ಜಾತಿ ಗಣತಿಗೆ ನೆಟ್‌ವರ್ಕ್ ಸಮಸ್ಯೆ: ಗಣತಿದಾರರು ಹೈರಾಣ

| Published : May 13 2025, 11:52 PM IST

ಜಾತಿ ಗಣತಿಗೆ ನೆಟ್‌ವರ್ಕ್ ಸಮಸ್ಯೆ: ಗಣತಿದಾರರು ಹೈರಾಣ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದ್ದರೂ ಅವರಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂಬ ಕೂಗು ಕೇಳಿ ಬಂದಿದೆ. ಬಿರು ಬಿಸಿಲಿನ ದಿನಗಳಲ್ಲಿ ಸರ್ವರ್ ಸಮಸ್ಯೆ ಕಂಡುಬಂದ ಕಾರಣ ಗಣತಿದಾರರು ಬಳಲಿ ಬೆಂಡಾಗಿದ್ದು, ವೃಥಾ ಅಲೆಯುವಂತಾಗಿದೆ.

ಗಣತಿ ಆ್ಯಪ್‌ನಲ್ಲೂ ಸಮಸ್ಯೆ । ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಗಣತಿ ಕಾರ್ಯ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ರಾಜ್ಯಾದ್ಯಂತ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಗಣತಿ ಕಾರ್ಯ ತಾಲೂಕಿನಲ್ಲಿಯೂ ಪ್ರಗತಿಯಲ್ಲಿದ್ದು, ಗಣತಿಯ ಆ್ಯಪ್‌ನ ಅಸಹಕಾರ ಹಾಗೂ ನೆಟ್‌ವರ್ಕ್ ಸಮಸ್ಯೆಯಿಂದ ಗಣತಿದಾರರು ಪರದಾಟ ನಡೆಸುವಂತಾಗಿದೆ.

ಈ ಹಿಂದಿನ ಗಣತಿ ಆ್ಯಪ್‌ನ್ನು ಶುಕ್ರವಾರದಿಂದ ಅಪ್‌ಗ್ರೇಡ್ ಮಾಡಲಾಗಿದೆ. ಅಪ್‌ ಗ್ರೇಡ್ ಮಾಡಲಾದ ಆ್ಯಪ್‌ನಲ್ಲಿ ಸರ್ವರ್ ಸಮಸ್ಯೆ ತಲೆ ದೋರಿದ್ದು, ಅದು ತೆರೆದುಕೊಳ್ಳದ ಕಾರಣ ನಿಗದಿತ ಸಂಖ್ಯೆಯ ಗಣತಿ ಕಾರ್ಯ ಪೂರೈಸಲು ಸಾಧ್ಯವಾಗಿಲ್ಲ. ಈ ಹೊಸ ಆ್ಯಪ್ ತೆರೆದುಕೊಳ್ಳದ ಕಾರಣ ಸಾಕಷ್ಟು ಸಮಸ್ಯೆ ಉಂಟಾಗಿದೆ ಹಾಗೂ ಗಣತಿ ಕಾರ್ಯವನ್ನು ತ್ವರಿತವಾಗಿ ಮುಗಿಸಲು ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಗಣತಿದಾರರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದ್ದರೂ ಅವರಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂಬ ಕೂಗು ಕೇಳಿ ಬಂದಿದೆ. ಬಿರು ಬಿಸಿಲಿನ ದಿನಗಳಲ್ಲಿ ಸರ್ವರ್ ಸಮಸ್ಯೆ ಕಂಡುಬಂದ ಕಾರಣ ಗಣತಿದಾರರು ಬಳಲಿ ಬೆಂಡಾಗಿದ್ದು, ವೃಥಾ ಅಲೆಯುವಂತಾಗಿದೆ.ಮಾಹಿತಿ ಅಪ್‌ಲೋಡ್‌ ಸಮಸ್ಯೆ: ಗಣತಿಗೆ ಅತಿ ಹೆಚ್ಚಿನ ನೆಟ್ವರ್ಕ್ ಸಮಸ್ಯೆಯೂ ಕಂಡುಬರುತ್ತಿದೆ. ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಇಲ್ಲದ ಹೆಚ್ಚಿನ ಸ್ಥಳಗಳಿದ್ದು, ಈ ಪ್ರದೇಶಗಳಲ್ಲಿ ಮಾಹಿತಿ ಸಂಗ್ರಹಿಸಿ ಅಪ್ಲೋಡ್ ಮಾಡುವುದು ಹರಸಾಹಸವಾಗಿದೆ. ನೆಟ್ವರ್ಕ್ ಇರುವ ಕಡೆಗಳಲ್ಲಿ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿದ ಕೂಡಲೇ ಕುಟುಂಬ ಸದಸ್ಯರ ಮಾಹಿತಿ ಸಿಗುತ್ತದೆ. ಆದರೆ ನೆಟ್ ವರ್ಕ್ ಇಲ್ಲದ ಕಡೆ ಕುಟುಂಬ ಒಂದರ 42 ರೀತಿಯ ಮಾಹಿತಿಗಳನ್ನು ಆಫ್‌ಲೈನ್‌ನಲ್ಲಿ ಸಂಗ್ರಹಿಸಿ ಅದನ್ನು ನೆಟ್ವರ್ಕ್ ಇರುವ ಸ್ಥಳಗಳಲ್ಲಿ ಅಪ್ಲೋಡ್ ಮಾಡಬೇಕಿದೆ. ಸಾಮಾನ್ಯವಾಗಿ ಒಂದು ಮನೆಯ ಗಣತಿಗೆ ಒಂದು ಗಂಟೆಯಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದ ನೆಟ್ವರ್ಕ್ ಇಲ್ಲದ ಪರಿಸರದಲ್ಲಿ ದಿನ ಒಂದಕ್ಕೆ 10 ಮನೆಗಳ ಗಣತಿಯೂ ಸಾಧ್ಯವಾಗುತ್ತಿಲ್ಲ.

