ಕನ್ನಡಪ್ರಭ ವಾರ್ತೆ ಕೋಲಾರ
ಶಾಸಕ ನಂಜೇಗೌಡರು ಮಾಲೂರು ತಾಲೂಕಿನ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ತಮಗೆ ಮಂತ್ರಿ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಎಂದು ಪರಿಗಣಿಸಿ ಸಾವಿರಾರು ಕೋಟಿ ಅನುದಾನ ತರುವ ಮೂಲಕ ತಾಲೂಕಿನ ಚಿತ್ರಣವನ್ನೇ ಬದಲಾಯಿಸುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶಂಸಿಸಿದರು.ಮಾಲೂರಿನಲ್ಲಿ ಶಾಸಕ ನಂಜೇಗೌಡ ಅವರ ನೇತೃತ್ವದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ, ೩೨೦೦ ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯರ ಸರ್ಕಾರವಿದ್ದಾಗಲೂ ಅಭಿವೃದ್ಧಿ ಕಾರ್ಯಗಳಿಗೆ ಪೂರ್ಣ ಸಹಕಾರ ನೀಡಲಾಗಿತ್ತು ಹಾಗೂ ಪ್ರಸ್ತುತ ಸಿಎಂ ಡಿ.ಕೆ.ಶಿವಕುಮಾರ್ ಕೂಡ ನಂಜೇಗೌಡರ ಬೆನ್ನಿಗೆ ನಿಂತು ಜಿಲ್ಲೆಯ ಅಭಿವೃದ್ಧಿಗೆ ಹೊಸ ಶಕ್ತಿ ತುಂಬುತ್ತಿದ್ದಾರೆ ಎಂದು ತಿಳಿಸಿದರು.ಮುಂದಿನ ಎರಡು ವ?ಗಳ ಒಳಗೆ ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಯೋಜನೆಯ ನೀರು ತರಲು ಡಿಸಿಎಂ ದೃಢ ಸಂಕಲ್ಪ ಮಾಡಿದ್ದು, ಪ್ರತಿ ಹಳ್ಳಿಗೂ ಶಾಶ್ವತ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ಬದ್ಧವಾಗಿದೆ. ವಿಮಾನ ನಿಲ್ದಾಣದಿಂದ ವಿಜಯಪುರ, ಎಚ್.ಕ್ರಾಸ್, ನರಸಾಪುರ ಮತ್ತು ಮಾಲೂರು ಮೂಲಕ ಹೊಸೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ನಿರ್ಮಾಣ ಸೇರಿದಂತೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ೨೦೦೦ ಕೋಟಿ ರು.ಗಳ ಬೃಹತ್ ಯೋಜನೆ ಸರ್ಕಾರ ಮಂಜೂರು ಮಾಡಿದ್ದು, ಇದು ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಬಲ ತುಂಬಲಿದೆ, ಅಂತಿಮವಾಗಿ, ತಾವು ಬೆಂಗಳೂರಿನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರೂ ಕೋಲಾರ ಜಿಲ್ಲೆಯ ಜನತೆ ತಮಗೆ ನೀಡಿದ ರಾಜಕೀಯ ಜನ್ಮ ಮತ್ತು ಪ್ರೀತಿ ಸ್ಮರಿಸಿದ ಸಚಿವರು, ಕಂದಾಯ ಇಲಾಖೆಯಲ್ಲಿ ಜನಪರ ಬದಲಾವಣೆ ತರುವ ಮೂಲಕ ಸೇವೆ ಮುಂದುವರಿಸಿ ಜಿಲ್ಲೆಯ ಜನತೆಯ ಋಣ ತೀರಿಸಲು ಸದಾ ಸಿದ್ಧನಿರುವುದಾಗಿ ತಿಳಿಸಿದರು.
ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಮಾತನಾಡಿ, ಒಂದೇ ಕ್ಷೇತ್ರದಲ್ಲಿ ೩,೨೦೦ ಕೋಟಿ ರು.ಗಳಿಗೂ ಅಧಿಕ ಮೊತ್ತದ ಕಾಮಗಾರಿಗಳು ನಡೆಯುತ್ತಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಸಾಧನೆಯಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ, ತಾವು ಈ ಹಿಂದೆ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಅಲ್ಲಿನ ಜನತೆ ತೋರಿದ ಪ್ರೀತಿ ಮತ್ತು ನೀಡಿದ ಸಂಪೂರ್ಣ ಸಹಕಾರ ಸ್ಮರಿಸಿದ ಅವರು, ಮಂತ್ರಿಸ್ಥಾನದ ಆಸೆಗಿಂತ ಕ್ಷೇತ್ರದ ಅಭಿವೃದ್ಧಿಯೇ ತಮಗೆ ಮುಖ್ಯ ಎಂದು ಭಾವಿಸಿರುವ ಇಂತಹ ಜನಪರ ಶಾಸಕರಿಗೆ ಸಾರ್ವಜನಿಕರ ಬೆಂಬಲ ಸದಾ ಇರಬೇಕು ಎಂದು ಮನವಿ ಮಾಡಿದರು.ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕೆ.ವೈ.ನಂಜೇಗೌಡರು ಶಾಸಕರಾಗಿ ಆಯ್ಕೆಯಾಗುವ ಮೂಲಕ ಮಾಲೂರು ತಾಲೂಕಿನ ಜನತೆಯ ವಿಶ್ವಾಸ ಉಳಿಸಿಕೊಂಡಿದ್ದಾರೆ, ಕೆವೈ ಜನರ ಬೆಂಬಲ ಪಡೆಯುತ್ತಿರುವುದು ಅವರ ನಿರಂತರ ಜನಪರ ಕಾರ್ಯಗಳಿಗೆ ಸಾಕ್ಷಿ ಎಂದು ಹೇಳಿದರು.
ಮಾಲೂರು ತಾಲೂಕಿನಲ್ಲಿ ಇದುವರೆಗೆ ೨,೩೦೦ ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದು ಒಂದು ಹೆಮ್ಮೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಶಾಸಕರ ಕೋರಿಕೆಯ ಮೇರೆಗೆ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.