ಸಾರಾಂಶ
ವೈಟ್ಫೀಲ್ಡ್ ಹಾಲಿಡೇಸ್ನ ಸ್ಮಿತಾ ಪ್ರದಾನ । ಪರಿಸರದ ಬಗ್ಗೆ ವಿಶೇಷ ಕಾಳಜಿ ಪರಿಗಣನೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ವಿನೋಬನಗರ ವ್ಯಾಪ್ತಿಯ ಹುಚ್ಚರಾಯ ಕಾಲನಿ ನಿವಾಸಿ ಓಮಾಕ್ಷಿ ಕುಟುಂಬಕ್ಕೆ ಸಮನ್ವಯ ಟ್ರಸ್ಟ್ ವತಿಯಿಂದ ಪರಿಸರ ಕುಟುಂಬ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಸಮನ್ವಯ ಟ್ರಸ್ಟ್ ನೇತೃತ್ವದಲ್ಲಿ ಹಾಗೂ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಮಾರ್ಗದರ್ಶನದಲ್ಲಿ ಶಿವಮೊಗ್ಗದಲ್ಲಿನ ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಪರಿಸರ ಪ್ರಶಸ್ತಿ ನೀಡುವ ಮೂಲಕ ಗೌರವಿಸುವ ಕೆಲಸವನ್ನು ಟ್ರಸ್ಟ್ ವತಿಯಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಟ್ರಸ್ಟ್ ವತಿಯಿಂದ ನೀಡುತ್ತಿರುವ 51ನೇ ಪರಿಸರ ಕುಟುಂಬ ಪ್ರಶಸ್ತಿ ಇದಾಗಿದೆ.ಓಮಾಕ್ಷಿ ಅವರು ಕೊಳಚೆ ಪ್ರದೇಶದ ಬಡಾವಣೆಯಲ್ಲಿ ಪುಟ್ಟ ಮನೆ ಹೊಂದಿದ್ದು, ಮನೆಯ ಮುಂಭಾಗ ಹಾಗೂ ಹಿಂಭಾಗದಲ್ಲಿ ಇರುವ ಸಣ್ಣ ಪ್ರದೇಶದಲ್ಲಿ ಉತ್ತಮ ಪರಿಸರದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಒಡೆದ ಬಿಂದಿಗೆ, ಇತರ ವಸ್ತುಗಳಲ್ಲಿಯೂ ಸಹ ಮಣ್ಣು ಹಾಕಿ ಸಸಿಗಳನ್ನು ಪೋಷಿಸುತ್ತ ಸುಂದರ ಪರಿಸರ ನಿರ್ಮಾಣ ಮಾಡಿದ್ದಾರೆ. ಪ್ರತಿಯೊಂದು ಮನೆಯ ಸದಸ್ಯರು ಪರಿಸರ ಕಾಳಜಿ ಹೊಂದುವುದು ಅವಶ್ಯ. ಓಮಾಕ್ಷಿ ಅವರ ಪರಿಸರ ಕಾಳಜಿ ಗುರುತಿಸಿ ಸಮನ್ವಯ ಟ್ರಸ್ಟ್ ಪರಿಸರ ಪ್ರಶಸ್ತಿ ನೀಡಿ ಅಭಿನಂದಿಸಿದೆ.
ಸಮನ್ವಯ ಟ್ರಸ್ಟ್ ಕಾರ್ಯ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ನೇತೃತ್ವದ ತಂಡವು ಶಿವಮೊಗ್ಗದ ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ. ಪರಿಸರದ ಕಾಳಜಿಯನ್ನು ಮನೆ ಮನೆಗೆ ತಲುಪಿಸುವ ಆಶಯದಿಂದ ರಾಜ್ಯದಲ್ಲಿಯೇ ನಡೆಸುತ್ತಿರುವ ವಿಶೇಷ ಪ್ರಯತ್ನ ಇದಾಗಿದೆ.ವೈಟ್ಫೀಲ್ಡ್ ಹಾಲಿಡೇಸ್ ಶಿವಮೊಗ್ಗ ಶಾಖೆ ಮುಖ್ಯಸ್ಥೆ ಸ್ಮಿತಾ ಅವರು ಪರಿಸರ ಕುಟುಂಬ ಪ್ರಶಸ್ತಿಯನ್ನು ನೀಡಿದರು. ಸಮನ್ವಯ ಟ್ರಸ್ಟ್ ನ ಸಮನ್ವಯ ಕಾಶಿ, ಸಲಹಾ ಸಮಿತಿ ಸದಸ್ಯ ಯತೀಶ್, ಜಿ.ಪಿ.ಮಲ್ಲಿಕಾರ್ಜುನ ,ಕೆ.ಎಂ.ವಿಜಯಕುಮಾರ್ ಮತ್ತಿತರರು ಇದ್ದರು.