ರಾಮನಗರ: ನೀರನ್ನು ಉತ್ಪಾದಿಸಲು ಸಾಧ್ಯವಿಲ್ಲ. ಮಳೆ ನೀರನ್ನು ಇಂಗಿಸಿ ಕೊಳವೆ ಬಾವಿಯ ನೀರಿನ ಮಟ್ಟ ಹೆಚ್ಚಿಸಿರುವ ರೈತರು ಉತ್ತಮ ಬದುಕು ರೂಪಿಸಿಕೊಂಡಿರುವ ನಿದರ್ಶನಗಳಿವೆ. ಆದ್ದರಿಂದ ರೈತರೆಲ್ಲರು ಕೊಳವೆ ಬಾವಿಗೆ ಜಲಮರುಪೂರಣಕ್ಕೆ ಒತ್ತು ಕೊಡಬೇಕು ಎಂದು ಅಂತರ್ಜಲ ಹಾಗೂ ಮಳೆ ಕೊಯ್ಲು ತಜ್ಞ ಡಾ.ಎನ್.ಜೆ.ದೇವರಾಜ ರೆಡ್ಡಿ ಹೇಳಿದರು.

ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ರೈತ ಎ.ಬಿ.ಗಂಗಾಧರಗೌಡರ ಜಮೀನಿನಲ್ಲಿ ಕೊಳವೆ ಬಾವಿಗೆ ಜಲಮರುಪೂರಣಕ್ಕೆ ಚಾಲನೆ ನೀಡಿದ ಅವರು, ಕೊಳವೆ ಬಾವಿಗಳಿಗೆ ಮತ್ತೆ ಜೀವ ತುಂಬಿಸುವುದೇ ಜಲ ಮರುಪೂರಣವಾಗಿದೆ. ಈಗಾಗಲೇ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮಾಡಿಸಿ ಲಕ್ಷಾಂತರ ರೈತರು ಯಶಸ್ವಿಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಹಣ ಕೊಟ್ಟರೂ ನೀರು ಸಿಗದಿರುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಎದುರಾಗಲಿದೆ. ಇಂತಹ ಸಂದರ್ಭದಲ್ಲಿ ಉಚಿತವಾಗಿ ಸಿಗುವ ‘ಮಳೆ ನೀರು’ ಸಂಗ್ರಹಿಸಿ ನೀರಿನ ಸಮಸ್ಯೆಯನ್ನು ತಪ್ಪಿಸಬಹುದು. ಹಾಗಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲರೂ ‘ಮಳೆ ನೀರು ಕೊಯ್ಲು’ ತಾಂತ್ರಿಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಬೇಸಿಗೆಯ ಕಾಲದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತದೆ. ಈ ಸಮಸ್ಯೆಗೆ ಮಳೆ ನೀರಿನ ಸಂಗ್ರಹಕ್ಕಾಗಿ ಜಲಾಶ್ರಯಗಳ ನಿರ್ಮಾಣ ಮತ್ತು ಕೊಳವೆ ಬಾವಿಗಳ ಮರು ಪೂರಣ ಉತ್ತಮ ಪರಿಹಾರವಾಗಿದೆ. ಮರುಪೂರಣವಾದ ಕೊಳವೆ ಬಾವಿಗಳು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲೂ ನೀರು ಪೂರೈಸುತ್ತವೆ ಎಂದು ಹೇಳಿದರು.

ರೈತ ಎ.ಬಿ.ಗಂಗಾಧರ ಗೌಡ ಮಾತನಾಡಿ, ಇಂದು ಪ್ರತಿಯೊಬ್ಬ ರೈತರು ಮಳೆ ನೀರು ಸಂಗ್ರಹಣೆ, ಇಂಗುಗಂಡಿ ಮೂಲಕ ಮಳೆ ನೀರು ಸಂಗ್ರಹಿಸಿ ಅಂತರ್ಜಲಮಟ್ಟ ಹೆಚ್ಚಿಸುವ ತಾಂತ್ರಿಕತೆಯ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.


ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಮಳೆ ಬಿದ್ದರೂ ಅದೆಲ್ಲ ಹರಿದು ಸಮುದ್ರ ಸೇರುತ್ತಿದೆ. ಬಯಲುಸೀಮೆಯ ಜನರಿಗಷ್ಟೇ ಮಳೆ ನೀರು ಕೊಯ್ಲು ಎಂದು ಬಿಂಬಿಸಲಾಗುತ್ತಿತ್ತು. ಆದರೆ ಇಂದು ಕರಾವಳಿ ಪ್ರದೇಶ ಹಾಗೂ ಮಲೆನಾಡ ಪ್ರದೇಶಕ್ಕೂ ಮಳೆ ನೀರು ಕೊಯ್ಲು ಮಾಡುವುದು ಅತ್ಯವಶ್ಯಕ ಎಂದು ಹೇಳಿದರು.

ನೀರಿನ ಕೊರತೆ ವಿರುದ್ಧ ಹೋರಾಟ ನಡೆಸಲು ನೀರಿನ ಸಂರಕ್ಷಣೆ ಈ ಹೊತ್ತಿನ ಅಗತ್ಯ. ಜಲ ಸಂರಕ್ಷಣೆ ಮತ್ತು ನೀರಿನ ನಿರ್ವಹಣೆಯಲ್ಲಿ ಮಳೆ ನೀರು ಕೊಯ್ಲು ಅತ್ಯಂತ ಪರಿಣಾಮಕಾರಿ ಪದ್ಧತಿಯಾಗಿದೆ ಎಂದು ಗಂಗಾಧರ್ ಗೌಡ ತಿಳಿಸಿದರು.

4ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ತಾಲೂಕಿನ ಅರೇಹಳ್ಳಿಯಲ್ಲಿ ರೈತ ಗಂಗಾಧರ ಗೌಡರ ಜಮೀನಿನಲ್ಲಿ ಕೊಳವೆ ಬಾವಿ ಜಲಮರುಪೂರಣಕ್ಕೆ ಅಂತರ್ಜಲ ಹಾಗೂ ಮಳೆ ಕೊಯ್ಲು ತಜ್ಞ ಡಾ.ಎನ್.ಜೆ.ದೇವರಾಜರೆಡ್ಡಿ ಚಾಲನೆ ನೀಡಿದರು.