ಹೂವಿನಹಡಗಲಿ: ಮನೆಯ ಮಾಲಿಕರು ಹೊರಗಡೆಗೆ ಮತ್ತು ಪರಸ್ಥಳಕ್ಕೆ ಹೋಗುವ ಮುನ್ನ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಜತೆಗೆ ಬೇಸಿಗೆ ಸಂದರ್ಭದಲ್ಲಿ ಮನೆಯ ಮೇಲ್ಭಾಗದಲ್ಲಿ ಮಲಗುವವರು ಕಳ್ಳರಿಂದ ಎಚ್ಚರಿಕೆ ವಹಿಸಿಬೇಕಿದೆ. ಕಳ್ಳತನ ಇತರೆ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಜನರ ಸಹಕಾರ ಅಗತ್ಯವಿದೆ ಎಂದು ಪಟ್ಟಣ ಪೊಲೀಸ್‌ ಠಾಣೆಯ ಪಿಎಸ್‌ಐ ಮಣಿಕಂಠ ಹೇಳಿದರು.

ಪಟ್ಟಣದ ಸೊಪ್ಪಿನ ಕಾಳಮ್ಮ ಬಡಾವಣೆಯಲ್ಲಿ ಪೊಲೀಸ್ ಇಲಾಖೆಯಿಂದ, ನಡೆದ ಸೈಬರ್ ಅಪರಾಧ ಮತ್ತು ಕಳ್ಳತನ ನಿಯಂತ್ರಣದ ಕುರಿತು ಜಾಗೃತಿ ಸಭೆಯಲ್ಲಿ ಮಾಹಿತಿ ನೀಡಿದರು.

ಕಳ್ಳರು ಮನೆಯಲ್ಲಿ ಮಾಲೀಕರು ಇಲ್ಲದ ಸಮಯ ಖಚಿತ ಪಡಿಸಿಕೊಂಡು ಕಳ್ಳತನ ಮಾಡಲು ಮುಂದಾಗುತ್ತಾರೆ. ಬಹುದಿನಗಳ ಕಾಲ ಪರ ಊರುಗಳಿಗೆ ತೆರಳುವ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಬೇಕು. ಬೆಲೆ ಬಾಳುವ ಆಭರಣಗಳನ್ನು ಧರಿಸಿಕೊಂಡು ತೆರಳು ವೇಳೆ ಜಾಗೃತಿ ವಹಿಸುವುದು ಮುಖ್ಯ. ಅಪರಿಚಿತ ವ್ಯಕ್ತಿಗಳು ಕಂಡು ಬಂದರೇ ಕೂಡಲೇ ಪೊಲೀಸ್ ಸಹಾಯ ಸಂಖ್ಯೆ 112ಗೆ ಕರೆ ಮಾಡಿ. ಬಟ್ಟೆ ಹಾಗೂ ಇತರೆ ವಸ್ತಗಳನ್ನು ಮಾರಾಟ ಮಾಡಲು, ಬರುವವರಿಂದ ಜಾಗೃತರಾಗಿರಿ. ಮನೆಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅಪರಾಧಗಳನ್ನು ತಡೆಯಬಹುದು. ಯಾವುದೇ ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೆ, ತಕ್ಷಣ ಪೊಲೀಸರು ತಮ್ಮ ಸಹಾಯಕ್ಕೆ ಆಗಮಿಸುತ್ತಾರೆ. ವೇಗವಾಗಿ ಬೈಕ್ ಓಡಿಸುವುದು, ಅಸಭ್ಯವಾಗಿ ವರ್ತಿಸುವವರು ಕಂಡು ಬಂದರೆ ಮಾಹಿತಿ ನೀಡಬೇಕು, ಅಪ್ರಾಪ್ತ ಮಕ್ಕಳಿಗೆ ಪಾಲಕರು ಬೈಕ್ ಓಡಿಸಲು ಕೊಡಬೇಡಿ. ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವ ಮೂಲಕ ರಸ್ತೆಯ ನಿಯಮಗಳನ್ನು ಪಾಲಿಸಿ ಎಂದರು.

ಅಪರಾಧ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಪೋಲಿಸ್ ಇಲಾಖೆ ಸಿದ್ಧವಿದ್ದು, ಜನರೂ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು, ಎಲ್ಲರೂ ತಮ್ಮ ತಮ್ಮ ಮನೆಯ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡರೆ, ಯಾವುದೇ ಅಪರಾಧ ಕೃತ್ಯಗಳು ಜರುಗಿದರೆ ಪತ್ತೆ ಹಚ್ಚಲು ನೆರವಾಗುತ್ತದೆ. ಈ ಬಗ್ಗೆ ಬಡಾವಣೆಯ ಜನರು ಯೋಚಿಸಬೇಕು ಎಂದು ಹೇಳಿದರು.

ಬಡಾವಣೆಯಲ್ಲಿ ಕರ್ಕಶ ಧ್ವನಿ ಮಾಡಿಕೊಂಡು ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುವ ಮತ್ತು ವೀಲಿಂಗ್ ಮಾಡುವದು ಕಂಡುಬಂದಲ್ಲಿ ಕೂಡಲೇ ಠಾಣೆಗೆ ಮಾಹಿತಿ ನೀಡಿದರೆ, ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ಗುರುಬಸವರಾಜ, ಹಾಲೇಶ್, ಕಲಂದರ್, ವಿರೂಪಾಕ್ಷ ಸ್ವಾಮಿ, ಮಲ್ಲಿಕಾರ್ಜುನ, ಕೊಟ್ರೇಶ್, ದೇವಕ್ಕ, ಲಕ್ಷ್ಮೀ ಹಾಗೂ ಬಡಾವಣೆ ನಿವಾಸಿಗಳು ಹಾಗೂ ಇತರರು ಭಾಗವಹಿಸಿದ್ದರು.