ಕನ್ನಡಪ್ರಭ ವಾರ್ತೆ ಬೆಂಗಳೂರು

ಒಂದೇ ವೇದಿಕೆಯಲ್ಲಿ ರಿಯಲ್ ಎಸ್ಟೇಟ್ ಕಂಪನಿಗಳು, ಬ್ಯಾಂಕ್‌ಗಳು ಹಾಗೂ ಲೈಫ್‌ಸ್ಟೈಲ್‌ ಮಳಿಗೆಗಳಲ್ಲಿ ಶಾಪಿಂಗ್ ಅನುಭವ ಪಡೆಯಲು ‘ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌’ನಿಂದ ಆಯೋಜಿಸಿರುವ 3 ದಿನಗಳ ‘ಪ್ರಾಪರ್ಟಿ ಆ್ಯಂಡ್ ಲೈಫ್‌ಸ್ಟೈಲ್ ಎಕ್ಸ್‌ಪೋ-2026’ಕ್ಕೆ ಶುಕ್ರವಾರ ವಿದ್ಯುಕ್ತವಾಗಿ ಚಾಲನೆ ದೊರಕಿದೆ.

ನಗರದ ಮೈಸೂರು ರಸ್ತೆಯ ನಾಯಂಡಹಳ್ಳಿ ನೈಸ್ ರಸ್ತೆ ಜಂಕ್ಷನ್ ಬ‍ಳಿಯ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ನಡೆಯುತ್ತಿರುವ ಎಕ್ಸ್‌ಪೋ ಅನ್ನು ಖ್ಯಾತ ನಟ ನೀನಾಸಂ ಸತೀಶ್, ನಟಿ ಪ್ರಿಯಾಂಕ ಉಪೇಂದ್ರ ಹಾಗೂ ಕನ್ನಡಪ್ರಭ -ಏಷಿಯಾನೆಟ್‌ ಸುವರ್ಣ ನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕರಾದ ರವಿ ಹೆಗಡೆ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ನೀನಾಸಂ ಸತೀಶ್, ಫ್ಲ್ಯಾಟ್, ವಿಲ್ಲಾ, ನಿವೇಶನ, ಫಾರ್ಮ್ ಲ್ಯಾಂಡ್ ಖರೀದಿಸುವವರಿಗೆ ಒಂದೇ ಸ್ಥಳದಲ್ಲಿ ಅನೇಕ ರಿಯಲ್ ಎಸ್ಟೇಟ್ ಕಂಪನಿಗಳು, ಬ್ಯಾಂಕುಗಳು, ಫರ್ನೀಚರ್ ಕಂಪನಿ ಸೇರಿದಂತೆ ವಿವಿಧ ಮಾದರಿಯ ಮಳಿಗೆಗಳು ಇರುವುದರಿಂದ ನಿಶ್ಚಿಂತೆಯಿಂದ ಸುತ್ತಾಡಿ ನೋಡಬಹುದು. ಬೆಲೆಗಳನ್ನು ಹೋಲಿಕೆ ಮಾಡಿ ಖರೀದಿಸಬಹುದು ಎಂದರು.

ತಾವು ಅಭಿನಯಿಸಿದ ಅಯೋಗ್ಯ-2 ಸಿನಿಮಾ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಶೋಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.ಜನರ ಅಭಿಮಾನದಿಂದ ಸಂತೋಷವಾಗಿದೆ ಎಂದು ಸತೀಶ್ ಹೇಳಿದರು.


ಇತ್ತೀಚೆಗೆ ತೆರೆ ಕಂಡಿರುವ ಡಿಟೆಕ್ಟೀವ್ ತೀಕ್ಷ್ಣ ಸಿನಿಮಾ ನಿರ್ಮಿಸಿರುವ ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಸಾಕಷ್ಟು ಸ್ಟಾಲ್‌ಗಳಿವೆ. ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಆಯೋಜಿಸಿರುವುದರಿಂದ ಖರೀದಿದಾರರಿಗೆ ವಿಶ್ವಾಸಾರ್ಹತೆ ಹೆಚ್ಚು ಇರುತ್ತದೆ ಎಂದರು.

ಡಿಟೆಕ್ವೀವ್ ತೀಕ್ಷ್ಣ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಸಿನಿಮಾ ತಂತ್ರಜ್ಞರಿಗೆ ಮನೆ ಖರೀದಿಸಲು ಅನುಕೂಲವಾಗುವಂತೆ ವಸತಿ ಯೋಜನೆಗಳು ಬ್ಯಾಂಕ್ ಸಾಲ ಸೌಲಭ್ಯ ದೊರಕಿಸಿಕೊಡಲು ಸಂಬಂಧಪಟ್ಟ ಸಂಸ್ಥೆ ನೆರವಾಗಬೇಕು ಎಂದು ಹೇಳಿದರು.

