ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರು ತಮ್ಮ ಭೂಮಿಗೆ ಜೈವಿಕ ಗೊಬ್ಬರ ಬಳಸುವ ಮೂಲಕ ಭತ್ತದಲ್ಲಿ ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಸಲಹೆ ನೀಡಿದರು.ಪಟ್ಟಣದ ಡಾ.ಬಾಬು ಜಗಜೀವನ್ರಾಂ ಭವನದಲ್ಲಿ ಕೃಷಿ ಇಲಾಖೆಯಿಂದ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರಿಗೆ ಭತ್ತದ ಬೆಳೆ ಉತ್ಪಾದಕತೆ ಕುರಿತು ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತೆ ಕಳೆದುಕೊಂಡಿದೆ. ಇದರ ಪರಿಣಾಮ ಬೆಳೆಗಳಲ್ಲಿ ಹೆಚ್ಚು ಇಳುವರಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರೈತರು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ ಜೈವಿಕ, ಜೀವಾಣು ಗೊಬ್ಬರ ಬಳಕೆ ಮಾಡುವ ಮೂಲಕ ಭೂಮಿ ಫಲವತ್ತತೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.ಭೂಮಿ ಫಲವತ್ತತೆ ಕಳೆದುಕೊಂಡಿರುವುದರಿಂದ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ತಾಲೂಕಿನಲ್ಲಿ 2011ರಲ್ಲಿ ಪ್ರತಿ ಎಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ 6228 ಕೆಜಿ ಉತ್ಪಾದನೆಯಾಗುತ್ತಿತ್ತು. ಇದೀಗ ಭೂಮಿ ಸತ್ವ ಕಳೆದುಕೊಂಡಿರುವುದಿಂದಾಗಿ 2022ರಲ್ಲಿ ಪ್ರತಿ ಎಕ್ಟೇರ್ಗೆ 4515 ಕೆಜಿಗೆ ಕುಸಿತಕಂಡಿದೆ. ಸಣ್ಣ ಭತ್ತ, ಖಾಸಗಿ ತಳಿಗಳ ಬಳಕೆ, ಸಾವಯವ ಅಂಶದ ಕೊರತೆ, ಕೊಟ್ಟಿಗೆ ಗೊಬ್ಬರ ಬಳಕೆ ಕಡಿಮೆಯಾಗಿರುವುದು ಭತ್ತದ ಇಳುವರಿ ಕಡಿಮೆಗೆ ಕಾರಣವಾಗಿದೆ ಎಂದರು.
ರೈತರು ಅತಿಯಾಗಿ ಭೂಮಿಗೆ ಯೂರಿಯಾ ರಸಗೊಬ್ಬರ ಬಳಕೆ ಮಾಡುತ್ತಿರುವುದು ಮಣ್ಣಿನ ಆರೋಗ್ಯದ ಮೇಲೆ ಸಾಕಷ್ಟು ದುಶ್ಪರಿಣಾಮ ಬೀರುತ್ತಿದೆ. ಹಾಗಾಗಿ ರೈತರು ಕಡ್ಡಾಯವಾಗಿ ಭೂಮಿಗೆ ಸಾವಯವ, ಕೊಟ್ಟಿಗೆ ಗೊಬ್ಬರ ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂದರು.ಕೊಟ್ಟಿಗೆ ಗೊಬ್ಬರದ ಜತೆಗೆ ಜೈವಿಕ ಗೊಬ್ಬರಗಳಾದ ಅಜಟೋಬ್ಯಾಕ್ಟರ, ಅಜೋಸ್ಟಿರಿಲಂ, ರೈಸೋಬಿಯಂ, ಸೀಟಿಪಾಚಿ, ಅನಾಟಿನಾ ಅಜೋಲ ಬಳಕೆ ಮಾಡುವುದರಿಂದ ಶೇ.18ರಿಂದ 20ರಷ್ಟು ಉತ್ಪಾದನೆ ಹೆಚ್ಚಿಸಬಹುದು. ಈ ಬಗ್ಗೆ ಪರಿಕರ ಮಾರಾಟಗಾರರು ಸಹ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಉಪ ನಿರ್ದೇಶಕಿ ಎಚ್.ಎನ್.ಮಮತಾ ಮಾತನಾಡಿ, ರೈತರು ಜಮೀನುಗಳಿಗೆ ಕಡ್ಡಾಯವಾಗಿ ಜೈವಿಕ ಗೊಬ್ಬರ ಬಳಕೆ ಮಾಡಬೇಕು. ಜೈವಿಕ ಗೊಬ್ಬರಗಳು ವಿಸಿಫಾರಂ, ಸಹಕಾರ ಸಂಘಗಳು ಹಾಗೂ ಖಾಸಗಿ ಮಾರಾಟಗಾರರ ಬಳಿ ದೊರೆಯುವುದರಿಂದ ರೈತರು ಅವರಿ ಖರೀದಿಸಿ ಭೂಮಿಗೆ ಬಳಕೆ ಮಾಡಬೇಕು ಎಂದರು.ಈ ವೇಳೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್, ತಾಂತ್ರಿಕ ಅಧಿಕಾರಿ ಎಚ್.ಸಿ.ಮಂಜು, ಕೃಷಿ ಅಧಿಕಾರಿಗಳಾದ ಗೌರವ್ವ ಅಗಸಿನಾಳ, ಯೋಗೇಶ್ ಸೇರಿದಂತೆ ತಾಲೂಕಿನ ಪರಿಕರ ಮಾರಾಟಗಾರರು ಹಾಜರಿದ್ದರು.