ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣ ಬೇಡ: ಶಾಸಕ ಜಿ.ಡಿ.ಹರೀಶ್ ಗೌಡ ತಾಕೀತು

| Published : Jun 23 2024, 02:08 AM IST

ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣ ಬೇಡ: ಶಾಸಕ ಜಿ.ಡಿ.ಹರೀಶ್ ಗೌಡ ತಾಕೀತು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆಂದು ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನೇ ನೀಡುತ್ತಿಲ್ಲ. ಸಹಜವಾಗಿ ಸಿಗಬೇಕಿದ್ದ ಅನುದಾನಕ್ಕೂ ಕತ್ತರಿ ಬಿದ್ದಿದೆ. ಕಳೆದ ಎರಡು ದಿನಗಳಲ್ಲಿ ನಾನು ಸರ್ಕಾರದ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವ, ಅರಣ್ಯ, ಸಮಾಜಕಲ್ಯಾಣ ಮುಂತಾದ ಇಲಾಖೆ ಸಚಿವರನ್ನು ಭೇಟಿ ಮಾಡಿ ಅಭಿವೃದ್ಧಿಗಾಗಿ ಅನುದಾನ ನೀಡಬೇಕೆಂದು ಕೋರಿದ್ದೇನೆ.

ಕನ್ನಡಪ್ರಭ ವಾರ್ತೆ ಹುಣಸೂರು

ಹುಣಸೂರಿನ ಅಭಿವೃದ್ಧಿಗೆ ದೊರಕಿಬೇಕಿದ್ದ ಅನುದಾನವನ್ನು ನೀಡಬೇಡಿ ಎಂದು ಕೆಲ ವ್ಯಕ್ತಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ, ನ್ಯಾಯಯುತವಾಗಿ ಸಿಗಬೇಕಾದ ಅನುದಾನ ಸಿಗದಿದ್ದರೆ ತಾಲೂಕಿನ ಜನರೊಂದಿಗೆ ವಿಧಾನಸೌಧದ ಮುಂದೆ ಕುಳಿತುಕೊಳ್ಳಲು ಸಿದ್ಧವೆಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ಪಟ್ಟಣದ ಕನಕ ಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಆಶ್ರಯದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅಭಿನಂದನೆ ಮತ್ತು ಮತದಾರರಿಗೆ ಕೃತಜ್ಞತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆಂದು ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನೇ ನೀಡುತ್ತಿಲ್ಲ. ಸಹಜವಾಗಿ ಸಿಗಬೇಕಿದ್ದ ಅನುದಾನಕ್ಕೂ ಕತ್ತರಿ ಬಿದ್ದಿದೆ. ಕಳೆದ ಎರಡು ದಿನಗಳಲ್ಲಿ ನಾನು ಸರ್ಕಾರದ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವ, ಅರಣ್ಯ, ಸಮಾಜಕಲ್ಯಾಣ ಮುಂತಾದ ಇಲಾಖೆ ಸಚಿವರನ್ನು ಭೇಟಿ ಮಾಡಿ ಅಭಿವೃದ್ಧಿಗಾಗಿ ಅನುದಾನ ನೀಡಬೇಕೆಂದು ಕೋರಿದ್ದೇನೆ ಎಂದರು.

ವಿಚಿತ್ರವೆಂದರೆ ಹುಣಸೂರು ಕ್ಷೇತ್ರಕ್ಕೆ ಅನುದಾನ ನೀಡಬೇಡಿರೆಂದು ಕೆಲವ್ಯಕ್ತಿಗಳು ಸಚಿವರು ಮತ್ತು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ಧಾರೆಂದು ಸಚಿವರ ಬಾಯಿಂದಲೇ ಬಂದಿದೆ. ಇದು ಸರಿಯೇ? ಈ ತಾಲೂಕಿನ ಜನರು ನಿಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಇದೀಗ ಅಧಿಕಾರ ಹೋಯಿತು ಎಂದು ತಾಲೂಕಿನ ಅಭಿವೃದ್ಧಿಗೆ ಅಡ್ಡಿ ಉಂಟು ಮಾಡುವುದು ಸರಿಯಲ್ಲ. ಜನತೆ ನಿಮ್ಮನ್ನು ಕ್ಷಮಿಸಲಾರರು. ಇನ್ನೂ ಮುಂದಾದರೂ ಇಂತಹ ನೀಚಬುದ್ಧಿ ಬಿಡಿ ಎಂದು ಹೆಸರು ಹೇಳದೇ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿಗೆ ಮುದ್ರೆ ಒತ್ತಿಲ್ಲ:

