ಶ್ರೀಶಂಭು ಸೇವಾ ಟ್ರಸ್ಟ್‌ನಿಂದ ಪಿಕಪ್ ನಾಲೆ ಅಭಿವೃದ್ಧಿ

| Published : Mar 11 2025, 12:46 AM IST

ಶ್ರೀಶಂಭು ಸೇವಾ ಟ್ರಸ್ಟ್‌ನಿಂದ ಪಿಕಪ್ ನಾಲೆ ಅಭಿವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಂಡ್ಯ ಕೆರೆ ಮುಚ್ಚಿದ ನಂತರ ಕೆರೆ ವ್ಯಾಪ್ತಿಯ ನೂರಾರು ಎಕರೆ ಜಮೀನಿಗೆ ಬೇಸಿಗೆ ಹಂಗಾಮಿನಲ್ಲಿ ಬೆಳೆ ಬೆಳೆಯಲು ನೀರಿನ ಅಭಾವ ಎದುರಾಗಿತ್ತು. ಪಿಕಪ್ ನಾಲೆ ಹೂಳು ತುಂಬಿಕೊಂಡು ನೀರು ಹರಿಯದೆ ರೈತರು ಬೆಳೆ ಬೆಳೆಯಲು ಸಂಕಷ್ಟ ಎದುರಿಸುತ್ತಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಶ್ರೀ ಶಂಭು ಸೇವಾ ಟ್ರಸ್ಟ್ ನೆರವಿನೊಂದಿಗೆ ಪಿಕಪ್‌ನ ಹೂಳೆತ್ತುವ ಕೆಲಸ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀಶಂಭು ಸೇವಾ ಟ್ರಸ್ಟ್‌ನಿಂದ ಕೈಗೊಂಡಿರುವ ವಿ.ಸಿ.ನಾಲೆಯ ಚಿಕ್ಕಮಂಡ್ಯ ಕೆರೆ ಬಯಲು ಪ್ರದೇಶಕ್ಕೆ ನೀರು ಪೂರೈಸುವ ಪಿಕಪ್ ನಾಲೆ ಹೂಳೆತ್ತುವ ಕಾಮಗಾರಿಯನ್ನು ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು ಪರಿಶೀಲಿಸಿದರು.

ಚಿಕ್ಕಮಂಡ್ಯ ಬೈಪಾಸ್ ಸಮೀಪ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ರಾಮಚಂದ್ರ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಮಚಂದ್ರು, ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿದ್ದು, ಚಿಕ್ಕಮಂಡ್ಯ ಕೆರೆ ಬಯಲು ಪ್ರದೇಶದ ನೂರಾರು ಎಕರೆ ಜಮೀನಿಗೆ ಸರಾಗವಾಗಿ ನೀರು ಹರಿಯಲು ಅನುಕೂಲ ಮಾಡಿಕೊಡಲಾಗಿದೆ ಎಂದರು.

ಚಿಕ್ಕಮಂಡ್ಯ ಕೆರೆ ಮುಚ್ಚಿದ ನಂತರ ಕೆರೆ ವ್ಯಾಪ್ತಿಯ ನೂರಾರು ಎಕರೆ ಜಮೀನಿಗೆ ಬೇಸಿಗೆ ಹಂಗಾಮಿನಲ್ಲಿ ಬೆಳೆ ಬೆಳೆಯಲು ನೀರಿನ ಅಭಾವ ಎದುರಾಗಿತ್ತು. ಪಿಕಪ್ ನಾಲೆ ಹೂಳು ತುಂಬಿಕೊಂಡು ನೀರು ಹರಿಯದೆ ರೈತರು ಬೆಳೆ ಬೆಳೆಯಲು ಸಂಕಷ್ಟ ಎದುರಿಸುತ್ತಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಶ್ರೀ ಶಂಭು ಸೇವಾ ಟ್ರಸ್ಟ್ ನೆರವಿನೊಂದಿಗೆ ಪಿಕಪ್‌ನ ಹೂಳೆತ್ತುವ ಕೆಲಸ ಮಾಡಲಾಗಿದೆ. ಇನ್ನು ಮುಂದೆ ನೀರಿನ ಅಭಾವ ಎದುರಾಗದು ಎಂಬ ಆಶಯ ವ್ಯಕ್ತಪಡಿಸಿದರು.

ಚಿಕ್ಕಮಂಡ್ಯ ಕೆರೆ ಅಕ್ಕ-ಪಕ್ಕದ ಗ್ರಾಮಸ್ಥರ ನೀರಿನ ಸೆಲೆಯಾಗಿತ್ತು. ವರ್ಷವಿಡೀ ತುಂಬಿ ತುಳುಕುತ್ತಿತ್ತು. ಕೆರೆಯನ್ನು ಬಡಾವಣೆಯಾಗಿ ಪರಿವರ್ತಿಸಿದ ನಂತರ ನೀರಿನ ಅಭಾವ ಸೃಷ್ಟಿಯಾಗಿದೆ. ನಗರಕ್ಕೆ ಹೊಂದಿಕೊಂಡಂತಿರುವ ಜಮೀನುಗಳು ಈಗಾಗಲೇ ಬಡಾವಣೆಯಾಗಿ ಅಭಿವೃದ್ಧಿಯಾಗಿವೆ. ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದರು.

ಗ್ರಾಮದ ಮುಖಂಡ ಜಗದೀಶ್ ಮಾತನಾಡಿ, ಪಿಕಪ್ ನಾಲೆ ಹೂಳು ತುಂಬಿಕೊಂಡು ಕೆರೆ ವ್ಯಾಪ್ತಿಯ ಜಮೀನುಗಳಿಗೆ ನೀರಿನ ಅಭಾವ ಎದುರಾಗಿತ್ತು. ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗಿದ್ದು, ರೈತರು ಆತಂಕದ ಪರಿಸ್ಥಿತಿ ಎದುರಿಸಿದ್ದರು. ನೀರಾವರಿ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರು ರಾಮಚಂದ್ರು ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶ್ರೀ ಶಂಭು ಸೇವಾ ಟ್ರಸ್ಟ್ ಮೂಲಕ ಪಿಕಪ್ ಹೂಳೆತ್ತಿಸುವ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಗ್ರಾಪಂ ಸದಸ್ಯ ಬೋರೇಗೌಡ, ಮುಖಂಡರಾದ ಕೆಂಪೇಗೌಡ, ಭಾಸ್ಕರ್, ಸುರೇಶ್, ಸುನೀಲ್‌ಕುಮಾರ್, ಜಗದೀಶ್, ರವಿಕುಮಾರ್, ಶಿವಕುಮಾರ್, ಷಡಕ್ಷರಿ, ಅನಿಲ್‌ಕುಮಾರ್, ರಾಜಪ್ಪ, ಶಶಿಕುಮಾರ್, ಹರೀಶ್, ಪ್ರತಾಪ್, ಶಿವಶಂಕರ್ ಇತರರಿದ್ದರು.