ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ 16 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆಯಾಗಿದ್ದವು. ಮಂಗಳವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ಉಮೇಶ ಮೇಟಿ, ಭಾರತೀಯ ಜನತಾ ಪಾರ್ಟಿಯ ವೀರಭದ್ರಯ್ಯ ಚರಂತಿಮಠ, ಉತ್ತಮ ಪ್ರಜಾಕೀಯ ಪಾರ್ಟಿಯ ಅಂತೋಷ ಸವ್ವಾಸೆ, ಜನತಾ ಚಳುವಳಿ ಭಾರತ ಪಕ್ಷದ ತೇಜೋರಾಮ ಶೆಟ್ಟಿ ದೇವಾಂಗ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಗರಾಜ ಕಲಕುಟಗರ, ಬ್ಲ್ಯೂ ಇಂಡಿಯಾ ಪಾರ್ಟಿಯ ತಳವಾರ ಶಿವಕುಮಾರ, ಆಲ್ ಇಂಡಿಯಾ ಜನರಕ್ಷ ಪಾರ್ಟಿಯಿಂದ ಸಿದ್ದಪ್ಪ ಗೋಡಿ, ಪಕ್ಷೇತರದಿಂದ ಅಬ್ದುಲ್ ರಜಾಕ್‌ ಬಾಳಿಕಾಯಿ, ಆಯೂಬಖಾನ ಲಾಲಸಾಬ ಬಾಗೇವಾಡಿ, ಆನಂದ ಜಕಾತಿ, ಗೋವಿಂದಪ್ಪ ಬಳ್ಳಾರಿ, ಪ್ರಶಾಂತ ಶರಣಪ್ಪ ರಾವ, ಯಂಕಪ್ಪ ಬಾಪಣ್ಣ ಕಮತಗಿ, ರವಿ ಶಿವಪ್ಪ ಪಡಸಲಗಿ ಅವರು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿವೆ.ಪಕ್ಷೇತರದಿಂದ ಪರಶುರಾಮ ನೀಲನಾಯಕ, ಬಾಬುಷಾ ರೊಳ್ಳಿ ಅವರು ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡಿವೆ. ನಾಮಪತ್ರ ಹಿಂಪಡೆಯಲು ಮಾ.26 ಕೊನೆಯ ದಿನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.