ವೀರತನದ ಪ್ರತೀಕ ಒನಕೆ ಓಬವ್ವ: ಶಾಸಕ ತಮ್ಮಯ್ಯ

| Published : Nov 11 2024, 11:48 PM IST

ಸಾರಾಂಶ

ಚಿಕ್ಕಮಗಳೂರು, ವೀರತನದ ಪ್ರತೀಕ ಒನಕೆ ಓಬವ್ವ, ಅವರ ಸಾಹಸಮಯ ಜೀವನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.

ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವೀರತನದ ಪ್ರತೀಕ ಒನಕೆ ಓಬವ್ವ, ಅವರ ಸಾಹಸಮಯ ಜೀವನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.ಜಿಲ್ಲಾಡಳಿತದಿಂದ ಸೋಮವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ನಾಡು ಅನೇಕ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟು ಹಲವಾರು ವೀರ ಸೈನಿಕರು, ವೀರ ವನಿತೆಯರನ್ನು ತನ್ನ ಮಡಿಲಿನಲ್ಲಿ ಇರಿಸಿಕೊಂಡಿದೆ. ಇವರ ಹೆಸರು ಇಂದಿಗೂ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿವೆ. ನಮ್ಮ ನಾಡಿನ ಐತಿಹಾಸಿಕ ಸ್ಥಳ ಚಿತ್ರದುರ್ಗ ಎಂದ ಕ್ಷಣ ನೆನಪಾಗುವುದೇ ಹೈದರಾಲಿ ಸೈನಿಕರೊಡನೆ ಏಕಾಂಗಿಯಾಗಿ ಹೋರಾಡಿದ ವೀರ ವನಿತೆ ಒನಕೆ ಓಬವ್ವನ ಹೆಸರು. ಅವರ ಶೂರತನದ ಜೀವನ ಕತೆಗಳು ಸದಾ ಚಿರಸ್ಮರಣೀಯ ಎಂದರು.

