ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರೆ ಇಡೀ ಭಾರತ ದೇಶವನ್ನು ಮೈಸೂರಿನ ಕಡೆಗೆ ಆಕರ್ಷಿಸುವ ವ್ಯಕ್ತಿತ್ವ. ಈ ವ್ಯಕ್ತಿತ್ವ ಬರುವುದಕ್ಕೆ ಮೂಲ ಕಾರಣ ಅವರ ನಡೆ ಮತ್ತು ನುಡಿ ಮತ್ತು ನಿರ್ಧಾರಗಳು ಹಾಗೂ ಅವರ ಆದರ್ಶ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಒಡೆಯರ್ ಆಡಳಿತ ದಾರಿಯು ಎಲ್ಲಾ ಕಾಲದಲ್ಲೂ ಜನರ ಪರವಾಗಿ, ಅಭಿವೃದ್ಧಿ ಪರವಾಗಿ, ಮಾನವನ ಸಂಪನ್ಮೂಲ ಮನರಂಜನೆ ಮತ್ತು ಅದರ ಸದುಪಯೋಗಕ್ಕಾಗಿ. ತಮ್ಮ ಆಡಳಿತದಲ್ಲಿ ದೊಡ್ಡ ಶಕ್ತಿಯಾಗಿ ದೇಶದ ಮುಂದೆ ಕಾಣಿಸುತ್ತಿದ್ದರು ಎಂದರು.ಮೈಸೂರು ಎಂದರೆ ಸ್ವತಂತ್ರ ಬರುವುದಕ್ಕಿಂತ ಮುಂಚೆ ಕತ್ತಲಲ್ಲಿ ಇದ್ದರೂ, ನಾಗರಿಕತೆಯ ಗುಣಲಕ್ಷಣಗಳು ಅಷ್ಟಾಗಿ ಗೊತ್ತಿರಲಿಲ್ಲ ಶಿಕ್ಷಣ ಇರಲಿಲ್ಲ, ಅಸಮಾನತೆ, ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ, ದೇವದಾಸಿ ಪದ್ಧತಿ ಜೀವಂತವಾಗಿದ್ದ ಕಾಲವದು. ಆದರೂ ನಾವು ಏಷ್ಯಾದಲ್ಲಿ ಮೊದಲನೆಯ ರಾಜ್ಯ ಹೈಡ್ರೋ ಎಲೆಕ್ಟ್ರಾನಿಕ್ ನಿಂದ ವಿದ್ಯುತ್ ಉತ್ಪಾದನೆ ಮಾಡಿದ ರಾಜ್ಯ. ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗುವಂತದ್ದು, ಇಡೀ ಏಷ್ಯಾ ಖಂಡದಲ್ಲಿ ಮೈಸೂರಲ್ಲಿ ಮೊದಲಿಗೆ ಬೀದಿ ದೀಪ ಆಳವಡಿಸಲಾಯಿತು ಎಂದರು.
