ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಕನ್ನಡಪ್ರಭ ವಾರ್ತೆ ಯಲ್ಲಾಪುರ
ಯುವಜನಾಂಗ ದುಶ್ಚಟಗಳಿಗೆ ಬಲಿಯಾಗದಂತೆ ಮನೆ ಮತ್ತು ಶಾಲೆಗಳಲ್ಲಿ ಸರಿಯಾದ ಸಂಸ್ಕಾರ ನೀಡುವ ಅನಿವಾರ್ಯತೆಯಿದೆ. ಸಮಾಜದಲ್ಲಿ ಯುವಕರು ವ್ಯಸನಿಗಳಾಗುತ್ತಿದ್ದಾರೆ. ಅದನ್ನು ಗಮನಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.ಸೋಮವಾರ ಪಟ್ಟಣದ ವೆಂಕಟ್ರಮಣ ಮಠದ ಆವಾರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಳ್ಳಲಿರುವ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ಜಿಲ್ಲೆಯ ನಿರ್ದೇಶಕ ದಿನೇಶ ಎಂ ಮಾತನಾಡಿ, ಸಮಾಜದಲ್ಲಿಂದು ಯುವಜನತೆ ಅನೇಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಸರ್ಕಾರದಿಂದಲೂ ಅದನ್ನು ನಿಯಂತ್ರಣ ಮಾಡದಷ್ಟು ಬೆಳೆದಿದೆ. ಅದರ ನಿಯಂತ್ರಣ ಮಾಡಬೇಕಾದರೆ ಮಕ್ಕಳಿಗೆ ಜಾಗೃತಿ ಮೂಡಿಸುವಂತಾಗಬೇಕು. ನಾವು ಈವರೆಗೆ ೨೫೦೦ಕ್ಕಿಂತಲೂ ಹೆಚ್ಚಿನ ಶಾಲೆಗಳಿಗೆ ಹೋಗಿ ಜಾಗೃತಿ ಮೂಡಿಸಿದ್ದೇವೆ. ಕುಡುಕರನ್ನು ಮನಃಪರಿವರ್ತನೆ ಮಾಡಿಯೇ ಬಿಡಿಸಬೇಕು. ಆ ದೃಷ್ಟಿಯಿಂದ ಯಲ್ಲಾಪುರ ತಾಲೂಕಿನಲ್ಲಿ ಸೆ. ೧ರಿಂದ ೮ ರವರೆಗೆ ಈ ಶಿಬಿರ ನಡೆಯಲಿದೆ. ಈಗಾಗಲೇ ೨೨೧೨ ಶಿಬಿರ ನಡೆದಿವೆ. ೧,೩೦,೦೦೦ ಜನರನ್ನು ಮದ್ಯ ಮುಕ್ತರನ್ನಾಗಿಸಿದ್ದೇವೆ ಎಂದರು.ಜಿಲ್ಲಾ ಜನಜಾಗೃತಿ ಸಮಿತಿಯ ಅಧ್ಯಕ್ಷೆ ಗೌರಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಕಾಯಾಧ್ಯಕ್ಷರಾಗಿ ಆಯ್ಕೆಯಾದ ಮುರಳಿ ಹೆಗಡೆ ಮಾತನಾಡಿದರು.
ಪ್ರಮುಖರಾದ ಬಸವರಾಜ ನಡುಮನೆ, ಕುಮುದಾ ನಾಯ್ಕ, ಪ್ರಸಾದ ಹೆಗಡೆ, ಕೆ.ಎಸ್. ಭಟ್ಟ ಮತ್ತಿತರರಿದ್ದರು. ಯೋಜನಾಧಿಕಾರಿ ಸಂತೋಷ ಸಿ.ಎಸ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅನಿತಾ, ಜ್ಯೋತಿ, ರಾಜೀವಿ ಪ್ರಾರ್ಥಿಸಿದರು. ರಾಜೀವಿ ನಾಯ್ಕ ನಿರ್ವಹಿಸಿದರು. ಜಿಲ್ಲಾ ಸಮಿತಿ ಸದಸ್ಯ ಡಿ.ಎನ್. ಗಾಂವ್ಕರ ವಂದಿಸಿದರು.