ಮದ್ದೂರು:
ಮಂಡ್ಯ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರವಾಸ ಕಾರ್ಯಕ್ರಮ ಮೊಟಕು ಗೊಳಸಿ ವಾಪಸ್ಸಾದ ಘಟನೆ ಬುಧವಾರ ಜಿಲ್ಲೆಯ ಗಡಿಭಾಗ ನಿಡಘಟ್ಟ ಬಳಿ ನಡೆದಿದೆ.ಪ್ರಮೋದ್ ಮುತಾಲಿಕ್ ಅವರನ್ನು ಮಂಡ್ಯ ಪ್ರವೇಶ ತಡೆಗಟ್ಟಿ ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಬೆಳಗಿನಿಂದಲೇ ಕಾಯುತ್ತಿದ್ದರು. ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುತಾಲಿಕ್ ಹಾಗೂ ಅವರ ಬೆಂಬಲಿಗರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ವಿಷಯ ತಿಳಿದು ಮಧ್ಯಾಹ್ನ 2:30 ಸುಮಾರಿಗೆ ಪ್ರಮೋದ್ ಮುತಾಲಿಕ್ ಅವರು ಮಂಡ್ಯ ಜಿಲ್ಲಾ ಪ್ರವಾಸ ರದ್ದು ಮಾಡಿ ವಾಪಸ್ ಬೆಂಗಳೂರಿಗೆ ಹಿಂದಿರುಗಿದರು.ಜಿಲ್ಲೆಗೆ ಪ್ರವೇಶ ನಿರ್ಬಂಧ ವಿರುದ್ಧ ಕಾನೂನು ಹೋರಾಟ: ಪ್ರಮೋದ್ ಮುತಾಲಿಕ್
ಮದ್ದೂರು: ಮಂಡ್ಯ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಜಿಲ್ಲಾಧಿಕಾರಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮತಾಲಿಕ್ ಬುಧವಾರ ಘೋಷಣೆ ಮಾಡಿದರು.ಚನ್ನಪಟ್ಟಣ ತಾಲೂಕಿನ ಎಲೆತೋಟದಹಳ್ಳಿಯ ಸಂಘಟನೆಯ ಮುಖಂಡ ರವೀಶ್ ಮನೆಗೆ ಭೇಟಿ ನೀಡಿದ ವೇಳೆ ಮಂಡ್ಯ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಜಿಲ್ಲಾಧಿಕಾರಿ ಕ್ರಮದ ವಿರುದ್ಧ ಅವರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ಮಂಡ್ಯದ ಕೆರೆಗೂಡು ಗ್ರಾಮಕ್ಕೆ ತಮ್ಮ ಪ್ರವಾಸ ನಿಗದಿಯಾದ ನಂತರವಷ್ಟೇ ಬುಧವಾರ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಸ್ತುತ ನನ್ನ ಮೇಲೆ ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದ 37 ಪ್ರಕರಣಗಳು ಈಗಾಗಲೇ ನ್ಯಾಯಾಲಯದಲ್ಲಿ ಖುಲಾಸೆಯಾಗಿದೆ. ಹೀಗಾಗಿ ನಾನು ಡಿಸಿ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಗಳು ಒಂದು ರಾಜಕೀಯ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ನಮ್ಮನ್ನು ಜಿಲ್ಲೆಯಿಂದ ತಡೆಗಟ್ಟು ಉದ್ದೇಶವೇನು ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಹಿಂದುಗಳ ಭಾವನೆಗಳ ಜೊತೆ ಆಟವಾಡುತ್ತಿದೆ. ಇವರೇ ಶಾಂತಿ , ಸೌಹಾರ್ದ ಕದಡಲು ಕಾರಣರಾಗುತ್ತಿದ್ದಾರೆ ಎಂದು ಪ್ರಮೋದ್ ಮತಾಲಿಕ್ ಗಂಭೀರ ಆರೋಪ ಮಾಡಿದರು.