ಕನ್ನಡಪ್ರಭ ವಾರ್ತೆ ವಿಜಯಪುರ

ಕೊಳಗೇರಿ ಪ್ರದೇಶಗಳಲ್ಲಿ ಬದುಕುತ್ತಿರುವ ಜನರ ಜೀವನಮಟ್ಟ ಸುಧಾರಿಸಲು ಸಾಮಾಜಿಕ ಚಟುವಟಿಕೆಗಳು ಅತ್ಯಂತ ಅಗತ್ಯವಾಗಿವೆ. ಈ ಹಿನ್ನೆಲೆಯಲ್ಲಿ ಶಿವಶರಣರ ದತ್ತಿಗೋಷ್ಠಿಗಳನ್ನು ಕೊಳಗೇರಿಗಳಲ್ಲಿ ಆಯೋಜಿಸುವುದು ಉತ್ತಮ ಪ್ರಯತ್ನವಾಗಬಹುದು ಎಂದು ಪ್ರೊ.ಬಿ.ಎಸ್.ಬೆಳಗಲಿ ಅಭಿಪ್ರಾಯಪಟ್ಟರು.

ನಗರದ ರುಡ್ ಸೆಟ್ ಹತ್ತಿರದ ಎಸ್.ಬಿ.ಜೆ. ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಯುವ ವೇದಿಕೆ, ಎಸ್.ಬಿ.ಜೆ. ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಲಿಂ.ಮರಲಿಗವ್ವ ಗಂಜ್ಯಾಳ, ಲಿಂ.ಹುಚ್ಚಪ್ಪಗೌಡ ನಾಡಗೌಡ, ಸಂತ ಸೇವಾಲಾಲ ಸ್ಮರಣೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ಕಾಲಘಟ್ಟದಲ್ಲಿ ಸಮಾಜದ ವಿವಿಧ ವರ್ಗಗಳ ನಡುವೆ ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳ ಕೊರತೆ ಕಂಡುಬರುತ್ತಿರುವುದು ಗಮನಾರ್ಹ ಸಂಗತಿ ಎಂದರು.

ಸಾಹಿತಿ ಇಂದುಮತಿ ಲಮಾಣಿ ಮಾತನಾಡಿ, ಸಂತ ಸೇವಾಲಾಲರು 18ನೇ ಶತಮಾನದಲ್ಲಿ ಜನಿಸಿದವರಾಗಿ ಪರಿಗಣಿಸಲಾಗುತ್ತದೆ. ಅವರು ತಮ್ಮ ಜೀವನವನ್ನು ಸಮಾನತೆ, ಸತ್ಯ ಮತ್ತು ಸೇವೆಯ ತತ್ವಗಳಿಗೆ ಅರ್ಪಿಸಿದರು. ಸಮುದಾಯದಲ್ಲಿ ನಡೆಯುತ್ತಿದ್ದ ಅನಾಚಾರಗಳು, ಅಂಧಶ್ರದ್ಧೆಗಳು ಮತ್ತು ಸಾಮಾಜಿಕ ಕೆಡುಕುಗಳನ್ನು ದೂರ ಮಾಡುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು ಎಂದರು.ಸಾಹಿತ್ಯ ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ದೂರದರ್ಶನ ಚಂದನ ವಾಹಿನಿಯ ವರದಿಗಾರ ಕಲ್ಲಪ್ಪ ಶಿವಶರಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತ, ಸಾಹಿತಿ ಕಲ್ಲಪ್ಪ ಶಿವಶರಣ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಾತಿಗಿಂತ ಕೃತಿ ಮುಖ್ಯ ಎಂಬುವುದು ಜೀವನದಲ್ಲಿ ಯಶಸ್ಸಿಗೆ ದಾರಿ ತೋರಿಸುವ ಮೂಲತತ್ವವಾಗಿದೆ. ನಾವು ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡುವ ಅಭ್ಯಾಸ ಬೆಳೆಸಬೇಕು. ಆಗ ಮಾತ್ರ ನಮ್ಮ ಜೀವನ ಅರ್ಥಪೂರ್ಣವಾಗುತ್ತದೆ ಮತ್ತು ಸಮಾಜದಲ್ಲಿ ಗೌರವ ಪಡೆಯಲು ಸಾಧ್ಯವಾಗುತ್ತದೆ ಎಂದರು.ಎಸ್.ಬಿ.ಜೆ. ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲೆ ವಿಜಯಲಕ್ಷ್ಮೀ ಕೆಂಗನಾಳ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಸಿ.ನಾಗಠಾಣ, ರಾಜಶೇಖ ನಾಡಗೌಡ, ಗೌರವ ಕಾರ್ಯದರ್ಶಿ ಈರಣ್ಣ ತೊಂಡಿಕಟ್ಟಿ, ಮ.ಗು.ಯಾದವಾಡ, ಸೋಮನಗೌಡ ಪಾಟೀಲ ಉಪಸ್ಥಿತರಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಯುವ ವೇದಿಕೆಯ ಅಧ್ಯಕ್ಷ ಅಮರೇಶ ಸಾಲಕ್ಕಿ ಸ್ವಾಗತಿಸಿದರು. ಸುಂದರಾಬಾಯಿ ಪಾಟೀಲ ನಿರೂಪಿಸಿ, ವಂದಿಸಿದರು.