ಕನ್ನಡಪ್ರಭ -ಏಷಿಯಾನೆಟ್‌ ಸುವರ್ಣ ನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕರಾದ ರವಿ ಹೆಗಡೆ ಮಾತನಾಡಿ, ಪ್ರಿಯಾಂಕ ಉಪೇಂದ್ರ ಅವರು ಸಿನಿಮಾ ತಂತ್ರಜ್ಞರಿಗೂ ಸೂರು ಇರಬೇಕು ಎನ್ನುವ ಕಳಕಳಿ ತೋರಿಸಿದ್ದಾರೆ. ಸಿನಿಮಾ ಪ್ರದರ್ಶನ, ಪ್ರಚಾರದ ನಡುವೆ ತಂತ್ರಜ್ಞರ ಕುರಿತು ಅವರ ಕಾಳಜಿ ಮೆಚ್ಚುವಂತಹದ್ದು. ಬಿಡಿಎ, ಡಿಎಸ್ ಮ್ಯಾಕ್ಸ್, ಎಸ್‌ಬಿಐ ಬ್ಯಾಂಕ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಈ ನಿಟ್ಟಿನಲ್ಲಿ ಸೂಕ್ತ ಸಲಹೆ, ಸೂಚನೆ ನೀಡಿ ತಂತ್ರಜ್ಞರ ಸೂರಿನ ಕನಸು ನನಸು ಮಾಡಬೇಕು ಎಂದರು.

ಕನ್ನಡ ಚಿತ್ರರಂಗ ಬಹಳ ದುರ್ಬಲವಾಗಿದೆ. ಸಿನಿಮಾಗಳು ಚಿತ್ರಮಂದಿರಗಳಲ್ಲಿ ಓಡುತ್ತಿಲ್ಲ ಎನ್ನುವ ಸಂದರ್ಭದಲ್ಲಿ ಹೊಸ ಉಸಿರಿನಂತೆ ಬಂದಿರುವ ಸತೀಶ್ ಮತ್ತು ಪ್ರಿಯಾಂಕ ಅವರ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಇದೇ ರೀತಿಯ ಇನ್ನಷ್ಟು ಚಿತ್ರಗಳು ಬರಲಿ ಎಂದು ರವಿ ಹೆಗಡೆ ಶುಭ ಹಾರೈಸಿದರು.

ಬಿಡಿಎ ಆಯುಕ್ತರ ವಿಶೇಷ ಕರ್ತವ್ಯಾಧಿಕಾರಿ ನಾಗರಾಜ್ ಪೂಜಾರ್ ಮಾತನಾಡಿ, ಬಿಡಿಎನಿಂದ ಕೈಗೆಟುಕುವ ದರದಲ್ಲಿ ಫ್ಲ್ಯಾಟ್, ವಿಲ್ಲಾಗಳ ಜೊತೆಗೆ ಪ್ರೀಮಿಯಂ ಫ್ಲ್ಯಾಟ್‌ಗಳು ಕೂಡ ಲಭ್ಯ ಇವೆ. ಜನರು ನಮ್ಮ ಪ್ರಾಪರ್ಟಿ ವಿಳಾಸಗಳಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.

ಎಸ್‌ಬಿಐ ಲೋಕಲ್ ಹೆಡ್ ಆಫೀಸ್ ಡೆಪ್ಯುಟಿ ಜನರಲ್ ಮ್ಯಾನೇಜರ್ ಜಗದೀಶ್, ನಟ ಶಿವರಾಜ್, ಅಯೋಗ್ಯ-2 ಸಿನಿಮಾ ತಂಡದ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

ಎಕ್ಸ್‌ಪೋದಲ್ಲಿ ನೂರಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಕಂಪನಿಗಳು, ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಫರ್ನಿಚರ್, ಪ್ರಮುಖ ಕಾರು ಕಂಪನಿ, ವಸ್ತ್ರ ಮಳಿಗೆಗಳು, ಮನೆಗೆ ಅಗತ್ಯವಿರುವ ಎಲ್ಲ ಮಾದರಿಯ ಲೈಫ್‌ಸ್ಟೈಲ್ ವಸ್ತುಗಳು ಹಾಗೂ ಫುಡ್ ಕೋರ್ಟ್ ಇದೆ.