ಕನ್ನಡಪ್ರಭ ವಾರ್ತೆ ​ಬೈಲಹೊಂಗಲ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೋಮವಾರ ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಜರುಗಿತು.

ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಈಶ್ವರ ಹೋಟಿ, ​ಉಪಾಧ್ಯಕ್ಷರಾಗಿ ಬಸವರಾಜ ಕಲಾದಗಿ ಹಾಗೂ ಕುಮಾರ ರೇಶ್ಮಿ, ಪ್ರಧಾನ ಕಾರ್ಯದರ್ಶಿಯಾಗಿ ಯುನೂಸ್ ಬಡೇಘರ, ಕಾರ್ಯದರ್ಶಿಗಳಾಗಿ ಶರೀಫ ನದಾಫ ಮತ್ತು ಮುತ್ತುರಾಜ ಮತ್ತಿಕೊಪ್ಪ ಹಾಗೂ ಖಜಾಂಚಿಯಾಗಿ ಉದಯ ಕೊಳೇಕರ ಅವಿರೋಧವಾಗಿ ಆಯ್ಕೆಯಾದರು. ​ಅಲ್ಲದೆ, ಸಂಘದ ನಿರ್ದೇಶಕರಾಗಿ ವಿರುಪಾಕ್ಷ ವಾಲಿ, ಚಂದ್ರಯ್ಯ ಯರಗಟ್ಟಿಮಠ, ಮಹಾಂತೇಶ ರಾಜಗೋಳಿ, ಮಂಜುನಾಥ ಜ್ಯೋತಿ, ಪ್ರಕಾಶ ಬೆಳಗಾವಿ ಹಾಗೂ ಈಶ್ವರ ಶಿಲ್ಲೇದಾರ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.

ಈ ವೇಳೆ ಸಂಘದ ಗೌರವಾಧ್ಯಕ್ಷರಾಗಿ ಮಹಾಂತೇಶ ತುರಮರಿ ಅವರನ್ನು ನೇಮಕ ಮಾಡಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ ಮಾತನಾಡಿ, ಪತ್ರಕರ್ತರ ಕಲ್ಯಾಣಕ್ಕಾಗಿ ಸಂಘ ಸಾಮಾಜಿಕ ಭದ್ರತೆ, ಆರೋಗ್ಯ ಸೌಲಭ್ಯ ಹಾಗೂ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಸಂಘಟನಾ ಶಕ್ತಿಯನ್ನು ವೃದ್ಧಿಸುವ ಮೂಲಕ ಈ ಸೌಲಭ್ಯಗಳನ್ನು ಪತ್ರಕರ್ತರಿಗೆ ತಲುಪಿಸಲಾಗುವುದು. ಅಲ್ಲದೇ, ಸಂಘದ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ನೂತನ ಅಧ್ಯಕ್ಷ ಈಶ್ವರ ಹೋಟಿ ಮಾತನಾಡಿ, ಪತ್ರಕರ್ತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅವರಿಗೆ ಸಿಗಬೇಕಾದ ವಿಮೆ ಹಾಗೂ ತುರ್ತು ನೆರವು ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುವುದಾಗಿ ತಿಳಿಸಿದರು.​ಚುನಾವಣಾಧಿಕಾರಿ ಜಿ.ಕೆ.ಪೂಜೇರ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಶೈಲ ಮಠದ ಮತ್ತು ರವಿಕುಮಾರ ಹುಲಕುಂದ ಸಮ್ಮುಖದಲ್ಲಿ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಪತ್ರಕರ್ತರಾದ ಶಿವಾನಂದ ತಾರಿಹಾಳ, ಮಹಾರುದ್ರ ಮಾಲಮನಿ ಹಾಗೂ ಉಮೇಶ ಬೋಗೂರ ಉಪಸ್ಥಿತರಿದ್ದರು.