ಜನರ ಜೀವನದ ಬಗ್ಗೆ ಪರಿಕಲ್ಪನೆ ಸಾಕಷ್ಟು ತುಂಬಿಕೊಂಡಿದ್ದ, ಅವರು ವಿದ್ಯುಚ್ಛಕ್ತಿ ಎಂದರೆ ಗೃಹಬಳಕೆ, ಕೃಷಿ ಮತ್ತು ಕೈಗಾರಿಕೆ ಅವಶ್ಯಕತೆ ಬೇಕಾದಂತಹ ಅತ್ಯಂತ ಅಮೂಲ್ಯವಾದಂತಹ ವಸ್ತು. ವಿದ್ಯುತ್ ಚ್ಛಕ್ತಿ ಇದು ಏಷ್ಯಾ ಖಂಡದಲ್ಲಿ ಕತ್ತಲೆಯಲ್ಲಿ ಇದ್ದಾಗ ಅವರು ವಿದ್ಯುತ್ ತಂದು ಕೊಟ್ಟವರು. ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ಉತ್ತಮ ದೃಷ್ಟಿಕೋನ ಅವರ ಆಡಳಿತ ಇತ್ತು ಎಂದರು.ಆಡಳಿತ ಮಾಡುವವರು ಪ್ರಜಾಪ್ರಭುತ್ವವಾದಿಗಳಾಗಿರಬೇಕು. ಪ್ರಜಾಪ್ರಭುತ್ವವಾದಿ ಜನರಿಗೋಸ್ಕರ, ಜನರ ಬದುಕಿ ಗೋಸ್ಕರ, ಅವರ ಏಳಿಗೆಗೋಸ್ಕರ ಸಮುದಾಯದ ಸೌಹಾರ್ದತೆಗಾಗಿ ಮತ್ತು ಅವರ ಸ್ವಾಭಿಮಾನ ಮತ್ತು ಸ್ವರಾಜ್ಯದ ಬದುಕಿಗಾಗಿ ಅವರು ತಮ್ಮ ಆಡಳಿತ ಕಾಲವನ್ನು ನಡೆಸಿದ್ದಾರೆ. ಇಡೀ ಆಡಳಿತ ಜೀವನದೂದ್ದಕ್ಕೂ ಅವರು ಮಾಡಿದ ಕೆಲಸಗಳು ಇಂದು ನಮ್ಮ ಕಣ್ಣ ಮುಂದೆ ಗೋಚರಿಸುತ್ತಿವೆ ಎಂದರು.
ಅವರು ಕೇವಲ ಒಬ್ಬ ರಾಜನಾಗಿರಲಿಲ್ಲ ಶಿಕ್ಷಣದಲ್ಲಿ ಉನ್ನತ ಅಧ್ಯಯನವನ್ನು ಮಾಡಿದವರು. ಶಿಕ್ಷಣಕ್ಕೆ ಮಹತ್ವ ಕೊಟ್ಟವರು. ಬುದ್ಧ ಹೇಳಿರುವಂತೆ ನಿನಗೆ ನೀನೆ ಗುರು ನಿನಗೆ ನೀನೆ ಬೆಳಕು. ಎಂಬುವಂತೆ ನಮಗೆ ಶಿಕ್ಷಣ ಬೇಕೇ ಬೇಕು ಎಂದು ಶಿಕ್ಷಣಕ್ಕೆ ಮಹತ್ವ ನೀಡಿದವರು ಎಂದರು.ಮೈಸೂರಿನ ವಿಶ್ವವಿದ್ಯಾನಿಲಯ, ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ನಮ್ಮ ಕಣ್ಮುಂದೆ ಇದೆ. ದಲಿತರು, ಹಿಂದುಳಿದವರು, ಮಹಿಳೆಯರು ಎಲ್ಲರಿಗೂ ಶಿಕ್ಷಣವು ಸಿಗಬೇಕು ಎನ್ನುವ ಸಲುವಾಗಿ ಶಿಕ್ಷಣದ ಮಹತ್ವದ ಬಗ್ಗೆ ಅವರು ನಿಲುವನ್ನು ಪಡೆದರು ಎಂದರು.
ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ಕೊಟ್ಟರು ಅಷ್ಟೇ ಅಲ್ಲದೇ, ಆರೋಗ್ಯವಾಗಿ ಇಲ್ಲದೆ ಇದ್ದರೆ ಸಮಾಜ ಸದೃಢವಾಗಿ ಇರುವುದಿಲ್ಲ ಎಂದು ಸ್ವಂತ ಅವರ ಅಕ್ಕ ಸೇರಿದಂತೆ ಅನೇಕರು ಕ್ಷಯ ರೋಗಕ್ಕೆ ತುತ್ತಾದಾಗ ಅದನ್ನು ಗಮನಿಸಿ ಸುಮಾರು 30 ಎಕರೆ ವಿಸ್ತೀರ್ಣದಲ್ಲಿ ಸ್ಯಾನಿಟೋರಿಯಂ ಆಸ್ಪತ್ರೆ ಕಟ್ಟಿಸಿದ್ದಾರೆ. ಶಿಕ್ಷಣದ ಬಗ್ಗೆ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಿ ಸಮಾಜವನ್ನು ಆರೋಗ್ಯವಾಗಿ ಇಡುವುದರ ಜೊತೆಗೆ ಎಲ್ಲರ ಸಹಭಾಗಿತ್ವವನ್ನು ಬಯಸುವಂತಹ ಒಬ್ಬ ಶ್ರೇಷ್ಠ ರಾಜನಾಗಿದ್ದರು ಎಂದರು.ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್. ತಂಗಡಗಿ ಮಾತನಾಡಿ, ಇಡೀ ದೇಶವೇ ಮೈಸೂರಿನ ಕಡೆ ತಿರುಗಿ ನೋಡಿವ ಆಡಳಿತ ಮಾಡಿದಂತವರು ಯಾರಾದರೂ ಇದ್ದರೆ ಅವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದರು.