ಯಾವುದೇ ಯುದ್ಧ ಕಲೆಗಳು, ಶಸ್ತ್ರಾಭ್ಯಾಸಗಳನ್ನು ತಿಳಿಯದ ಸಾಮಾನ್ಯ ಮಹಿಳೆ ತನ್ನ ನಾಡಿನ ರಕ್ಷಣೆಗಾಗಿ ಏಕಾಂಗಿಯಾಗಿ ಕೋಟೆಗೆ ಆಕ್ರಮಣ ಮಾಡಿದ ನೂರಾರು ಎದುರಾಳಿ ಸೈನಿಕರನ್ನು ಕೇವಲ ಒನಕೆಯನ್ನು ಅಸ್ತ್ರವಾಗಿ ಮಾಡಿಕೊಂಡು ಅವರನ್ನು ಸೆದೆಬಡಿದು ದಾಳಿಯ ಗೆಲುವಿಗೆ ಕಾರಣಳಾದಳು. ದೇಶ ಪ್ರೇಮವಿರುವ ಪ್ರತಿಯೊಬ್ಬರಿಗೂ ದೇಶದ ರಕ್ಷಣೆ ವಿಚಾರ ಬಂದಾಗ ಧೈರ್ಯ ತಾನಾಗೆ ಚಿಮ್ಮುತ್ತದೆ. ನಾಡು, ನುಡಿ, ದೇಶ ಪ್ರೇಮವನ್ನು ತಮ್ಮಲ್ಲಿ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ತಿಳಿಸಿದರು.ತರೀಕೆರೆ ತಾಲೂಕಿನ ಉಡೇವಾ ಸರ್ಕಾರಿ ಪ್ರೌಡ ಶಾಲೆ ಅಧ್ಯಾಪಕ ಎಂ.ಇ. ರಮೇಶ್ ಉಪನ್ಯಾಸ ನೀಡಿ, ಒನಕೆ ಓಬವ್ವಳ ಜೀವನ ಕಥೆ ಕೇಳುವ ಪ್ರತಿಯೊಬ್ಬರಲ್ಲೂ ದೇಶ ಪ್ರೇಮ ಮೂಡುತ್ತದೆ. ನಾಡಿನಲ್ಲಿ ಚಿತ್ರದುರ್ಗದ ಪಾಳೆಯಗಾರ ಮದಕರಿ ನಾಯಕನಿಗೂ ಹೈದರಾಲಿಗೂ ನಡೆದ ಕಾಳಗ ಪ್ರಸಿದ್ಧವಾಗಿದೆ. ಹೈದರಾಲಿ ಈ ಅಭೇದ್ಯ ದುರ್ಗವನ್ನು ತಿಂಗಳುಗಟ್ಟಲೆ ಮುತ್ತಿಗೆ ಹಾಕಿ ಸ್ವಾಧೀನಪಡಿಸಿಕೊಳ್ಳಲಾಗದೆ ತನ್ನ ಶತ್ರುವನ್ನು ಭೇದೋಪಾಯದಿಂದಲೇ ಗೆಲ್ಲಬೇಕೆಂದು ಬಯಸಿ, ಕೋಟೆ ಸುತ್ತಲೂ ಸುಳಿದಾಡುತ್ತಿ ರುವಾಗ ಕಳ್ಳಗಿಂಡಿಯನ್ನು ಪತ್ತೆ ಮಾಡಿ ಅದರಿಂದ ಕೋಟೆ ಒಳಗೆ ನುಸುಳಲು ಪ್ರಯತ್ನಿಸಿದ ಶತ್ರು ಸೈನಿಕರನ್ನು ಹೊಂಚು ಹಾಕಿ ಕೂಡಲೇ ಗುಡಿಸಲಿಗೆ ತೆರಳಿ ಒಂದು ಒನಕೆಯನ್ನು ತಂದು ಆ ಕಳ್ಳಗಿಂಡಿಯ ಬಳಿ ನಿಂತು ಅತ್ತ ಶತ್ರು ಸೈನಿಕರು ಒಬ್ಬೊಬ್ಬರಾಗಿ ನುಸುಳಿ ಬರುತ್ತಿದ್ದಂತೆ ಓಬವ್ವ ಅವರ ತಲೆಯನ್ನು ಒನಕೆಯಿಂದ ಹೊಡೆದು ಕೆಡವಿ ಆಕೆ ಮುಂದೆ ಹೆಣದ ರಾಶಿಯೇ ಹಾಕಿದ್ದಳು. ಕೊನೆಗೆ ಶತ್ರುಗಳನ್ನು ಸೋಲಿಸಿ ವಿಜಯ ಸಾಧಿಸಿದರು. ಇದರಲ್ಲಿ ವಿಜಯದ ಸಿಂಹ ಪಾಲು ಓಬವ್ವಳದೇ ಆಗಿದ್ದರಿಂದ ಕಾವಲು ಗಾರನ ಪತ್ನಿಯಾದ ಓಬವ್ವಳ ಪರಾಕ್ರಮದ ಕುರುಹಾಗಿ ಆ ಕಳ್ಳಗಿಂಡಿಗೆ ಒನಕೆ ಓಬವ್ವನ ಕಿಂಡಿ ಎಂಬ ಹೆಸರು ಇಂದಿಗೂ ಪ್ರಸಿದ್ಧಿಯಾಗಿದೆ ಎಂದು ಹೇಳಿದರುನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ನಮ್ಮ ನಾಡಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ ಹಾಗೂ ಒನಕೆ ಓಬವ್ವರಂತಹ ವೀರ ಮಹಿಳೆಯರು ಜನಿಸಿರುವುದು ನಮ್ಮ ನಾಡಿನ ಹೆಮ್ಮೆ, ಅವರ ಜೀವನ ಕತೆಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ನಮ್ಮ ಮಕ್ಕಳಲ್ಲಿ ಇಂತಹ ವೀರ ವನಿತೆಯರ ಸಾಧನೆಗಳನ್ನು ತಿಳಿಸಿ ದೇಶ ಪ್ರೇಮ ಮೂಡಿಸಿ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳ ಬೀಜ ಬಿತ್ತಿ ಉತ್ತಮ ಪ್ರಜೆಗಳಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್, ಚಿಕ್ಕಮಗಳೂರು ತಾಲೂಕು (ಗ್ರೇಡ್- 2) ತಹಸೀಲ್ದಾರ್ ರಾಮ್‌ರಾವ್ ದೇಸಾಯಿ, ಜಿಲ್ಲಾ ಛಲವಾದಿ ಮಹಾಸಭಾ ಸಂಘ ಅಧ್ಯಕ್ಷ ರಘು, ಗೌರವಾಧ್ಯಕ್ಷ ಮಲ್ಲೇಶ್ ಸ್ವಾಮಿ, ನಗರಾಧ್ಯಕ್ಷ ವೆಂಕಟೇಶ್ ಮೂರ್ತಿ, ಹಿರೇಮಗಳೂರು ರಾಮಚಂದ್ರ ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 11 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್‌, ರಾಮ್‌ರಾವ್‌ ದೇಸಾಯಿ, ರಘು, ಡಾ. ರಮೇಶ್‌ ಇದ್ದರು.