ಕುಷ್ಟಗಿ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ ಮತ್ತು ಸಮಾಜ ಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.

ಪಟ್ಟಣದ ಎನ್‌.ಸಿ.ಎಚ್‌ ಕಲ್ಯಾಣ ಮಂಟಪದಲ್ಲಿ ತಾಲೂಕು ಹಾಲುಮತ ಸಮಾಜ ಕುಷ್ಟಗಿ,ತಾಲೂಕು ಹಾಲುಮತ ಮಹಾಸಭಾ ಕುಷ್ಟಗಿ ಹಾಗೂ ಶ್ರೀಕನಕ ನೌಕರರ ಸಂಘ ತಾಲೂಕು ಘಟಕ ಕುಷ್ಟಗಿ ಸಹಯೋಗದಲ್ಲಿ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜದ ಯುವಕರು ಶಿಕ್ಷಣವಂತರಾಗಿ ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದ ಅವರು, ಸಮಾಜವು ಆರ್ಥಿಕತೆಯಿಂದ ಹಿಂದುಳಿದ ಸಮುದಾಯವಾಗಿದ್ದು, ಉತ್ತಮ ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆ ಅಲಂಕರಿಸಿ ಸಮಾಜ ಅಭಿವೃದ್ಧಿಗೊಳಿಸಬೇಕಿದೆ ಎಂದ ಅವರು,ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನಕ್ಕೆ ನನ್ನಿಂದ ₹25 ಲಕ್ಷ ಅನುದಾನ ನೀಡಲಾಗುವದು ಎಂದು ಭರವಸೆ ನೀಡಿದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಶಿಕ್ಷಣದಿಂದ ವ್ಯಕ್ತಿತ್ವ ವಿಕಾಸವಾಗುವುದರ ಜತೆಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ. ಹಾಲುಮತ ಸಮಾಜದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವುದು ಉತ್ತಮ ಪರಂಪರೆಯಾಗಿದ್ದು, ಇದರಿಂದ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆ ಸಿಗುತ್ತದೆ ಎಂದು ಹೇಳಿದರು.


ಪಟ್ಟಣದಲ್ಲಿ ಕನಕ ಭವನ ಅರ್ಧಕ್ಕೆ ನಿಂತಿದ್ದು, ಸಂರ್ಪೂಣಗೊಳ್ಳಲು ಇನ್ನೂ ಏಳು ಕೋಟಿ ಅನುದಾನ ಬೇಕಾಗಿದ್ದು, ಈ ಕುರಿತು ಈಗಾಗಲೆ ಸರ್ಕಾರದ ಗಮನಕ್ಕೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರದಲ್ಲಿ ಕನಕ ಭವನ ನಿರ್ಮಿಸಿ ಉದ್ಘಾಟಿಸುವ ಕಾರ್ಯ ಮಾಡಲಾಗುವದು ಎಂದು ಹೇಳಿದರು.

ನಿಂಗಪ್ಪ ಕಂಬಳಿ ಉಪನ್ಯಾಸ ನೀಡಿದರು. ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು.

ಕನಕದಾಸ ಶಾಖಾ ಮಠದ ಬಾದಿಮನಾಳ ಗ್ರಾಮದ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಹಾಲುಮತ ಸಮಾಜದ ವೇದಮೂರ್ತಿ ಶಿವಾನಂದಯ್ಯ ಗುರುವಿನ, ಶರಣಯ್ಯ ಗುರುವಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಹಿಂದುಳಿದ ವರ್ಗದ ಆಯೋಗದ ಸದಸ್ಯೆ ಲಕ್ಷ್ಮೀ ಪಾಟೀಲ, ಹೊಳಿಯಪ್ಪ ಕುರಿ, ಫಕೀರಪ್ಪ ಚಳಗೇರಿ, ಹನಮಂತಪ್ಪ ಚೌಡ್ಕಿ, ಬೀರಪ್ಪ ಅಂಡಗಿ, ಕಲ್ಲೇಶ ತಾಳದ್, ಯಮನೂರಪ್ಪ ಪೂಜಾರ, ಭರಮಪ್ಪ ಪರಸಾಪೂರ, ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ, ಸಂಗನಗೌಡ ಪಾಟೀಲ, ಮಹಾಂತೇಶ ಎನ್.ಗಣವರಿ, ಸತ್ಯಪ್ಪ ರಾಜೂರು, ಶಂಕರ ಕರಪಡಿ, ನೀಲನಗೌಡ ಹೊಸಗೌಡರ, ಹುಲಗಪ್ಪ ಚೂರಿ, ಶೈಲಜಾ ಬಾಗಲಿ, ದೇವಪ್ಪ ಕಟ್ಟಿಹೊಲ, ಬಸವರಾಜ ಗುರಿಕಾರ, ಬೀರಪ್ಪ ಕುರಿ, ಬಸವರಾಜ ಸಂಕನಾಳ, ನಾಗರಾಜ ಹಕ್ಕಿ, ಮಹಾಲಿಂಗಪ್ಪ ದೋಟಿಹಾಳ, ಮಲ್ಲಪ್ಪ ಗಟ್ಟಿ, ದೇವಪ್ಪ ಒಂಟಿಗಾರ, ಶೇಖರಗೌಡ ಪಾಟೀಲ, ಪರಶುರಾಮ ವಣಗೇರಿ ಸೇರಿದಂತೆ ಅನೇಕರು ಇದ್ದರು.

ಕನಕ ನೌಕರರ ಸಂಘದ ತಾಲೂಕಾಧ್ಯಕ್ಷ ಚಂದಪ್ಪ ಗುಡಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಆರ್.ಪಿ ಶರಣಪ್ಪ ತಮ್ಮಿನಾಳ ಕಾರ್ಯಕ್ರಮ ನಿರೂಪಿಸಿದರು.