ಬೆಂಗಳೂರು : ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಡಜನ್ ಮಂದಿ ಸಚಿವರಿಗೆ ಡಿ.ಕೆ. ಶಿವಕುಮಾರ್ ಸಂಪುಟದಿಂದ ಕೊಕ್ ನೀಡಿದ್ದು, ಸಂಪುಟದಿಂದ ಹೊರಗುಳಿದಿರುವ ನಾಯಕರ ಮುಂದಿನ ಜವಾಬ್ದಾರಿಗಳು ಹಾಗೂ ಭವಿಷ್ಯದ ಬಗ್ಗೆ ಚರ್ಚೆಗಳು ಶುರುವಾಗಿವೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಿದ್ದರಾಮಯ್ಯ ಸೇರಿದಂತೆ 34 ಮಂದಿ ಸಚಿವರಿದ್ದರು. ಈ ಪೈಕಿ ಕೆ.ಎನ್. ರಾಜಣ್ಣ, ಬಿ. ನಾಗೇಂದ್ರ, ದಿವಂಗತ ಸುಧಾಕರ್ ಸೇರಿ ಮೂರು ಸಚಿವ ಸ್ಥಾನ ತೆರವಾಗಿತ್ತು. ಅಂತಿಮವಾಗಿ ಉಳಿದಿದ್ದ 30 ಸಚಿವರ ಪೈಕಿ 18 ಮಂದಿ ಸಚಿವರು ಪುನಃ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟ ಸೇರಿದ್ದಾರೆ. ಹೀಗಾಗಿ 12 ಮಂದಿ ಸ್ಥಾನ ಕಳೆದುಕೊಂಡಂತೆ ಆಗಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಎಚ್.ಕೆ. ಪಾಟೀಲ್, ಎಚ್.ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಮಾಂಕಾಳ್ ವೈದ್ಯ, ಶಿವಾನಂದ ಪಾಟೀಲ, ಶರಣಬಸಪ್ಪ ದರ್ಶನಾಪುರ,ಆರ್.ಬಿ.ತಿಮ್ಮಾಪುರ, ಲಕ್ಷ್ಮೀ ಹೆಬ್ಬಾಳ್ಕರ್, ರಹೀಂ ಖಾನ್, ಎನ್.ಎಸ್. ಬೋಸರಾಜು, ಎಂ.ಸಿ.ಸುಧಾಕರ್, ಕೆ. ವೆಂಕಟೇಶ್ ಅವರು ಅವಕಾಶ ಕಳೆದುಕೊಂಡಿದ್ದಾರೆ.
ಪಕ್ಷದ ಜವಾಬ್ದಾರಿ ಸಾಧ್ಯತೆ:
ದಿನೇಶ್ ಗುಂಡೂರಾವ್, ಎಚ್.ಸಿ.ಮಹದೇವಪ್ಪ, ಎಂ.ಸಿ. ಸುಧಾಕರ್, ರಹೀಂ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್, ಮಾಂಕಾಳ್ ವೈದ್ಯ ಅಂತಹ ನಾಯಕರಿಗೆ ಹೈಕಮಾಂಡ್ ಅಥವಾ ಕೆಪಿಸಿಸಿ ಮಟ್ಟದಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿಗಳನ್ನು ನೀಡಬಹುದು ಎನ್ನಲಾಗಿದೆ.
ಇನ್ನು ಎಚ್.ಕೆ. ಪಾಟೀಲ್, ಆರ್.ಬಿ. ತಿಮ್ಮಾಪುರ, ಶಿವಾನಂದ ಪಾಟೀಲ್, ಕೆ. ವೆಂಕಟೇಶ್ ಅಂತಹವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವರ ರಾಜಕೀಯ ಭವಿಷ್ಯದ ಅಳಿವು ಉಳಿವು ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಯಾರಿಗೆ ಕೊಕ್?
ಎಚ್.ಕೆ. ಪಾಟೀಲ್
ಎಚ್.ಸಿ. ಮಹದೇವಪ್ಪ
ದಿನೇಶ್ ಗುಂಡೂರಾವ್
ಮಾಂಕಾಳ್ ವೈದ್ಯ
ಶಿವಾನಂದ ಪಾಟೀಲ
ಶರಣಬಸಪ್ಪ ದರ್ಶನಾಪುರ
ಆರ್.ಬಿ.ತಿಮ್ಮಾಪುರ
ಲಕ್ಷ್ಮೀ ಹೆಬ್ಬಾಳ್ಕರ್
ರಹೀಂ ಖಾನ್
ಎನ್.ಎಸ್. ಬೋಸರಾಜು
ಎಂ.ಸಿ.ಸುಧಾಕರ್
ಕೆ. ವೆಂಕಟೇಶ್
