ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಕಲ್ಪಿಸಿದ ಮೂಲ ಮೀಸಲಾತಿ ವ್ಯವಸ್ಥೆಯು ಅತ್ಯಂತ ಸಮರ್ಪಕವಾಗಿದೆ. ಆದರೆ ಪ್ರಸ್ತುತ ಜಾರಿಗೆ ತರಲು ಉದ್ದೇಶಿಸಿರುವ ಒಳ ಮೀಸಲಾತಿ ಪದ್ಧತಿಯಿಂದ ಭೋವಿ, ಕೊರಚ, ಕೊರಮ ಹಾಗೂ ಲಂಬಾಣಿ ಸಮುದಾಯಗಳಿಗೆ ಅನ್ಯಾಯವಾಗಲಿದೆ, ಎಂದು ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಸಂಜಯ್ ಗಾಂಧಿ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.ಒಳ ಮೀಸಲಾತಿಯು ಕೇವಲ ಒಂದು ವರ್ಗಕ್ಕೆ ಸೀಮಿತವಾಗುವ ಅಪಾಯವಿದೆ. ಇದು ಜಾರಿಯಾದರೆ ದಶಕಗಳಿಂದ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂಚೂಣಿಗೆ ಬರುತ್ತಿರುವ ಭೋವಿ ಸಮುದಾಯವು ಮತ್ತೆ ಸಾಮಾಜಿಕವಾಗಿ ಹಿನ್ನಡೆ ಅನುಭವಿಸಿದ್ದು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚುವ ನೀತಿಯು ಭೋವಿ, ಲಂಬಾಣಿ ಸೇರಿದಂತೆ ಅಸ್ಪೃಶ್ಯವಲ್ಲದ ಸಮುದಾಯಗಳಲ್ಲಿ ಆತಂಕ ಮೂಡಿಸಿದ್ದು ವರ್ಗೀಕರಣದಿಂದ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳು ಕೈತಪ್ಪಲಿವೆ. ಈ ಪದ್ಧತಿಯಿಂದ ಕೇವಲ ಶಿಕ್ಷಣ ಮತ್ತು ಉದ್ಯೋಗ ಮಾತ್ರವಲ್ಲದೆ, ಸಮುದಾಯದ ರಾಜಕೀಯ ಪ್ರಭಾವವನ್ನು ಕುಗ್ಗಿಸಲಿದೆ ಈ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ನಾವೆಲ್ಲರೂ ಒಗ್ಗಟ್ಟಿನಿಂದ ಈ ವ್ಯವಸ್ಥೆಯನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.ಮಾಜಿ ಜಿಪಂ ಸದಸ್ಯರಾದ ಬಿ.ವಿ. ಕೃಷ್ಣ ಮಾತನಾಡಿ, ಬಡತನವು ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಪ್ರತಿಭೆ ಇರುವ ವಿದ್ಯಾರ್ಥಿಗಳಿಗೆ ಸಮುದಾಯ ಬೆನ್ನೆಲುಬಾಗಿ ನಿಂತರೆ, ಅವರು ಮುಂದೆ ಸಮಾಜದ ಆಸ್ತಿಯಾಗಿ ಬೆಳೆಯುತ್ತಾರೆ. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಉನ್ನತ ಸ್ಥಾನಕ್ಕೆ ಏರಬೇಕು ಎಂದು ಸಲಹೆ ನೀಡಿದರು.

ಕಾಮಸಮುದ್ರ ಗ್ರಾಪಂ ಮಾಜಿ ಅಧ್ಯಕ್ಷ ಆದಿನಾರಾಯಣ ಕುಟ್ಟಿ ಮಾತನಾಡಿ, ನಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಸಮಾಜದ ಉನ್ನತಿಗಾಗಿ ಕೈಜೋಡಿಸಬೇಕಿದೆ. ನಾವೆಲ್ಲರೂ ಒಂದಾಗಿ ಶ್ರಮಿಸಿದರೆ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಬಹುದು. ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಹಿತಾಸಕ್ತಿ ಮುಖ್ಯ. ನಾವು ಸಂಘಟಿತರಾದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಮತ್ತು ಸಮಾಜದ ಧ್ವನಿಯನ್ನು ಬಲಪಡಿಸಲು ಸಾಧ್ಯ ಎಂದು ತಿಳಿಸಿದರು.

ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘ ಗೌರವಾಧ್ಯಕ್ಷರಾಗಿ ಕೃಷ್ಣಪ್ಪ ಗಾಜಗ, ಅಧ್ಯಕ್ಷರಾಗಿ ಕೆ.ಜಿ.ಮಂಜುನಾಥ್, ಉಪಾಧ್ಯಕ್ಷರಾಗಿ ರಾಮಕೃಷ್ಣಪ್ಪ,ವೆಂಕಟೇಶ್, ಚಲಪತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ, ಜಂಟಿ ಕಾರ್ಯದರ್ಶಿ ರಾಮಮೂರ್ತಿ, ವೆಂಕಟೇಶ್, ಕಾರ್ಯದರ್ಶಿ ಮುನಿರಾಮ್‌, ಸಹಕಾರ್ಯದರ್ಶಿ ಲೋಕೇಶ್, ಬಾಬು, ಸಂಘಟನಾ ಕಾರ್ಯದರ್ಶಿ ಪಿಳ್ಳಪ್ಪ, ಗೋವಿಂದಪ್ಪ, ಕಾಶಿ, ನಾರಾಯಣಸ್ವಾಮಿ, ಪ್ರಕಾಶ್, ಗೋವಿಂದಪ್ಪ, ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಸಿ.ವಿ. ಗೋಪಾಲ್ ಮಾಹಿತಿಯನ್ನು ನೀಡಿದರು.


ಈ ಕಾರ್ಯಕ್ರಮದಲ್ಲಿ ಶೇಷು, ಶ್ರೀಕೃಷ್ಣ, ಜಿಲ್ಲಾ ಭೋವಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಎಸ್ ನಾರಾಯಣ್, ಶ್ರೀಕೃಷ್ಣ, ಜೆಸಿಬಿ ನಾರಾಯಣಪ್ಪ, ಕಣಿಂಬೆಲೆ ಚಿನ್ನಪ್ಪ, ಎಂ ಜಿ ಗೋವಿಂದ, ಎಲ್ ಜಿ ಮುನಿರಾಜು, ಎಳನೀರು ವೆಂಕಟೇಶ್, ತೊಪ್ಪನಹಳ್ಳಿ ರಾಮಮೂರ್ತಿ, ಕರವೇ ಚಲಪತಿ, ಮೋಹನ್ ಬಾಬು, ವಿನೋದ್, ವಿಕ್ಕಿ, ಶಿಕ್ಷಕರ ಕಾಂತರಾಜ್ ಉಪಸ್ಥಿತರಿದ್ದರು.