ಇಂತಹ ಮಹಾನ್ ರಾಜರ ಜಯಂತಿಯನ್ನು ಯಾಕೆ ಮಾಡುತ್ತಿದ್ದೇವೆ ಎಂದರೆ ಇವರ ಜಯಂತ್ಯೋತ್ಸವದಿಂದ ಅವರು ಮಾಡಿದಂತಹ ಕೆಲಸಗಳನ್ನು ನಮ್ಮ ಯುವ ಪೀಳಿಗೆಗೆ ಹಾಗೂ ಯುವಕರಿಗೆ ತಿಳಿಸುವಂತಹ ಪ್ರಯತ್ನದಲ್ಲಿ ಇಂತಹ ಜಯಂತೋತ್ಸವವನ್ನು ಹೆಚ್ಚಾಗಿ ಮಾಡುತ್ತಿದ್ದೇವೆ ಎಂದರು.ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ಡಾ.ಎಂ.ಎಸ್. ಅನಿತಾ ವಿಶೇಷ ಉಪನ್ಯಾಸ ನೀಡಿ, ಕನ್ನಡ ನಾಡಿನ ಪ್ರಾತಃ ಸ್ಮರಣೀಯ ವ್ಯಕ್ತಿಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಒಬ್ಬರು. ಆಧುನಿಕ ಕನ್ನಡ ನಾಡಿನ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್. ಇಂದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ಬೆಂಗಳೂರು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ದೇಶ ಯುವಜನರು ಉದ್ಯೋಗಾವಕಾಶಗಳನ್ನು ಅರಸುವಾಗ ಅವರ ಮನಸ್ಸಿನಲ್ಲಿ ಮೂಡುವುದು ಮೊದಲಿಗೆ ಬೆಂಗಳೂರಿನ ಹೆಸರು ಎಂದರು.
ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು, ಸ್ಟಾರ್ಟ್ ಅಪ್, ಶೈಕ್ಷಣಿಕ ವಲಯ ಹೀಗೆ ಬೆಂಗಳೂರು ಹತ್ತು ಹಲವು ಕ್ಷೇತ್ರಗಳಲ್ಲಿ ಇಂದು ವಿಶ್ವವ್ಯಾಪ್ತಿಯಾಗಿದೆ. ಆದರೆ ಈ ಸಾಧನೆ ಕೇವಲ ಒಂದೆರಡು ದಶಕಗಳಲ್ಲಿ ಸಾಧನೆಯಾದದ್ದಲ್ಲ. ಅದರ ಹಿಂದೆ ನೂರಾರು ವರ್ಷಗಳ ಪರಿಶ್ರಮವಿದೆ. ಈ ಎಲ್ಲವೂ ಮೈಸೂರಿನ ಪ್ರಸಿದ್ಧ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಕಿದ ಅಡಿಪಾಯದ ಮೇಲೆ ಎದ್ದು ನಿಂತಿರುವ ಭವ್ಯ ಸೌಧವಾಗಿದೆ ಎಂದರು.ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರೆ, ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಟ್ಟುದು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಕೂಡ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಪಂಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು ಎಂದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಎಡಿಸಿ ಡಾ.ಪಿ. ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮೊದಲಾದವರು ಇದ್ದರು.