ಮರಿಯಮ್ಮನಹಳ್ಳಿ: ನನಗೆ ಸಂಸದ ತುಕಾರಾಂ ಅವರಾಗಲಿ, ಪೊಲೀಸ್ ಅವರಾಗಲಿ ಯಾರೂ ಬೆದರಿಕೆ ಹಾಕಿಲ್ಲ. ಯಾವುದೇ ದೌರ್ಜನ್ಯ ಮಾಡಿಲ್ಲ. ಯಾರೂ ರಾಜಕೀಯವಾಗಿ ನನ್ನ ಹೆಸರು ತೆಗೆದುಕೊಳ್ಳಬೇಡಿ. ನೀವು ರಾಜಕೀಯವಾಗಿ ಏನಾದ್ರು ಮಾಡಿಕೊಳ್ಳಿ, ನನ್ನ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಬೇಡಿ ಎಂದು ಡಣಾಪುರ ಗ್ರಾಮದ ಯುವಕ, ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಮರಿಯಮ್ಮನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಸುರೇಶ್‌ ಸ್ಪಷ್ಟಪಡಿಸಿದರು.

ಸಮೀಪದ ಡಣಾಪುರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ- 50ರ ಸರ್ವೀಸ್ ರಸ್ತೆ ಕಳಪೆ ಕಾಮಗಾರಿ ಆಗಿರುವ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ ಸ್ಥಳಕ್ಕೆ ಸಂಸದ ಈ.ತುಕಾರಾಂ ಭೇಟಿ ನೀಡಿದ್ದರು. ಈ ವೇಳೆ ಸಂಸದರು ನನಗೆ ಯಾವುದೇ ರೀತಿಯ ನಿಂದನೆ ಮಾಡಿಲ್ಲ ಎಂದರು.

ಆದರೆ ಅಸಭ್ಯ ಪದ ಬಳಕೆ ಮಾಡಿ ನಿಂದನೆ ಮಾಡಿದ್ದಾರೆ ಅಂತ ಬಿಜೆಪಿಯವರು ಪ್ರತಿಭಟನೆ ಮಾಡ್ತಿದ್ದಾರೆ. ನನಗೆ ಯಾವುದೇ ರೀತಿಯಲ್ಲಿ ಅವರು ಬೈದಿಲ್ಲ ಎಂದು ಸುರೇಶ್‌ ಸ್ಪಷ್ಟನೆ ನೀಡಿದರು.ನಾನು ಸಾಮಾಜಿಕ ಪ್ರಜ್ಞೆ ಇಟ್ಟುಕೊಂಡು ವೀಡಿಯೋ ಮಾಡಿದ್ದೆ. ಇದನ್ನು ರಾಜಕೀಯ ಪ್ರೇರಿತ ಮಾಡಬೇಡಿ. ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಅವರು ಮರಿಯಮ್ಮನಹಳ್ಳಿ ಗ್ರಾಮದವರು. ಅವರ ಬಗ್ಗೆ ಅಪಾರ ಗೌರವ ಇದೆ‌. ನನ್ನ ಪರ ನಿಂತಿದ್ದಕ್ಕೆ ಅವರಿಗೆ ಧನ್ಯವಾದ ತಿಳಿಸುವೆ. ಆದರೆ ಈ ವಿಚಾರ ರಾಜಕೀಯವಾಗಿ ಬಳಿಸಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡರು. ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಭರತ್, ಸದಸ್ಯರಾದ ರವಿ, ವಿವೇಕ್‌, ಸಾಗರ್‌, ಸುಮಂತ್‌, ಶರತ್‌, ಶರಣ, ನಿಂಗಜ್ಜ, ಅಜ್ಜಯ್ಯ, ಸೀನ, ಉಮೇಶ್‌ ಇದ್ದರು.

ಮರಿಯಮ್ಮನಹಳ್ಳಿ ಸಮೀಪದ ಡಣಾಪುರ ಗ್ರಾಮದ ಯುವಕ ಮರಿಯಮ್ಮನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಸುರೇಶ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.