಶರಣರ ಮಂಟಪದ ಪೂಜೆ ನಡೆಸಿ ಐತಿಹಾಸಿಕ ಕಾರ್ಯಕ್ರಮ ಮಾಡಿದ ಕೀರ್ತಿಗೆ ಶ್ರೀಗಳು ಭಾಜನರಾಗಿದ್ದಾರೆ ಎಂದು ಹೇಳಿದರು.ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಮುರುಘೇಂದ್ರ ಶ್ರೀಗಳು ಹಾಳು ಕೊಂಪೆಯಾಗಿದ್ದ ವಿರಕ್ತಮಠದ ೧೯೭೯ ರಲ್ಲಿ ಪೀಠಾಧಿಕಾರಿಯಾಗಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರತಿಯೊಬ್ಬ ಭಕ್ತನ ಮನದಾಳದ ಮಾತನ್ನು ತಿಳಿದುಕೊಳ್ಳುವ ಶಕ್ತಿ ಹೊಂದಿದ್ದರು. ಪೂಜ್ಯರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಶೀರ್ವಾದ ಸದಾ ಭಕ್ತ ಸಮೂಹದ ಮೇಲಿದೆ ಎಂದು ಸ್ಮರಿಸಿದರು.ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ. ಯರನಾಳದ ಗುರು ಸಂಗನಬಸವ ಸ್ವಾಮೀಜಿ, ಮಸೂತಿಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ, ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿದರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ವಡವಡಗಿಯ ಕರಿಸಿದ್ದೇಶ್ವರ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಶ್ರೀ, ಇಂಗಳೇಶ್ವರದ ಬೃಂಗೇಶ್ವರ ಶಿವಾಚಾರ್ಯ ಶ್ರೀ, ಹೊಳಲಿನ ಚನ್ನಬಸವ ದೇವರು, ಜಮಖಂಡಿ ಓಲೇಮಠದ ಆನಂದದೇವರು, ಶಿವಾನಂದ ಈರಕಾರ ಮುತ್ಯಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸಾಹಿತಿ ಸಿದ್ದಣ್ಣ ಉತ್ನಾಳ, ನಿವೃತ್ತ ಪ್ರಾಧ್ಯಾಪಕ ಪಿ.ಎಲ್.ಹಿರೇಮಠ ಇತರರು ಇದ್ದರು.

ಮುರುಘೇಂದ್ರ ಶ್ರೀಗಳ ಭಾವಚಿತ್ರ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ಜರುಗಿತು. ಕಾಳಪ್ಪ ಬಡಿಗೇರ ಪ್ರಾರ್ಥಿಸಿದರು. ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಸ್ವಾಗತಿಸಿದರು. ಶಿಕ್ಷಕ ಎಚ್.ಬಿ.ಬಾರಿಕಾಯಿ ನಿರೂಪಿಸಿದರು.

ಎಲ್‌ಐಸಿ ನಿವೃತ್ತ ಸಹಾಯಕ ಆಡಳಿತಾಧಿಕಾರಿ ವಿವೇಕಾನಂದ ಕಲ್ಯಾಣಶೆಟ್ಟಿ ವಂದಿಸಿದರು.