ಸಾರಾಂಶ
ಕೆಲಸದ ಜೊತೆ ನಿಮ್ಮ ಆರೋಗ್ಯದ ಬಗ್ಗೆಯೂ ಜಾಗೃತಿ ಇರಲಿ. ಮೈಸೂರು ಸುಂದರ ನಗರಿಯಾಗಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ಕಾಳಜಿಯಿಂದ ಆರೋಗ್ಯ ಅಭಿಯಾನವನ್ನು ಪಾಲಿಕೆಯ ಎಲ್ಲಾ ವಾರ್ಡಿನಲ್ಲೂ ಹಮ್ಮಿಕೊಳ್ಳಲಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹಾರ್ಟ್ ಸಂಸ್ಥೆಯು ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್, ನಾರಾಯಣ ಹೃದಯಾಲಯ ಹಾಗೂ ಎ.ಎಸ್.ಜಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಪಾಲಿಕೆ ವಲಯ 4ರ ವ್ಯಾಪ್ತಿಯ ಶ್ರೀ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಪೌರಕಾರ್ಮಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು.ಈ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದ ಹಾರ್ಟ್ ಸಂಸ್ಥೆಯ ಸಂಸ್ಥಾಪಕ ಶಿವಕುಮಾರ ಮಾತನಾಡಿ, ಕೆಲಸದ ಜೊತೆ ನಿಮ್ಮ ಆರೋಗ್ಯದ ಬಗ್ಗೆಯೂ ಜಾಗೃತಿ ಇರಲಿ. ಮೈಸೂರು ಸುಂದರ ನಗರಿಯಾಗಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ಕಾಳಜಿಯಿಂದ ಆರೋಗ್ಯ ಅಭಿಯಾನವನ್ನು ಪಾಲಿಕೆಯ ಎಲ್ಲಾ ವಾರ್ಡಿನಲ್ಲೂ ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮ ದಿನ ನಿತ್ಯದ ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದನ್ನೇ ಮರೆತು ಬಿಡುತ್ತೇವೆ. ವಿಶೇಷವಾಗಿ ನಮ್ಮ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗಿದೆ ಎಂದು ಅವರು ಸಲಹೆ ನೀಡಿದರು.ಈ ಶಿಬಿರದಲ್ಲಿ 133 ಪೌರಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಇವರಲ್ಲಿ ಹೊಸದಾಗಿ 3 ಜನರಿಗೆ ರಕ್ತದೊತ್ತಡದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, 11 ಜನರಿಗೆ ಮಧುಮೇಹ ಅಂಶ ಕಾಣಿಸಿಕೊಂಡಿದ್ದು, ಹೆಚ್ಚಿನ ಪರೀಕ್ಷೆಗಳಿಗೆ ಶಿಪಾರಸು ಮಾಡಲಾಯಿತು. 18 ಜನರಿಗೆ ಕಣ್ಣಿನ ಸಮಸ್ಯೆ, ಇಬ್ಬರಿಗೆ ಇಸಿಜಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಖಾತರಿ ಪಡಿಸಲು ಹೆಚ್ಚಿನ ಪರೀಕ್ಷೆಗಳಿಗೆ ಶಿಪಾರಸು ಮಾಡಲಾಯಿತು.
ಹಾರ್ಟ್ ಸಂಸ್ಥೆಯ ಕಾರ್ಯದರ್ಶಿ ರಮೇಶ್, ವೈಧ್ಯಾಧಿಕಾರಿ ಡಾ. ನಾರಾಯಣ್ ಹೆಗ್ಡೆ, ಪಾಲಿಕೆ ವಲಯ 4ರ ಸಿಬ್ಬಂದಿ ಹಾಗೂ ಆಸ್ಪತ್ರೆಗಳ ಸಿಬ್ಬಂದಿ ಇದ್ದರು.