ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಎನ್ಎಸ್ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣದ ಹಾಗೂ ಸಮಾಜ ಸೇವೆ ಮಾಡುವ ಮನೋಭಾವ ಬೆಳೆಯುತ್ತದೆ ಎಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ತಿಳಿಸಿದರು.ಮಂಗಳವಾರ ತಾಲೂಕಿನ ಚಿಕ್ಕಬಳ್ಳಿ-ಆನಸೋಸಲು ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ರಾಷ್ಟ್ರೀಯ ಸೇವಾ ಯೋಜನೆ ಘಟಕ, ವಿ.ಸಿ.ಫಾರಂ ಕೃಷಿ ಮಹಾ ವಿದ್ಯಾಲಯದಿಂದ ನಡೆದ ದ್ವಿತೀಯ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿ ಗಳಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಮನಃಸಂತೋಷ ಜೊತೆಗೆ ಅದಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ ಎಂದರು.
ಜಿಲ್ಲೆಯಲ್ಲಿ ಬಯೋ ಎಥೆನಾಲ್ಗೆ ರೈತರು ಹೆಚ್ಚು ಒತ್ತುಕೊಡಬೇಕು. ಎಥೆನಾಲ್ ಬಳಕೆ ಮಾಡಲು ಜಿಲ್ಲೆ ಸೂಕ್ತವಾಗಿದೆ. ರೈತರು ಎಥೆನಾಲ್ ಮಾಡುವುದರಿಂದ ಅವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ರೈತರಿಂದ ಸದ್ಯಕ್ಕೆ ಆಹಾರ ಮತ್ತು ಮೇವು ಸಿಗುತ್ತಿದೆ. ಬಯೋ ಪೆಟ್ರೋಲ್, ಬಯೋ ಡೀಸಲ್, ವಿದ್ಯುಚ್ಛಕ್ತಿ ರೈತರಿಂದ ಬರಬೇಕು ಎಂದರು.ಎನ್ಎಸ್ಎಸ್ ಶಿಬಿರಗಳಲ್ಲಿ ಸ್ವಚ್ಛತೆ ಹಾಗೂ ಇತರೆ ವಿಶೇಷ ಕಾರ್ಯಕ್ರಮಗಳ ಜೊತೆಗೆ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿನ ಗ್ರಾಮಸ್ಥರು ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುತ್ತಾರೆ, ಎಲ್ಲವನ್ನು ಬಳಸಿಕೊಂಡು ವಿಶೇಷ ಶಿಬಿರ ಆಯೋಜನೆ ಮಾಡಿ ಎಂದರು.
ಕೃಷಿ ಡೀನ್ ಡಾ.ಪಿ.ಎಸ್.ಫಾತಿಮಾ ಮಾತನಾಡಿ, ೧೯೬೯ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆ ಮೊದಲಿಗೆ ೩೦ ವಿಶ್ವವಿದ್ಯಾಲಯಗಳಲ್ಲಿ ಇತ್ತು. ಪ್ರಸ್ತುತ ೬೦೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಎಂ.ಕೃಷ್ಣ, ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಸದಸ್ಯ ಮಂಗಲ ಎಂ. ಯೋಗೀಶ್, ಜಿಲ್ಲಾ ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸಿ.ಕೆ.ರವಿಶಂಕರ್, ಮಾಜಿ ಪ್ರಧಾನ್ ದೇವರಾಜು, ಗ್ರಾಪಂ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಎ.ಎನ್. ಕೃಷ್ಣ , ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ.ಪ್ರವೀಣ್,ಡಾ. ಸಂಗೀತಾ, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವರಾಮ್ ಇತರರಿದ್ದರು.