ಸಾರಾಂಶ
ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಿಳಿಂದ ಪರ್ಯಾಯ ಶ್ರೀಪಾದರಿಗೆ ಗೀತಾ ಲೇಖನ ಅರ್ಪಣೆಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾನುವಾರ ಸ್ವಪ್ರೇರಣೆಯಿಂದ ಬರೆದ ಭಗವದ್ಗೀತಾ ಲೇಖನ ಪುಸ್ತಕಗಳನ್ನು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ಸಮರ್ಪಿಸಿದರು. ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.ಈ ಸಂದರ್ಭ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಶೀರ್ವಚಿಸಿದ ಪರ್ಯಾಯ ಶ್ರೀಪಾದರು, ವಿದ್ಯಾರ್ಥಿ ಜೀವನದಲ್ಲೇ ಭಗವದ್ಗೀತೆಯನ್ನು ಬರೆಯುವುದು ಹಾಗೂ ಓದುವುದರಿಂದ ಹೆಚ್ಚಿನ ಲಾಭವಿದೆ. ಜೀವನದ ಹೆಚ್ಚಿನ ಭಾಗದಲ್ಲಿ ಗೀತೆಯ ಮಾರ್ಗದರ್ಶನವನ್ನು ಪಡೆಯಬಹುದಾಗಿದೆ. ಗೀತೆಯನ್ನು ಆವರ್ತಿಸಿದಷ್ಟೂ ಹೊಸ ಹೊಸ ಅಭಿಪ್ರಾಯಗಳು ಕಾಣಿಸಿಕೊಳ್ಳುವುವು, ನಮ್ಮ ದೇಶ-ಕಾಲ ಪರಿಸ್ಥಿತಿಗೆ ಅನುಗುಣವಾದ ದಾರಿಯನ್ನು ಗೀತೆಯು ತೋರಿಸಿಕೊಡುತ್ತದೆ. ಗೀತೆಯ ಸಂದೇಶ ತುಂಬಾ ವಿಶಾಲವಾಗಿದೆ. ಯಾವುದೇ ದೇಶ-ಭಾಷೆ, ಜಾತಿ-ವರ್ಣ, ಮತ-ಧರ್ಮಗಳ ಗಡಿಗಳನ್ನು ಮೀರಿ ನಿಂತಿದೆ ಎಂದರು.ಶ್ರೀಕೃಷ್ಣ ದೇವರು ಗೀತೆಯಲ್ಲಿ, ಪರಿತ್ರಾಣಾಯ ಸಾಧೂನಾಂ ವಿನಾಶಯ ಚ ದುಷ್ಕೃತಾಂ ಎಂಬ ಮಾತಿನಲ್ಲಿ ಬ್ರಾಹ್ಮಣ ಅಥವಾ ಬೇರಾವುದೇ ಜಾತಿಯನ್ನಾಗಲೀ ಹಿಂದೂ ಮೊದಲಾದ ಧರ್ಮವನ್ನಾಗಲೀ ಹೆಸರಿಸದೇ ಸಜ್ಜನರ ರಕ್ಷಣೆ ಮತ್ತು ದುರ್ಜನರ ಶಿಕ್ಷಣವೇ ನನ್ನ ಗುರಿ ಎಂದು ಹೇಳಿದ್ದಾರೆ.ಇಂತಹ ವಿಶಾಲವಾದ ಅನೇಕ ದೃಷ್ಟಿಕೋನದ ಉದ್ಗಾರ ಗೀತೆಯಲ್ಲಿದೆ. ಮುಂದಿನ ಆಧ್ಯಾತ್ಮಿಕ ಯುಗದಲ್ಲಿ ಗೀತೆಯನ್ನು ಬಲ್ಲವರು ಮತ್ತು ಬೋಧಿಸುವವರಿಗೆ ಹೆಚ್ಚಿನ ಬೇಡಿಕೆ ಇರಲಿದೆ. ಆದ್ದರಿಂದ ಸಂಸ್ಕೃತವನ್ನು ಓದಿದವರು ಭಗವದ್ಗೀತೆಯನ್ನು ಅಧ್ಯಯನವನ್ನು ಮಾಡುವುದು ಸಫಲವಾಗಲಿದೆ ಎಂದು ಪ್ರಮಾಣಪತ್ರ ಮತ್ತು ಮಂತ್ರಾಕ್ಷತೆಗಳನ್ನಿತ್ತು ಹರಸಿದರು.ಈ ಸಂದರ್ಭದಲ್ಲಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ವಿ. ರಾವ್ ಅವರು ವಿದ್ಯಾರ್ಥಿಗಳ ಪರವಾಗಿ ಉಭಯ ಶ್ರೀಪಾದರನ್ನು ಫಲವಿತ್ತು, ಶುಷ್ಕಫಲೋಷ್ಣಿಷವನ್ನು ತೊಡಿಸಿ ಗೌರವಿಸಿದರು. ವಿದ್ಯಾರ್ಥಿಗಳು ಶ್ರೀಪಾದರ ಹಸ್ತಲಿಖಿತ ಶ್ರೀಪಾದರ ಡಿಜಿಟಲ್ ಚಿತ್ರಕಲೆಯ ವರ್ಣ ಚಿತ್ರವನ್ನು ಸಮರ್ಪಿಸಿದರು. ಶ್ರೀಪಾದರ ಅಂತಾರಾಷ್ಟ್ರಿಯ ಕಾರ್ಯದರ್ಶಿ ಪ್ರಸನ್ನಾಚಾರ್ಯರು ಮತ್ತು ಕೋಟಿ ಗೀತಾ ಲೇಖನ ಯಜ್ಞದ ಅನಂತ ಕೃಷ್ಣ ಪ್ರಸಾದ್, ಕಾಲೇಜಿನ ಉಪನ್ಯಾಸಕ ಡಾ. ರಾಧಾಕೃಷ್ಣ ಭಟ್, ಗಣಪತಿ ಭಟ್ ಮತ್ತು ಶ್ರೀನಿವಾಸ ತಂತ್ರಿ ಉಪಸ್ಥಿತರಿದ್ದರು. ಪ್ರೊ.ಷಣ್ಮುಖ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಾಯಕ ಶ್ರೀವತ್ಸ ಉಪಾಧ್ಯಾಯ, ಶ್ರೀಕರ ಉಪಾಧ್ಯಾಯ ಮತ್ತು ಮುಕುಂದ ಕೊಡಂಕಿರಿ ಸಹಕರಿಸಿದರು.