ಯೋಜನೆಗಳು ಕೇವಲ ಕಾಗದದ ಮೇಲೆ ಉಳಿಯಬಾರದು: ವಿ. ಸೋಮಣ್ಣ

| Published : Mar 26 2024, 01:00 AM IST

ಸಾರಾಂಶ

ಯಾವುದೇ ಯೋಜನೆಗಳು ಕಾಗದದ ಮೇಲೆ ಉಳಿಯಬಾರದು. ಸಕಾಲದಲ್ಲಿ ಕಾರ್ಯಗತಗೊಳ್ಳಬೇಕು ಎಂಬುದು ನನ್ನ ಆಶಯ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರು

ಯಾವುದೇ ಯೋಜನೆಗಳು ಕಾಗದದ ಮೇಲೆ ಉಳಿಯಬಾರದು. ಸಕಾಲದಲ್ಲಿ ಕಾರ್ಯಗತಗೊಳ್ಳಬೇಕು ಎಂಬುದು ನನ್ನ ಆಶಯ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅಭಿಪ್ರಾಯಪಟ್ಟರು.

ಸೋಮವಾರದ ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ಅನೇಕ ಯೋಜನೆಗಳು ಹಲವಾರು ವರ್ಷಗಳಿಂದ ಪೂರ್ಣಗೊಳ್ಳದೆ ಉಳಿದಿವೆ. ತುಮಕೂರು- ರಾಯರ್ದು, ತುಮಕೂರು-ದಾವಣಗೆರೆ ರೈಲು ಮಾರ್ಗಇನ್ನೂ ಪೂರ್ಣಗೊಂಡಿಲ್ಲ, ಇಂತಹ ಯೋಜನೆಗಳಿಗೆ ವೇಗ ನೀಡಿ ಮುಗಿಸುವುದು ನನ್ನಆದ್ಯತೆ.

ಇದಲ್ಲದೆ, ಜಿಲ್ಲೆಯ ಹೆದ್ದಾರಿಗಳ ಅಭಿವೃದ್ಧಿ, ಗ್ರಾಮಪಂಚಾಯ್ತಿ, ಹೋಬಳಿ ಕೇಂದ್ರಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಉನ್ನತ ದರ್ಜೆಗೇರಿಸುವುದು, ನೀರಾವರಿ ಯೋಜನೆಗಳಿಗೆ ಒತ್ತು ನೀಡುವುದು, ಆಸ್ಪತ್ರೆ, ಶಾಲಾ ಕಾಲೇಜುಗಳ ಸ್ಥಾಪನೆ, ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುವುದು ಮುಂತಾದ ಮೂಲಭೂತ ಬೇಡಿಕೆಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ ಎಂದರು.ಲೋಕಸಭಾ ಚುನಾವಣೆ ಸ್ಪರ್ಧೆ ನನಗೆ ಅನಿರೀಕ್ಷಿತವಾಗಿ ಸಿಕ್ಕ ಅವಕಾಶ, ಪಕ್ಷ ಈ ಅವಕಾಶ ನೀಡಿದೆ. ಅನೇಕರು ಅನೇಕ ರೀತಿಯಲ್ಲಿ ಮಾತನಾಡಬಹುದು, ೪೫ ವರ್ಷಗಳಿಂದ ರಾಜಕೀಯ ಜೀವನದಲ್ಲಿ ನಾನು ಮಾಡಿಕೊಂಡು ಬಂದ ಕಾಯಕ, ಸಂಸ್ಕಾರ ಜೀವನ ತೆರೆದ ಕನ್ನಡಿ ಇದ್ದಂತೆ. ತುಮಕೂರು ಜಿಲ್ಲೆಯ ವಾತಾವರಣ ಅಸ್ತಿರಗೊಳಿಸಲು ನಾನು ಬಂದಿಲ್ಲ, ಅಸ್ತಿರಗೊಂಡಿರುವುದನ್ನು ಸುಸ್ತಿರಗೊಳಿಸಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡುವ ಆಶಯದೊಂದಿಗೆ ಬಂದಿದ್ದೇನೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.

ಎನ್‌ಡಿಎ ಕೂಟದ ನರೇಂದ್ರ ಮೋದಿ ಹಾಗೂ ‘ಇಂಡಿಯಾ’ಒಕ್ಕೂಟದಿಂದ ರಾಹುಲ್‌ ಗಾಂಧಿಯೋ ಇನ್ಯಾರೂ ದೇಶದ ಆಡಳಿತ ಚುಕ್ಕಾಣಿ ಹಿಡಿಯಬೇಕು ಎನ್ನುವ ವಿಚಾರದಲ್ಲಿ ಇವರಲ್ಲಿ ಯಾರು ಸಮರ್ಥರು ಎಂದು ನಿರ್ಧರಿಸುವ ಚುನಾವಣೆ ಇದಾಗಿದೆ. ಆದರೆ ಜಗತ್ತು ಮೆಚ್ಚಿನ ನಾಯಕ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ, ಈ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನನ್ನುಆಯ್ಕೆ ಮಾಡಿ ಮೋದಿಯವರ ಕೈ ಬಲಪಡಿಸಬೇಕುಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.

ತುಮಕೂರು ಜಿಲ್ಲೆಗೂ ನನಗೂ 35 ವರ್ಷಗಳ ಅವಿನಾಭಾವ ಸಂಬಂಧವಿದೆ. ನನ್ನಆರಾಧ್ಯ ದೈವ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಸೇವೆ ಮಾಡಿಕೊಂಡು ಬಂದಿದ್ದೇನೆ. ಆದಿಚುಂಚನಗಿರಿ ಸಂಸ್ಥಾನದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಪರಮ ಭಕ್ತ ನಾನು. ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿರುವ ನನಗೆ ಜಿಲ್ಲೆಯ ಸಮಗ್ರ ಪರಿಚಯವಿದೆ, ಇಲ್ಲಿನ ಸಮಸ್ಯೆಗಳು, ಅಗತ್ಯತೆಗಳ ಬಗ್ಗೆಯೂ ಗೊತ್ತಿದೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದಅದ್ಯಕ್ಷ ಚಿ.ನಿ.ಪುರುಷೋತ್ತಮ್‌ ಅವರು ವಿ.ಸೋಮಣ್ಣ ಅವರಿಗೆ ಸಂವಿಧಾನ ಕೃತಿ ನೀಡಿ ಸ್ವಾಗತಿಸಿದರು, ಪತ್ರಕರ್ತರ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಸೋಮಣ್ಣರ ಗಮನಕ್ಕೆ ತಂದ ಅವರು, ಸಂಸದರಾಗಿ ಆಯ್ಕೆಯಾದರೆ ಈ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಐಎಫ್.ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಶಾಸಕ ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಬಿಜೆಪಿ ಮುಖಂಡರಾದ ಎಸ್.ಪಿ.ಚಿದಾನಂದ್, ಅನಿಲ್‌ಕುಮಾರ್, ಎಸ್.ಶಿವಪ್ರಸಾದ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ರಾಷ್ಟ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್,ರಾಷ್ಟ್ರೀಯ ಮಂಡಳಿ ಸದಸ್ಯ ಶಾಂತರಾಜು ಮೊದಲಾದವರು ಭಾಗವಹಿಸಿದ್ದರು.