- 5 ಖರೀದಿ ಕೇಂದ್ರಗಳಲ್ಲೂ ಕೂಡ ಖರೀದಿ ಮುಂದುವರಿಕೆ
- ಮದ್ಯವರ್ತಿಗಳ ಹಾವಳಿ ಕಂಡು ಬರುತ್ತಿಲ್ಲ- ಜಿಲ್ಲಾಧಿಕಾರಿ ಮಾರ್ಗದರ್ಶನದಂತೆ ಖರೀದಿ
ಕನ್ನಡಪ್ರಭ ವಾರ್ತೆ, ಕಡೂರುಜಿಲ್ಲಾಡಳಿತದ ಮಾರ್ಗದರ್ಶನದಂತೆ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿವಾರಣೆ ಮಾಡುವ ಮೂಲಕ ಪಟ್ಟಣದ ರಾಗಿ ಖರೀದಿ ಕೇಂದ್ರಗಳಲ್ಲಿ ಖರೀದಿ ಮುಂದುವರಿಯುತ್ತಿದೆ.
ಬೆಂಬಲ ಬೆಲೆ ಯೋಜನೆಯಡಿ ಕಡೂರು, ಬೀರೂರು ಹಾಗೂ ಪಂಚನಹಳ್ಳಿ ಸೇರಿದಂತೆ 5 ಖರೀದಿ ಕೇಂದ್ರಗಳಲ್ಲೂ ಕೂಡ ಖರೀದಿ ಮುಂದುವರಿಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದ ಬೆಂಬಲ ಬೆಲೆ ಯೋಜನೆಯಲ್ಲಿ ಕ್ವಿಂಟಾಲಿಗೆ ₹4886 ನಿಗಧಿ ಪಡಿಸಿರುವ ಹಿನ್ನೆಲೆಯಲ್ಲಿ ಕಡೂರು ತಾಲೂಕು ಸೇರಿದಂತೆ ಪಕ್ಕದ ಅರಸೀಕೆರೆ, ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಗಡಿಭಾಗದ ರೈತರೂ ಸಹ ಕಡೂರು ತಾಲೂಕಿನ ಖರೀದಿ ಕೇಂದ್ರಗಳಲ್ಲಿ ರಾಗಿ ನೀಡಲು ಅವಕಾಶ ಕಲ್ಪಿಸಿದೆ.
ಈ ಹಿನ್ನೆಲೆಯಲ್ಲಿ ಕಡೂರು ಎಪಿಎಂಸಿ ಪ್ರಾಂಗಣದ ಎರಡು ಖರೀದಿ ಕೇಂದ್ರಗಳಲ್ಲೂ ಖರೀದಿ ಸುಗಮವಾಗಿ ನಡೆಯುತ್ತಿದೆ. ನೊಂದಣಿ ಪ್ರಕ್ರಿಯೆಯಂತೆ ಸೀನಿಯಾರಿಟಿ ಆಧರಿಸಿ 8 ದಿನಗಳ ಬಳಿಕ ರಾಗಿ ತರುವಂತೆ ರೈತರಿಗೆ ಕಾರ್ಡನ್ನು ನೀಡಲಾ ಗುತ್ತಿದೆ. ಲಿಸ್ಟ್ ಹಾಕಿದ ಬಳಿಕ ನೋಡಿ ನಿಗಧಿತ ದಿನಾಂಕದಂದು ರಾಗಿ ತರುವಂತೆ ರೈತರಿಗೆ ತಿಳಿಸಲಾಗುತ್ತಿದೆ.
ಖರೀದಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಕೈಗೊಂಡಿರುವ ಕ್ರಮದಿಂದ ಸದ್ಯಕ್ಕೆ ಮದ್ಯವರ್ತಿಗಳ ಹಾವಳಿ ಕಂಡು ಬರುತ್ತಿಲ್ಲ. ನೇರವಾಗಿ ರೈತರೆ ದಾಖಲೆ ನೀಡುವ ಮೂಲಕ ರಾಗಿ ನೀಡುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.ಜಿಲ್ಲಾಧಿಕಾರಿಗಳು ಸ್ವತಃ ಭೇಟಿ ಮಾಡಿ ನೀಡಿದ ಮಾರ್ಗದರ್ಶನದಂತೆ ಖರೀದಿ ನಡೆಯುತ್ತಿದೆ. ಪ್ರತಿ ದಿನ ಸುಮಾರು 30 ರಿಂದ 50 ಕ್ವಿಂಟಾಲ್ ರಾಗಿ ಖರೀದಿಸಲಾಗುತ್ತಿದೆ ಎಂದು ತಹಸೀಲ್ದಾರ್ ಪೂರ್ಣೀಮಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿ ನೀಡಿದರು.
2ನೇ ಖರೀದಿ ಕೇಂದ್ರದಲ್ಲಿ 1230 ರೈತರಿಂದ 29,250 ಕ್ನಿಂಟಾಲ್ ಖರೀದಿ ನಡೆದು 48996 ಚೀಲಗಳಾಗಿವೆ. ಈ ಹಿಂದೆ ಖರೀದಿಯಲ್ಲಿ ಕೆಲ ಸಮಸ್ಯೆಗಳು ಮತ್ತು ಅಕ್ರಮಗಳು ನಡೆದಿದ್ದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತ ಕಠಿಣ ಕ್ರಮದ ಮಾರ್ಗದರ್ಶನದಂತೆ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟಾರೆ ಈ ಭಾರಿ ರಾಗಿ ಖರೀದಿ ಸುಗಮವಾಗಲು ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಖರೀದಿಸುತ್ತಿದೆ.ರಾಗಿ ಖರೀದಿ ಫೆಬ್ರವರಿ 23 ರಂದು ಆರಂಭವಾಗಿದ್ದು, ನೋಂದಣಿ ಕಳೆದ 2025 ನವಂಬರ್ ನಿಂದ ಆರಂಭಗೊಂಡಿತ್ತು. 31 ಮಾರ್ಚ್ ವರೆಗೆ ಕಡೂರಿನ ಖರೀದಿ ಘಟಕ 1ರಲ್ಲಿ 1313 ರೈತರಿಂದ ಖರೀದಿ ನಡೆದಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನಿಗಧಿತ ದಿನದಂದು ವೈಯಕ್ತಿಕ ಸಮಸ್ಯೆಯಿಂದ ರೈತರು ರಾಗಿ ತರಲು ಸಾದ್ಯವಾಗದಿದ್ದರೆ ಕೇಂದ್ರದ ಸಿಬ್ಬಂದಿ ಹೇಳುವಂತೆ ಅಂತಹ ರೈತರ ರಾಗಿಯನ್ನು ತೊಂದರೆ ಆಗದಂತೆ ವಾರದ ಕೊನೆ ದಿನವಾದ ಶನಿವಾರ ಖರೀದಿಗೆ ಅವಕಾಶ ನೀಡಲಾಗುತ್ತಿದೆ ಎಂದು ರಾಗಿ ಖರೀದಿ ಕೇಂದ್ರ ಸಿಬ್ಬಂದಿ ತಿಳಿಸಿದ್ದಾರೆ.
5ಕೆಕೆಡಿಯು1ಕಡೂರು ಎಪಿಎಂಸಿ ರಾಗಿ ಖರೀದಿ ಕೇಂದ್ರಕ್ಕೆ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಭೇಟಿ ನೀಡಿ ಪರಿಶೀಲಿಸಿದರು.