ಸಾರಾಂಶ
ತುಳುನಾಡ ಅಭಿಮಾನಿ ಸದಸ್ಯರು ತುಳುನಾಡ ಧ್ವಜ ಅರಳಿಸುವ ಮೂಲಕ ಬಹುವರ್ಷಗಳ ಬೇಡಿಕೆ ಕುರಿತಾಗಿ ಜನ ಜಾಗೃತಿ ಮೂಡಿಸಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಲಿಪಿ ಹೊಂದಿರುವ ಪ್ರಾಚೀನ ಇತಿಹಾಸವಿರುವ, ಜಾನಪದ ಮತ್ತು ಶಿಷ್ಟ ಸಾಹಿತ್ಯ ಸಮೃದ್ಧವಾಗಿರುವ ತುಳು ಭಾಷೆಯನ್ನು ಕೇಂದ್ರ ಸರ್ಕಾರವು 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಹಾಗೂ ರಾಜ್ಯ ಸರ್ಕಾರವು ರಾಜ್ಯದ 2 ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂದು ತುಳುನಾಡ ಭಕ್ತರು ನೇಪಾಳದಲ್ಲಿರುವ ಮುಕ್ತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ತುಳುನಾಡ ದ್ವಜವನ್ನು ದೇವಾಲಯದ ಪ್ರಾಂಗಣದಲ್ಲಿ ಪ್ರದರ್ಶಿಸಿದರು.ಉತ್ತರ ಭಾರತದ ಹಲವು ಪುಣ್ಯ ಕ್ಷೇತ್ರಗಳು ಸೇರಿದಂತೆ ನೇಪಾಳದಲ್ಲಿನ ಪಶುಪತಿನಾಥ್ ಹಾಗೂ ಮುಕ್ತಿನಾಥ್ ದೇವಸ್ಥಾನಗಳ ದರ್ಶನಕ್ಕಾಗಿ ತುಳುನಾಡಿನ ಭಕ್ತರ ತಂಡವು ಬಂಟ್ವಾಳ ತಾಲೂಕಿನ ನರಿಕೊಂಬುವಿನ ಜಯಶ್ರೀ ಮತ್ತು ಜಯಕುಮಾರ್ ನೇತೃತ್ವದಲ್ಲಿ ತೆರಳಿದೆ. ಈ ಸಂದರ್ಭದಲ್ಲಿ ತುಳುನಾಡ ಅಭಿಮಾನಿ ಸದಸ್ಯರು ತುಳುನಾಡ ಧ್ವಜ ಅರಳಿಸುವ ಮೂಲಕ ಬಹುವರ್ಷಗಳ ಬೇಡಿಕೆ ಕುರಿತಾಗಿ ಜನ ಜಾಗೃತಿ ಮೂಡಿಸಿದರು.