ತಾವು ಅಧಿಕಾರಕ್ಕೆ ಬಂದ ನಂತರ ನೂತನವಾಗಿ ರಚಿಸಿರುವ ಕಾಲೇಜು ಅಭಿವೃದ್ಧಿ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತ ಮುದ್ರೆ ಒತ್ತುತ್ತಿಲ್ಲ. ಒಂದು ವರ್ಷದಿಂದ ಕಾಯುತಿದ್ದೇನೆ. ನಾಲ್ಕೈದು ಬಾರಿ ತಿಳಿಸಿದ್ದೇನೆ. ಕಾಲೇಜು ಅಭಿವೃಧ್ಧಿ ಸಮಿತಿ ರಚನೆ ವಿಚಾರದಲ್ಲೂ ರಾಜಕೀಯವೇ? ಸಿಡಿಸಿ ಸದಸ್ಯರು ತಮ್ಮ ಕೈಯಿಂದ ಹಣ ಹಾಕಿ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸುತ್ತಾರಯೇ ಹೊರತು ಹಣ ಹೊಡೆಯಲು ಅಲ್ಲ ಎಂದು ವ್ಯಂಗ್ಯವಾಡಿದರು.

ಹುಣಸೂರು ಉಪವಿಭಾಗ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲೂ ಅಕ್ರಮ, ಸಕ್ರಮ ಸಮಿತಿ ರಚನೆಯಾಗಿ ರೈತರಿಗೆ ಸಾಗುವಳಿ ಪತ್ರ ನೀಡಲಾಗುತ್ತಿದೆ. ಆದರೆ ಹುಣಸೂರು ತಾಲೂಕಿಗೆ ಮಾತ್ರ ಆಗಿಲ್ಲ. ಇದಕ್ಕೆ ಕಾರಣವೇನು? ಸಮಿತಿ ರಚಿಸದಂತೆ ತಡೆಯೊಡ್ಡುತ್ತಿರುವವರು ಯಾರು? ಅಭಿವೃದ್ಧಿ ವಿಚಾರಲ್ಲಿ ಯಾರೂ ರಾಜಕಾರಣ ಮಾಡಬಾರದು. ನೀವೇ ಸರ್ಕಾರದ ಮಟ್ಟದಲ್ಲಿ ಅನುದಾನ ತನ್ನಿರಿ. ಯೋಜನೆಯು ಕ್ರೆಡಿಟ್ ನೀವೆ ತಗೊಳ್ಳಿ. ಜೊತೆಯಲ್ಲಿ ನಾನೂ ಇರುತ್ತೇನೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಇದಕ್ಕೆಲ್ಲ ನಾನು ಜಗ್ಗುವುದಿಲ್ಲ, ಕುಗ್ಗುವುದಿಲ್ಲ. ಜನರೊಂದಿಗೆ ವಿಧಾನಸೌಧದ ಮುಂದೆ ಕುಳಿತುಕೊಳ್ಳಲು ಸಿದ್ಧನಿದ್ದೇನೆ ಎಂದು ಪ್ರತಿಪಕ್ಷಕ್ಕೆ ಎಚ್ಚರಿಕೆ ನೀಡಿದರು.

ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿ:

ನೂತನ ಸಂಸದರು ತಾಲೂಕಿನ ಅಭಿವೃದ್ಧಿಗಾಗಿ ತಮ್ಮೊಂದಿಗೆ ಕೈಜೋಡಿಸುವ ಭರವಸೆ ನೀಡಿದ್ದಾರೆ. ಕೇಂದ್ರದಲ್ಲಿ ಪ್ರಧಾನಮಂತ್ರಿ ಮೋದಿಜೀ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ನಂಬಿಕೆ ಇಟ್ಟು, ಕುಮಾರಸ್ವಾಮಿ ಅವರನ್ನು ಉಕ್ಕು ಮತ್ತು ಬೃಹತ್ ಕೈಗಾರಿಕೆ ಮಂತ್ರಿಯನ್ನಾಗಿ ಮಾಡಿದ್ದಾರೆ. ಇದು ರಾಜ್ಯಕ್ಕೆ ಮತ್ತು ನಮ್ಮ ತಾಲೂಕಿಗೂ ಆಶಾದಾಯಕ ಬೆಳವಣಿಗೆ. ಸಂಸದರೊಂದಿಗೆ ಕೂಡಿ ತಾಲೂಕಿನ ಜನರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದರು.

ಅಭಿವೃದ್ಧಿ ಕಾರ್ಯ ಕೈಗೊಳ್ಳಲು ದುಡಿಯುತ್ತೇನೆ:

ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಲೋಕಸಭ ಚುನಾವಣೆಯಲಿ ತಾಲೂಕಿನ ಜನತೆ ನನಗೆ ಹೆಚ್ಚಿನ ಮತ ನೀಡುವ ಮೂಲಕ ಲೀಡ್ ಕೊಟ್ಟಿದ್ದಾರೆ. ಅದಕ್ಕಾಗಿ ನಾನೆಂದೂ ತಮಗೆ ಆಬಾರಿಯಾಗಿದ್ದೇನೆ. ತಾಲೂಕಿನ ಜ್ವಲಂತ ಸಮಸ್ಯೆಗಳ ಕುರಿತು ಅರಿತಿದ್ದೇನೆ. ತಂಬಾಕು ಬೆಳೆಗಾರರ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಮೂಲ ಸೌಕರ್ಯಗಳ ಕೊರತೆ ಮುಂತಾದ ವಿಷಯಗಳ ಕುರಿತು ಸಮಸ್ಯೆಯನ್ನು ಅರಿತು, ಪ್ರಕೃತಿ ಮತ್ತುಪರಿಸರಕ್ಕೆ ಧಕ್ಕೆ ಬಾರದಂತೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ದುಡಿಯುತ್ತೇನೆ. ಶಾಸಕ ಜಿ.ಡಿ. ಹರೀಶ್ ಗೌಡ ಅವರೊಂದಿಗೆ ಕೈಜೋಡಿಸಿ ಸಮಸ್ಯೆಗಳ ಪರಿಹಾರಕ್ಕ ಯತ್ನ ನಡಸುತ್ತೇನೆಂದು ಭರವಸೆ ನೀಡಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಹಿರಿಯ ಮುಖಂಡ ನಾಗರಾಜ ಮಲ್ಲಾಡಿ ಮಾತನಾಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಕಾಂತರಾಜು, ನಗರಮಂಡಲ ಅಧ್ಯಕ್ಷ ನಾರಾಯಣ್, ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಸತೀಶ್ ಕುಮಾರ್, ಸೂರ್ಯಕುಮಾರ್, ಜಿಪಂ ಮಾಜಿ ಸದಸ್ಯ ದೇವರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಹರವೆ ಶ್ರೀಧರ್, ಮಧು, ವೆಂಕಟಮ್ಮ, ಕಮಲಮ್ಮ, ಯಶೋಧಮ್ಮ, ಹಬ್ಬನಕುಪ್ಪೆ ದಿನೇಶ್, ಮಂಜನಾಥ್, ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಇದ್ದರು.