ವನ್ಯಜೀವಿ ಭೀತಿ:

ಒಂದು ಬೂತ್‌ಗೆ ಒಬ್ಬ ಗಣತಿದಾರ, 10 ಗಣತಿ ದಾರರಿಗೆ ಒಬ್ಬಮೇಲ್ವಿಚಾರಕರನ್ನು ನೇಮಿಸಲಾಗಿದೆ. ಗ್ರಾಮೀಣ ಭಾಗ, ಅರಣ್ಯ ಪರಿಸರಗಳಲ್ಲಿ ಗಣತಿದಾರ ಒಬ್ಬನೇ ತಿರುಗಾಟ ನಡೆಸಬೇಕು. ಅಲ್ಲದೆ ಕೆಲವೆಡೆ ಕಾಲ್ನಡಿಗೆ ಮೂಲಕವೂ ಹೋಗ ಬೇಕಿದೆ. ಅರಣ್ಯ ಪರಿಸರಗಳಲ್ಲಿ ವನ್ಯಜೀವಿಗಳ ಭಯವೂ ಸಾಕಷ್ಟಿದೆ ಹಾಗೂ ಒಂದು ಮನೆಯಿಂದ ಒಂದು ಮನೆಗೆ ಹೆಚ್ಚಿನ ಅಂತರವೂ ಇದೆ. ಈ ಕಾರಣದಿಂದ ಒಂದು ಪ್ರದೇಶಕ್ಕೆ ಇಬ್ಬರಂತೆ ಗಣತಿ ದಾರರನ್ನು ನೇಮಿಸಿದರೆ ಉತ್ತಮ.

ಗಣತಿದಾರರು ಸ್ಥಳೀಯ ಬಿಎಲ್‌ಒಗಳ ಸಹಕಾರ ಪಡೆದು ಗಣತಿ ನಡೆಸುವಂತೆ ಆದೇಶ ಇದ್ದರೂ, ಹೆಚ್ಚಿನ ಕಡೆ ಬಿಎಲ್‌ಒಗಳಿಂದ ಉತ್ತಮ ಸ್ಪಂದನೆ ಸಿಗುತ್ತಿಲ್ಲ ಎಂದು ಕೆಲವು ಗಣತಿದಾರರು ಆರೋಪಿಸಿದ್ದಾರೆ.

ಗಣತಿ ನಡೆಯುತ್ತಿರುವ ಮನೆಗಳಲ್ಲೂ ಸಾಕಷ್ಟು ಮಾಹಿತಿ ಕೊರತೆ ಇದ್ದು, ಗಣತಿದಾರರು ಹೈರಾಣಾಗುತ್ತಿದ್ದಾರೆ. ಜತೆಗೆ ಬೀದಿನಾಯಿ, ಸಾಕು ನಾಯಿಗಳ ಕಾಟವೂ ಸಾಕಷ್ಟಿದೆ.

ಬಾಕ್ಸ್

ಕಳಪೆ ಪೂರ್ವತಯಾರಿ

ತಹಸೀಲ್ದಾರರು ಮತ್ತು ಇಒ ಸಭೆಗೆ ಬಂದಾಗ ಅವರಿಗೆ ಗಣತಿ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಇರಲಿಲ್ಲ. ಇದುವರೆಗೆ ಬಹಳಷ್ಟು ಗಣತಿ ಕಾರ್ಯ ನಡೆದಿದೆ. ಆದರೆ ಇಷ್ಟೊಂದು ಕಳಪೆ ಪೂರ್ವ ತಯಾರಿಯ ಗಣತಿ ಇದುವರೆಗೆ ನಡೆದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಗಣತಿದಾರ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.ಕೋಟ್‌

ನೆಟ್ವರ್ಕ್ ಸಿಗದ ಪ್ರದೇಶವೊಂದರ ಐದು ಮನೆಗಳ ಮಂದಿಯನ್ನು ಒಟ್ಟಾಗಿ ನೆಟ್‌ವರ್ಕ್ ಇರುವ ಪ್ರದೇಶಕ್ಕೆ ಶುಕ್ರವಾರ ಬರಲು ತಿಳಿಸಲಾಗಿತ್ತು. ಈ ವೇಳೆ ಹೊಸ ಆ್ಯಪ್ ತೆರೆದುಕೊಳ್ಳದ ಕಾರಣ ಅವರೆಲ್ಲ ಸುಮ್ಮನೆ ಹಿಂದಿರುಗಬೇಕಾಯಿತು. ಕೂಲಿ ಕಾರ್ಮಿಕರಾದ ನಮಗೆ ರಜೆ ಹಾಕಿ ತೆರಳಿದ ಕಾರಣ ಸಂಬಳವೂ ಇಲ್ಲದಂತಾಗಿದೆ.। ಸಂಜೀವ ಕೆ., ಬೆಳ್ತಂಗಡಿ-------------------

ಆ್ಯಪ್‌ನಲ್ಲಿ ದೋಷ ಕಂಡು ಬಂದಿರುವ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಆ್ಯಪನ್ನು ಸುಲಭದಲ್ಲಿ ನಿರ್ವಹಿಸುವಂತೆ ವ್ಯವಸ್ಥೆ ತಕ್ಷಣ ಆಗಲಿದೆ.

। ಹೇಮಲತಾ, ಉಪ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ದ.ಕ.